ಸಿನಿಮಾ ವಿತರಕ ದೀಪಕ್ ಗಂಗಾಧರ್ ಈಗ ನಿರ್ದೇಶಕ

Public TV
2 Min Read

ಣ್ಣದ ಲೋಕದ ಸೆಳೆತಕ್ಕೆ ಒಮ್ಮೆ ಒಳಗಾದರೆ ಅದು ನಮ್ಮನ್ನು ಮತ್ತೆ ಮತ್ತೆ ಕೈ ಬೀಸಿ ಕರೆಯುತ್ತಲೇ ಇರುತ್ತೆ. ಅದರಲ್ಲೂ ಚಿತ್ರರಂಗದಲ್ಲೇ ಒಂದಲ್ಲ ಒಂದು ರೀತಿಯಲ್ಲಿ ಸಕ್ರಿಯರಾದವರಿಗೆ ಇನ್ನೇನಾದರೂ ಮಾಡಬೇಕೆಂಬ ತುಡಿತ ಸದಾ ಇದ್ದೇ ಇರುತ್ತೆ. ಈ ತುಡಿತವೇ ಚಂದನವನದಲ್ಲಿ ಇಷ್ಟು ದಿನ ತೆರೆ ಹಿಂದೆಯಿದ್ದ ಪ್ರತಿಭೆಯನ್ನು ಮುನ್ನೆಲೆಗೆ ತರಲು ಹೊರಟಿದೆ. ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಿನಿಮಾ ವಿತರಕನಾಗಿ ಗುರುತಿಸಿಕೊಂಡಿದ್ದ ದೀಪಕ್ ಗಂಗಾಧರ್ ನಿರ್ದೇಶನಾಗಬೇಕೆಂಬ ಕನಸ್ಸನ್ನು ನನಸು ಮಾಡಲು ಹೊರಟಿದ್ದು, ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ.

ದೀಪಕ್ ಗಂಗಾಧರ್ ಸ್ಯಾಂಡಲ್‍ವುಡ್‍ನಲ್ಲಿ ಸಿನಿಮಾ ವಿತರಕರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮದೇ ಆದ ದೀಪಕ್ ಗಂಗಾಧರ್ ಮೂವೀಸ್ ಸಂಸ್ಥೆಯನ್ನು ಹೊಂದಿರೋ ಇವರು ನನ್ನ ಪ್ರಕಾರ, ಕಾಳಿದಾಸ ಕನ್ನಡ ಮೇಸ್ಟ್ರು, ಅಮರ್, ಯಜಮಾನ, ಸೈರಾ ನರಸಿಂಹ ರೆಡ್ಡಿ ಸೇರಿದಂತೆ ಹಲವು ಸಿನಿಮಾಗಳ ವಿತರಕರಾಗಿ ಖ್ಯಾತಿ ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ.

ಮೂಲತಃ ಶಿರಸಿಯವರಾದ ದೀಪಕ್ ಗಂಗಾಧರ್ ಎಂಬಿಎ ಪದವೀಧರರಾಗಿದ್ದಾರೆ. ಸಿನಿಮಾರಂಗದ ಮೇಲಿನ ಸೆಳೆತ, ನಿರ್ದೇಶಕನಾಗಬೇಕೆಂಬ ಕನಸಿನಿಂದ ಪದವಿ ಮುಗಿದ ನಂತರ ತೂಗುದೀಪ ಪ್ರೊಡಕ್ಷನ್ ಗರಡಿಯಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಚಂದನವನಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಎಂಟ್ರಿ ಕೊಟ್ಟ ದೀಪಕ್ ಗಂಗಾಧರ್ ಎಂ.ಡಿ.ಶ್ರೀಧರ್, ಕವಿರಾಜ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿ ನಿರ್ದೇಶನದ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಎಂಟು ವರ್ಷಗಳ ಕಾಲ ಚಿತ್ರರಂಗದ ಬೇರೆ ಬೇರೆ ರಂಗದಲ್ಲಿ ಕೆಲಸ ನಿರ್ವಹಿಸಿರೋ ಇವರು ಆ ಎಲ್ಲಾ ಅನುಭವಗಳನ್ನು ತಮ್ಮ ಮೊದಲ ಸಿನಿಮಾಗೆ ಧಾರೆ ಎರೆಯಲು ಹೊರಟಿದ್ದಾರೆ.

ಈಗಾಗಲೇ ತಮ್ಮ ಚೊಚ್ಚಲ ಚಿತ್ರಕ್ಕೆ ನಾಯಕನನ್ನು ಆಯ್ಕೆ ಮಾಡಿದ್ದು, ಡಾರ್ಲಿಂಗ್ ಕೃಷ್ಣ ದೀಪಕ್ ಗಂಗಾಧರ್ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಸ್ವತಃ ತಾವೇ ಕಥೆ ಬರೆದು ನಿರ್ದೇಶನ ಮಾಡಲು ಸಿದ್ದರಾಗಿರೋ ದೀಪಕ್ ಗಂಗಾಧರ್ ನೈಜ ಘಟನೆಯಿಂದ ಸ್ಪೂರ್ತಿ ಪಡೆದು ಕಥೆ ಹೆಣೆದಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು, ಶೀಘ್ರದಲ್ಲೇ ಸೆಟ್ಟೇರಲಿರೋ ಚಿತ್ರಕ್ಕೆ ಟೈಟಲ್ ಫೈನಲ್ ಆಗಬೇಕಿದೆ.

ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೂಡಿ ಬರಲಿದ್ದು, ತಾರಾಬಳಗದ ಹುಡುಕಾಟದಲ್ಲಿರೋ ಚಿತ್ರತಂಡ ಸ್ಯಾಂಡಲ್‍ವುಡ್ ಸ್ಟಾರ್ ನಟಿಯನ್ನು ಕರೆತರುವ ಆಲೋಚನೆಯಲ್ಲಿದೆ. ದೀಮಾ ಎಂಟಟೈನ್ಮೆಂಟ್ ಮತ್ತು ಎಲ್‍ಎನ್‍ಆರ್ ಪ್ರೊಡಕ್ಷನ್ಸ್ ಬ್ಯಾನರ್ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮದನ್ ಕುಮಾರ್, ಲಕ್ಷ್ಮೀ ನಾರಾಯಣ ರಾಜು ಅರಸು ಬಂಡವಾಳ ಹೂಡುತ್ತಿದ್ದಾರೆ. ಒಟ್ಟಿನಲ್ಲಿ ನಿರ್ದೇಶಕನಾಗಿ ಚಂದನವನದಲ್ಲಿ ಹೆಸರು ಮಾಡಬೇಕೆಂಬ ತಮ್ಮ ಕನಸು ಹಲವು ವರ್ಷಗಳ ನಂತರ ನನಸಾಗುತ್ತಿರುವ ಸಂತಸದಲ್ಲಿದ್ದಾರೆ ದೀಪಕ್ ಗಂಗಾಧರ್.

Share This Article
Leave a Comment

Leave a Reply

Your email address will not be published. Required fields are marked *