ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್: ಹೆಚ್. ವಿಶ್ವನಾಥ್

Public TV
2 Min Read

– ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಟ್ರಂಪ್ ಎಂದು ಎಂಎಲ್‍ಸಿ ಎಚ್ ವಿಶ್ವನಾಥ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಟ್ರಂಪ್ ಇದ್ದಂತೆ. ಅಲ್ಲಿನ ಟ್ರಂಪಾಯಣದಂತೆ ಇಲ್ಲಿ ಸಿದ್ದರಾಮಾಯಣ ನಡೆಯುತ್ತಿದೆ. ಟ್ರಂಪ್ ಕೂಡ ಸೋಲು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅದೇ ರೀತಿ ಸಿದ್ದರಾಮಯ್ಯ ಕೂಡ ಸೋಲನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯಗೆ ಕಾಂಗ್ರೆಸ್ ಸಂಸ್ಕಾರ ಸಂಸ್ಕೃತಿ, ಸಿದ್ಧಾಂತವೇ ಗೊತ್ತಿಲ್ಲ. ಅಚಾನಕ್ ಆಗಿ ನಾವು ಅವರನ್ನು ಕಾಂಗ್ರೆಸ್ಸಿಗೆ ಕರೆದುಕೊಂಡು ಬಂದಿದ್ದಕ್ಕೆ ಸಿಎಂ ಆದವರು. ಅದೃಷ್ಟದಿಂದ ಸಿದ್ದರಾಮಯ್ಯ ಸಿಎಂ ಆದವರು. ಅವರು ಯಾರ ಯಶಸ್ಸನ್ನು ಸಹಿಸುವುದಿಲ್ಲ. ತಮ್ಮ ಸಮುದಾಯದ ಸ್ವಾಮೀಜಿಯವರ ಹೋರಾಟವನ್ನು ಅವರು ಸಹಿಸುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಸ್ವಾರ್ಥ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದರು.

ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ. ಯಡಿಯೂರಪ್ಪ ನೋಡಿದ ಕೂಡಲೇ ಅವರಿಗೆ ಸಿಎಂ ಎಂಬ ಮಿಠಾಯಿ ನೆನಪಾಗುತ್ತದೆ. ಅದನ್ನು ಮತ್ತೊಮ್ಮೆ ಪಡೆಯಬೇಕೆಂಬ ಚಡಪಡಿಕೆ. ಹೀಗಾಗಿ ಸಿಎಂ ಬದಲಾವಣೆ ಬಗ್ಗೆ ಆಗಾಗಾ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಸಿದ್ದರಾಮಯ್ಯರಿಂದ ಅಹಿಂದ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಯಾವ ಅಹಿಂದ ಹೋರಾಟ ಅಲ್ಲ. ಇದು ಸಿದ್ದರಾಮಯ್ಯ ಹಾಗೂ ಮಹದವೇಪ್ಪ ಅವರ ಸ್ವಾರ್ಥದ ಹೋರಾಟ. ಸ್ವಾರ್ಥಕ್ಕಾಗಿ ಸಿದ್ದರಾಮಯ್ಯ ಹಿಂದ ಅಹಿಂದ ಎಂದು ಚಡಪಡಿಸುತ್ತಿದ್ದಾರೆ. ಅವರಿಗೆ ಅಸ್ತಿತ್ವ ಅಭದ್ರತೆ ಕಾಡುತ್ತಿದೆ. ಕುರುಬ ಸಮಾಜದ ಎಸ್‍ಟಿ ಹೋರಾಟ ಅವರಿಲ್ಲದೆ ಯಶಸ್ವಿಯಾಗಿದೆ. ಲಕ್ಷಾಂತರ ಜನರು ಸೇರಿಸಿ ಯಶಸ್ಸು ಕಂಡಿದ್ದೇವೆ. ನಾನು ಇಲ್ಲದಿದ್ದರೆ ಆಗಲ್ಲ ತಂದುಕೊಂಡಿದ್ದರು. ಅವರಲ್ಲಿ ನಾನು..ನಾನು ಅನ್ನೋ ಸ್ವಾರ್ಥ ಇತ್ತು. ಸಮುದಾಯ ನನ್ನ ಜೊತೆ ಇಲ್ಲ ಅನ್ನೋದು ಈಗ ಅವರಿಗೆ ಕಾಣುತ್ತಿದೆ ಎಂದರು.

ಡಿಕೆ ಶಿವಕುಮಾರ್ ನಾಯಕತ್ವ ಪ್ರಬಲವಾಗುತ್ತಿದೆ. ಪಕ್ಷ ಹಾಗೂ ಸಮುದಾಯ ಎರಡರಲ್ಲೂ ಸಿದ್ದರಾಮಯ್ಯ ಏಕಾಂಗಿಯಾಗುತ್ತಿದ್ದಾರೆ. ರಾಜಕೀಯ ಅಸ್ತಿತ್ವಕ್ಕೆ ಚಡಪಡಿಕೆ ಶುರುವಾಗಿದೆ. ಯಾವ ಹೋರಾಟ ಮಾಡುತ್ತೀರಾ? ನಾನು ಸಿದ್ದರಾಮಯ್ಯ ಮೈಸೂರಿನಲ್ಲೇ ಓದಿದ್ದು. ಅವರು ಯಾವ ವಿದ್ಯಾರ್ಥಿ ಹೋರಾಟದಲ್ಲೂ ಇರಲಿಲ್ಲ. ತಮ್ಮ ಅಭದ್ರತೆ ಮುಚ್ಚಿಕೊಳ್ಳಲು ಅಹಿಂದ ಬಳಸುತ್ತಿದ್ದಾರೆ. ಅಲ್ಪಸಂಖ್ಯಾತರರನ್ನು ಬಿಟ್ಟು ಹಿಂದ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೆ ಅಲ್ಪಸಂಖ್ಯಾತರನ್ನು ತುಳಿದು ಹಾಕಿದ್ದಾರೆ. ಮುಸ್ಲಿಮರನ್ನು ಸಾಕಷ್ಟು ಬಾರಿ ಸೋಲಿಸಲು ಕಾರಣರಾಗಿದ್ದೀರಿ ಎಂದು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *