ಸುದೀರ್ಘ 11 ಗಂಟೆಗಳ ಸಭೆ ಯಶಸ್ವಿ- ಗಡಿಯಿಂದ ಹಿಂದೆ ಸರಿಯಲು ಚೀನಾ ಸೇನೆ ಒಪ್ಪಿಗೆ

Public TV
2 Min Read

– ಪಾಂಗೊಂಗ್ ಸರೋವರದ ಬಳಿ ಸುಧಾರಿಸದ ಪರಿಸ್ಥಿತಿ
– ಚೀನಾ ನಂಬೋದು ಕಷ್ಟ, ಗಡಿಯಲ್ಲಿ ಯಥಾ ಸ್ಥಿತಿ ಕಾಯ್ದುಕೊಂಡ ಭಾರತ

ನವದೆಹಲಿ: ಸುಧೀರ್ಘ 11 ಗಂಟೆಗಳ ಸಭೆ ಬಳಿಕ ವಾಸ್ತವ ಗಡಿ ರೇಖೆಯಿಂದ ಹಿಂದೆ ಸರಿಯಲು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಒಪ್ಪಿಕೊಂಡಿದ್ದು, ಮಂಗಳವಾರ ನಡೆದ ಸಭೆ ಭಾಗಶಃ ಯಶಸ್ವಿಯಾಗಿದೆ ಎಂದು ಭಾರತೀಯ ಸೇನಾ ಮೂಲಗಳು ಹೇಳಿವೆ.

ಜೂನ್ 15ರಂದು ಪೂರ್ವ ಲಡಾಕ್‍ನ ಗಡಿ ಪ್ರದೇಶದಲ್ಲಿ ಸೈನಿಕರ ನಡುವೆ ಸಂಘರ್ಷದ ಬಳಿಕ ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರಣಿ ಸಭೆಗಳು ನಡೆಯುತ್ತಿದ್ದು, ಮಂಗಳವಾರ ಲಡಾಕ್‍ನ ಚುಶುಲ್ ಪ್ರದೇಶದಲ್ಲಿ ಮೂರನೇ ಹಂತದ ಮಿಲಿಟರಿ ಮಾತುಕತೆ ನಡೆಯಿತು. ಭಾರತದಿಂದ ಲೆಫ್ಟಿನೆಂಟ್ ಜನರಲ್ ಹರೇಂದ್ರ ಸಿಂಗ್ ಮತ್ತು ಚೀನಾ ಸೇನೆ ಪರ ಮೇಜರ್ ಜನರಲ್ ಲಿಯು ಲೀನ್ ಭಾಗಿಯಾಗಿದ್ದರು. ಉದ್ವಿಗ್ನತೆಯಲ್ಲಿರುವ ಭಾರತ- ಚೀನಾ ಗಡಿ ಪ್ರದೇಶದಲ್ಲಿ ಶಾಂತಿ ಕಾಪಡಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ಸಭೆಯಲ್ಲಿ ನಡೆದಿದೆ ಎನ್ನಲಾಗಿದೆ.

ಬೆಳಗ್ಗೆ 10.30ಕ್ಕೆ ಆರಂಭವಾಗಿದ್ದ ಸಭೆ ರಾತ್ರಿ ಹನ್ನೊಂದು ಗಂಟೆವರೆಗೂ ನಡೆದಿದ್ದು, ಸುಧೀರ್ಘ ಹನ್ನೊಂದು ಗಂಟೆಗಳ ಬಳಿಕ ಭಾರತದ ಆಕ್ರಮಿತ ಪ್ರದೇಶ ಹಾಗೂ ವಾಸ್ತವ ಗಡಿ ರೇಖೆಯಿಂದ ಹಿಂದೆ ಸರಿಯಲು ಚೀನಾ ಸೇನೆ ಒಪ್ಪಿಕೊಂಡಿದೆ ಎಂದು ಮೂಲಗಳ ಹೇಳಿವೆ.

ಗಲ್ವಾನ್ ಕಣಿವೆಯಲ್ಲಿರುವ ಪಾಯಿಂಟ್ ನಂಬರ್ 14,15 ಹಾಗೂ 17ರಿಂದ ಸೇನೆ ಹಿಂದೆ ಪಡೆಯಲು ಹಾಗೂ ಗಡಿ ಪ್ರದೇಶ ಎಂದು ವಾದಿಸುತ್ತಿರುವ ಭಾರತದ ವಿವಾದಿತ ಪ್ರದೇಶದಿಂದಲೂ ಹಿಂದೆ ಸರಿಯಲು ಮೇಜರ್ ಜನರಲ್ ಲಿಯು ಲೀನ್ ಸಮ್ಮತಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಭಾರತ ಅಥಾವ ಚೀನಾ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

ಈ ನಡುವೆ ಮೇ 5 ರಂದು ನಡೆದ ಹಿಂಸಾತ್ಮಕ ಘರ್ಷಣೆಯ ಮೂಲ ಪಾಂಗೊಂಗ್ ಸರೋವರದ ಬಳಿ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಇನ್ನೂ ಎರಡು ಸೇನೆಗಳು ಮುಖಾಮುಖಿಯಲ್ಲಿದ್ದು. ಮಾತುಕತೆ ಬಳಿಕ ಈ ತೀವ್ರತೆ ಕಡಿಮೆ ಮಾಡಬಹುದು ಎನ್ನಲಾಗಿದೆ. ಆದರೆ ಚೀನಾ ಸೇನೆ ಮಾತ್ರ ಈವರೆಗೂ ಪಾಂಗೊಂಗ್ ಸರೋವರದ ಬಳಿ ಹಿಂದೆ ಸರಿದಿಲ್ಲ.

ಚೀನಾ ನಂಬುವುದು ಕಷ್ಟ
ಮಾತುಕತೆ ಬಳಿಕವೂ ಭಾರತೀಯ ಸೇನೆ ತಮ್ಮ ಪಡೆಗಳನ್ನು ಹಿಂದೆ ಪಡೆದುಕೊಂಡಿಲ್ಲ. ಗಡಿಯಲ್ಲಿ ಯಥಾಸ್ಥಿತಿಯನ್ನು ಮುಂದುವರಿಸುವುದಾಗಿ ಸೇನಾ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಕಾರಣ ಹಿಂದೆ ನಡೆದ ಎರಡು ಮಾತುಕತೆಯಲ್ಲೂ ಚೀನಾ ಮಾತುಕತೆ ಒಪ್ಪಂದವನ್ನು ಉಲ್ಲಂಘಿಸಿತ್ತು. ಹೀಗಾಗಿ ಇದೀಗ ಕಟ್ಟೆಚ್ಚರ ವಹಿಸಲಾಗಿದೆ.

ಲಡಾಕ್ ನಲ್ಲಿ ಉದ್ವಿಗ್ನತೆ ಹಿನ್ನೆಲೆ ಜೂನ್ 6 ರಂದು ಮೊದಲ ಸಭೆ ನಡೆಸಲಾಗಿತ್ತು. ಈ ವೇಳೆ ಪೀಪಲ್ಸ್ ಲಿಬರೇಶನ್ ಆರ್ಮಿ ತನ್ನ ಸೇನೆಯನ್ನು ಹಿಂಪಡೆಯುವ ಭರವಸೆ ನೀಡಿತ್ತು. ಆದರೆ ಮಾತುಕತೆ ಬಳಿಕವೂ ಗಡಿ ನಿಯಮಗಳನ್ನು ಉಲ್ಲಂಘಿಸಿದ್ದ ಚೀನಾ, ಪಾಯಿಂಟ್ 14 ಅತಿಕ್ರಮಣ ಮಾಡಿಕೊಂಡು ಭಾರತೀಯ ಸೈನಿಕರ ಜೊತೆ ಜೂನ್ 15 ರಂದು ಘರ್ಷಣೆ ನಡೆಸಿತ್ತು ಇದರಿಂದ ಭಾರತದ 20 ಯೋಧರು ಸಾವನ್ನಪ್ಪಿದ್ದರು.

ಘರ್ಷಣೆ ಬಳಿಕ ಜೂನ್ 22 ರಂದು ಮತ್ತೊಂದು ಮಿಲಿಟರಿ ಸಭೆಯನ್ನು ನಡೆಸಲಾಗಿತ್ತು. ಮಾತುಕತೆ ನಡುವೆಯೇ ಚೀನಾ ಗಡಿಯಲ್ಲಿ ಭದ್ರತೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದು, ಮೂರನೇ ಮಾತುಕತೆ ಬಳಿಕವೂ ಅಧಿಕೃತವಾಗಿ ಗಡಿಯಿಂದ ಚೀನಾ ಹಿಂದೆ ಸರಿಯುವ ನಂಬಿಕೆ ಇಲ್ಲ. ಈ ಹಿನ್ನಲೆ ಗಡಿಯಿಂದ ಚೀನಾ ಹಿಂದೆ ಸರಿಯುವ ಭರವಸೆ ನೀಡಿದ್ದರೂ ಚೀನಾ ಸೇನೆ ನಡೆ ಆಧರಿಸಿ ಭಾರತೀಯ ಸೇನೆ ನಿರ್ಧಾರ ತೆಗೆದುಕೊಳ್ಳಲು ತಿರ್ಮಾನಿಸಿದೆ.

Share This Article
Leave a Comment

Leave a Reply

Your email address will not be published. Required fields are marked *