ಸೆ.7ರಿಂದ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಸೇವೆಗಳು ಆರಂಭ

Public TV
2 Min Read

ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ದೇವಿ ದೇವಸ್ಥಾನ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಸರ್ವ ಸೇವೆಗಳು ಸೋಮವಾರದಿಂದ ಆರಂಭವಾಗಲಿದೆ. ಮುಜರಾಯಿ ಇಲಾಖೆಯ ಕಮಿಷನರ್ ಮೂಕಾಂಬಿಕ ದೇವಸ್ಥಾನಕ್ಕೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ನಿಂದ ದೇವಾಲಯದ ಆದಾಯಕ್ಕೆ ಭಾರೀ ಹೊಡೆತ- ಕಳೆದ ವರ್ಷ ಎಷ್ಟು? ಈ ವರ್ಷ ಎಷ್ಟು ಬಂದಿದೆ?

ಸೋಮವಾರದಿಂದ ಎಲ್ಲಾ ಸೇವೆಗಳನ್ನು ಆರಂಭಿಸಲು ದೇಗುಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲೆಯ ಬೈಂದೂರು ತಾಲೂಕಿನ ಮೂಕಾಂಬಿಕೆ ಸನ್ನಿಧಿ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ವರಮಾನ ಇರುವ ದೇವಸ್ಥಾನ. ಲಾಕ್‍ಡೌನ್ ಆಗಿರೋದರಿಂದ ದೇವಸ್ಥಾನದಲ್ಲಿ ಯಾವುದೇ ಸೇವೆಗಳು ಭಕ್ತರಿಗೆ ಲಭ್ಯವಿರಲಿಲ್ಲ. ಹೀಗಾಗಿ ಕಳೆದ 5 ತಿಂಗಳಿಂದ ಕಾತುರರಾಗಿದ್ದ ಮೂಕಾಂಬಿಕಾ ಭಕ್ತರಿಗೆ ಈ ಆದೇಶ ಹರ್ಷ ತಂದಿದೆ.

ಮೂಕಾಂಬಿಕಾ ಸನ್ನಿಧಾನದಲ್ಲಿ ಕುಂಕುಮಾರ್ಚನೆ, ಲಡ್ಡು ಪ್ರಸಾದ ತುಲಾಭಾರ ಸೇವೆಗಳು ಆರಂಭವಾಗಲಿದೆ. ಕೋವಿಡ್ 19 ನಿಯಮ ಪ್ರಕಾರ ಚಂಡಿಕಾಹೋಮ, ಬೆಳ್ಳಿ ರಥ, ಬಂಗಾರದ ರಥ ಸೇವೆ ನಡೆಸುವುದು ದೇವಸ್ಥಾನಕ್ಕೆ ಸವಾಲಾಗಿದೆ. ಈ ಸೇವೆಗಳಲ್ಲಿ ಎಷ್ಟು ಜನರಿಗೆ ಅವಕಾಶ ಕೊಡಬೇಕು ಎಂಬ ಬಗ್ಗೆ ದೇವಸ್ಥಾನಕ್ಕೆ ಸಾಕಷ್ಟು ಗೊಂದಲ ಇದೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಅರ್ಚಕರು ಜಿಲ್ಲಾಡಳಿತ ಚರ್ಚೆ ನಡೆಸಿ ನಿಯಮಗಳನ್ನು ರೂಪಿಸಲಿದ್ದಾರೆ.

ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಮಧ್ಯಾಹ್ನ ಬರುವ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಇದೆ. ರಾತ್ರಿ ಊಟದ ವ್ಯವಸ್ಥೆ ಸದ್ಯಕ್ಕೆ ಇಲ್ಲ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಸುತಗುಂಡಿ ಮಾಹಿತಿ ನೀಡಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಎಲ್ಲಾ ಸೇವೆಗಳು ಆರಂಭವಾದರೂ ಕೇರಳ, ತಮಿಳುನಾಡು ಭಕ್ತರು ಸದ್ಯಕ್ಕೆ ಬರುವ ಲಕ್ಷಣ ಕಾಣಿಸುತ್ತಿಲ್ಲ.

ನಾನು ತಿಂಗಳಿಗೆ ಒಂದು ಬಾರಿಯಾದರೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನವನ್ನು ಮಾಡುತ್ತೇನೆ. ಆದರೆ ಕಳೆದ 5 ತಿಂಗಳಿಂದ ದೂರದಲ್ಲಿ ನಿಂತು ದೇವರ ದರ್ಶನ ಮಾಡುತ್ತಿದ್ದೆ. ಇದರಿಂದ ಮನಸ್ಸಿಗೆ ಬಹಳ ಬೇಸರವಾಗುತ್ತಿತ್ತು. ದೇವಸ್ಥಾನದಲ್ಲಿ ಅಪ್ರದಕ್ಷಿಣೆ ಮಾಡುವುದು ಮನಸ್ಸಿಗೆ ಕಿರಿಕಿರಿ ಮಾಡುತ್ತಿತ್ತು. ಇದೀಗ ದೇವಸ್ಥಾನದಲ್ಲಿ ದೇವರ ಸೇವೆಗಳು ಆರಂಭವಾಗುತ್ತದೆ ಎಂದು ಕೇಳಿ ಖುಷಿಯಾಗಿದೆ. ದೇವರನ್ನು ಹತ್ತಿರದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ಅದರಲ್ಲೂ ಆಷಾಢ, ಶ್ರಾವಣ ಮಾಸದಲ್ಲಿ ದೇವಿ ದೇವಸ್ಥಾನಗಳಿಗೆ ಹಲವಾರು ವರ್ಷಗಳಿಂದ ಭೇಟಿ ಕೊಡುತ್ತಿದ್ದೇನೆ. ಮೂಕಾಂಬಿಕೆ ಸನ್ನಿಧಿಯಲ್ಲಿ ಸೇವೆಗಳು ಆರಂಭವಾಗಿದೆ ಎಂದು ತಿಳಿದು ಬಹಳ ಸಂತೋಷವಾಗುತ್ತಿದೆ ಎಂದು ಮೂಕಾಂಬಿಕೆಯ ಭಕ್ತೆ ಸಂಧ್ಯಾ ರಮೇಶ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *