ಸೂರಿಲ್ಲದ ಎಲ್ಲಾ ವರ್ಗದ ಜನರಿಗೂ ಮನೆ ಭಾಗ್ಯ: ಸಚಿವ ವಿ.ಸೋಮಣ್ಣ

Public TV
3 Min Read

ಚಿತ್ರದುರ್ಗ: ಸೂರಿಲ್ಲದ ಎಲ್ಲಾ ವರ್ಗದ ಜನರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು ರಾಜ್ಯದಲ್ಲಿ 65 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಕ್ರೀಡಾಂಗಣದಲ್ಲಿ ದೇವರಾಜ ಅರಸು ವಸತಿ ಯೋಜನೆಯಡಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ 4,448 ಮನೆಗಳಿಗೆ ಮಂಜೂರಾತಿ ಆದೇಶ ನೀಡಿ ಮಾತನಾಡಿದರು. ರಾಜ್ಯದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಯಾರಿಗೆ ಸೂರಿಲ್ಲ ಅಂತಹ ಎಲ್ಲಾ ಜನಾಂಗದವರನ್ನು ಗುರತಿಸಿ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ. ಇದಕ್ಕಾಗಿ ಎಲ್ಲಾ ತಹಶೀಲ್ದಾರರು ಸ್ಥಳವನ್ನು ಗುರುತಿಸಿ ನಿವೇಶನ ನೀಡುವ ಕೆಲಸವನ್ನು ಮಾಡಬೇಕಾಗಿದೆ ಎಂದರು.

ಹಿರಿಯೂರು ಕ್ಷೇತ್ರದಲ್ಲಿ ಹೆಚ್ಚು ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿದ್ದು ಇವರಿಗೆ ಸೂರನ್ನು ಕಲ್ಪಿಸಲು 4,448 ಜನರಿಗೆ ದೇವರಾಜ ಅರಸು ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಳ್ಳಲು ಮಂಜೂರಾತಿ ಆದೇಶ ನೀಡಲಾಗುತ್ತಿದೆ. ಇದಲ್ಲದೆ ಹಿರಿಯೂರು ಪಟ್ಟಣದಲ್ಲಿ ವಾಸಿಸುವವರಿಗೂ ಸುಮಾರು 3 ಸಾವಿರದಷ್ಟು ಮನೆಗಳನ್ನು ನೀಡಲಾಗುತ್ತಿದೆ. ಇಂತಹ ಬಡವರಿಗೆ ವಸತಿ ನೀಡಲಾಗುತ್ತಿರುವುದು ಬಹಳ ಸಂತೋಷವನ್ನುಂಟು ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಬೆಳ್ಳಂದೂರು ಡಿನೋಟಿಫಿಕೇಷನ್ ಕೇಸ್: ಸಿಎಂ ಯಡಿಯೂರಪ್ಪಗೆ ಸಂಕಷ್ಟ

ಈಗ ಮಂಜೂರಾತಿ ನೀಡಿರುವ ಮನೆಗಳ ನಿರ್ಮಾಣವನ್ನು ಆರು ತಿಂಗಳಲ್ಲಿ ಮುಕ್ತಾಯ ಮಾಡಬೇಕಾಗಿದ್ದು, ಇದಕ್ಕಾಗಿ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಈ ತಾಲ್ಲೂಕನ್ನು ದತ್ತುಪಡೆದು ಯೋಜನೆಯಡಿ ಮಂಜೂರಾದ ಎಲ್ಲಾ ಮನೆಗಳನ್ನು ನಿಗಧಿತ ಅವಧಿಯಲ್ಲಿ ಮುಕ್ತಾಯ ಮಾಡಲು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು ಈ ಹಿಂದೆ ಬಸವ ವಸತಿ ಯೋಜನೆಯಡಿ ಮಂಜೂರಾತಿ ನೀಡಲಾಗಿದ್ದ ಮನೆಗಳಿಗೆ ವಿವಿಧ ಹಂತದ ಕಂತುಗಳನ್ನು ಬಿಡುಗಡೆ ಮಾಡಲಾಗಿರುವುದಿಲ್ಲ. ಆದರೆ ಯಾವ ಮನೆಗಳಿಗೆ ಸರಿಯಾದ ದಾಖಲೆ ಇದೆ, ಅದನ್ನು ವಿಷಲ್ ಆಪ್ಯ್‍ನಲ್ಲಿ ಅಪ್‍ಲೋಡ್ ಮಾಡಿದ 2 ನಿಮಿಷದಲ್ಲಿ ವಿವಿಧ ಹಂತದ ಕಂತುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದನ್ನು ಯಾರು ಸಹ ತಡೆಹಿಡಿದಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರ ವಿವಿಧ ವಸತಿ ಯೋಜನೆಯಡಿ ಬಡವರಿಗೆ ಅನುಕೂಲವಾಗಲೆಂದು ನೊಂದಣಿ ಇಲಾಖೆಯಲ್ಲಿ ಸಾಮಾನ್ಯರಿಗೆ 2 ಸಾವಿರ ಹಾಗೂ ಪರಿಶಿಷ್ಟ ಜಾತಿ, ಪಂಗಡದವರಿಗೆ 1 ಸಾವಿರ ಕ್ರಯಪತ್ರ ಶುಲ್ಕ ಭರಿಸಿದಲ್ಲಿ ಕ್ರಯಪತ್ರವನ್ನು ಮಾಡಿಕೊಡಲಾಗುತ್ತದೆ, ಇದರ ನೊಂದಣಿಗೆ 120 ರೂ. ಮಾತ್ರ ನೊಂದಣಿ ಶುಲ್ಕವನ್ನು ನಿಗದಿ ಮಾಡಿದೆ ಎಂದರು.

ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಗೆ 20,544 ಮನೆಗಳು ಮಂಜೂರಾಗಿದ್ದು ಒಟ್ಟು 1,67,500 ರೂ.ಗಳನ್ನು ಪ್ರತಿ ಘಟಕಕ್ಕೆ ನೀಡಲಾಗುತ್ತದೆ. ಇದರಲ್ಲಿ 27500 ನರೆಗಾದಡಿ ಹಾಗೂ 20000 ಸ್ವಚ್ಚ ಭಾರತ ಅಭಿಯಾನದಡಿ ನೀಡಲಾಗುತ್ತದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸುಮಾರು 5 ಲಕ್ಷ ಮನೆಗಳು ಮಂಜೂರಾಗಿದ್ದು ಮುಂದಿನ ದಿನಗಳಲ್ಲಿ ಸೂರಿಲ್ಲದ ಎಲ್ಲರಿಗೂ ಮನೆಗಳು ದೊರೆಯಲಿವೆ ಎಂದು ತಿಳಿಸಿದರು.ಇದನ್ನೂ ಓದಿ: ಮೂರೇ ದಿನದಲ್ಲಿ 67 ಹಾವು ರಕ್ಷಣೆ ಮಾಡಿದ ರಾಯಚೂರಿನ ಉರಗ ತಜ್ಞರು

ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಕ್ಷೇತ್ರದಲ್ಲಿ ಗೊಲ್ಲ, ದೊಂಬಿದಾಸರು, ಯಳವರು ಹಾಗೂ ಜೋಗಿ ಜನಾಂಗದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನರು ಇದ್ದಾರೆ. ಇವರಿಗಾಗಿ ದೇವರಾಜ ಅರಸು ವಸತಿ ಯೋಜನೆಯಡಿ 4,448 ಮನೆಗಳನ್ನು ಮಂಜೂರು ಮಾಡಲಾಗಿದೆ. ಈ ಬಗ್ಗೆ ಕಳೆದ ಒಂದೂವರೆ ವರ್ಷದ ಹಿಂದೆಯೇ ವಸತಿ ಸಚಿವರು ಮಂಜೂರಾತಿಗೆ ಕ್ರಮ ವಹಿಸಿದ್ದರ ಫಲವಾಗಿ ಮನೆಗಳು ಮಂಜೂರಾಗಿವೆ ಎಂದರು.

ಅಲೆಮಾರಿಗಳಾಗಿದ್ದರಿಂದ ಇವರಿಗೆ ಸ್ವಂತ ಸೂರು ಇರುವುದಿಲ್ಲ. ಕ್ಷೇತ್ರಕ್ಕೆ ಭೇಟಿ ನೀಡಿದಾಗ ಅನೇಕ ಜನರು ಮನೆಗಾಗಿ ಕೇಳುತ್ತಿದ್ದರು. ಈ ಬಗ್ಗೆ ವಸತಿ ಸಚಿವರ ಗಮನಕ್ಕೆ ತಂದು ಇಷ್ಟು ಮನೆಗಳನ್ನು ಮಂಜೂರಾತಿ ಮಾಡಿಸಲು ಸಹಕಾರಿಯಾಗಿದೆ. ಪ್ರತಿಯೊಬ್ಬರಿಗೂ ಆರೋಗ್ಯ, ಶಿಕ್ಷಣದ ಜೊತೆಗೆ ಸ್ವಂತ ಸೂರು ಅಷ್ಟೆ ಮುಖ್ಯವಾಗಿರುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮೊದಲು ಹೊರ ಹೋಗುವ ಸ್ಪರ್ಧಿ ಯಾರು ಗೊತ್ತಾ?

ಅಲೆಮಾರಿ ಜನಾಂಗದವರ ಜೊತೆಗೆ ಇತರೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಸಾಮಾನ್ಯ ವರ್ಗದವರಿಗೂ ಮನೆಗಳನ್ನು ನೀಡಲು ಸರ್ಕಾರದ ಗಮನ ಸೆಳೆಯಲಾಗುತ್ತದೆ. ವಸತಿ ಯೋಜನೆಯಡಿ ನೀಡಲಾಗುವ ಅನುದಾನದ ಜೊತೆಗೆ ತಾವು ಸಹ ಹಣವನ್ನು ಹಾಕಿ ಅತ್ಯುತ್ತಮವಾದ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ತಿಳಿಸಿದರು.

ಯಾದವ ಮಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳಾದ ಪರಶುರಾಂಗೌಡ, ಮಹದೇವ ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ, ತಹಶೀಲ್ದಾರ್ ಶಿವಕುಮಾರ್, ತಾಪಂ ಇಒ ಈಶ್ವರ ಪ್ರಸಾದ್, ಬಿಸಿಎಂ ಅಧಿಕಾರಿ ಅವೀನ್, ಮುಖಂಡರಾದ ಡಿ.ಟಿ.ಶ್ರೀನಿವಾಸ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *