ಸಿಡಿ ಕೇಸ್‍ನಲ್ಲಿ ಎಂಟ್ರಿಯಾಯ್ತು ಮಹಿಳಾ ಆಯೋಗ – ಸ್ವಯಂ ಪ್ರೇರಿತ ದೂರು ದಾಖಲು

Public TV
2 Min Read

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹಿಳಾ ಆಯೋಗ ಎಂಟ್ರಿ ಕೊಟ್ಟಿದ್ದು, ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದೆ.

ಈ ಸಂಬಂಧ ಸೋಮವಾರ ಪೊಲೀಸ್ ಆಯುಕ್ತರಿಗೆ ಹಾಗೂ ಗೃಹ ಸಚಿವರಿಗೆ ಮಹಿಳಾ ಆಯೋಗ ಪತ್ರ ಬರೆಯುತ್ತಿದೆ. ಯುವತಿಗೆ ಸೂಕ್ತ ರಕ್ಷಣೆ ಕೊಡುವಂತೆ ಪತ್ರದಲ್ಲಿ ತಿಳಿಸಲಾಗುತ್ತದೆ.

ವೀಡಿಯೋದಲ್ಲಿ ಯುವತಿ ಆತ್ಮಹತ್ಯೆಯ ಬಗ್ಗೆ ಮಾತಾನಾಡಿರೋದ್ರಿಂದ ಮಹಿಳಾ ಆಯೋಗದಿಂದ ಧೈರ್ಯ ತುಂಬುವ ಕೆಲಸ ಮಾಡ್ತೀವಿ. ಈಗಾಗಲೇ ಸ್ವಯಂ ಪ್ರೇರಿತ ದೂರು ಕೂಡ ದಾಖಲು ಮಾಡಿಕೊಂಡಿದ್ದೇವೆ. ಯುವತಿಗೆ ಧೃತಿಗೆಡಬಾರದು ಆಕೆಗೆ ಸೂಕ್ತ ರಕ್ಷಣೆ ಕೊಡುವಂತೆ ಪತ್ರ ಬರೆಯುತ್ತೇವೆ. ಮಹಿಳಾ ಆಯೋಗ ಈ ಸಂತ್ರಸ್ತೆಯ ಜೊತೆ ಇರುತ್ತೆ ಎಂದು ಪಬ್ಲಿಕ್ ಟಿವಿಗೆ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ಮಾಹಿತಿ ನೀಡಿದ್ದಾರೆ.

ಮಾರ್ಚ್ 2ರಂದು ಮಾಜಿ ಸಚಿವರ ಸಿಡಿ ಬಿಡುಗಡೆಗೊಂಡಿತ್ತು. ಈ ಸಿಡಿ ಹೊರಬರುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಯಿತು. ಈ ಸಂಬಂಧ ಮಾತನಾಡಿದ್ದ ರಮೇಶ್, ನನ್ನದೇನೂ ತಪ್ಪಿಲ್ಲ. ನಾನು ಯಾವ ತಪ್ಪು ಮಾಡಿಲ್ಲ ಎಂದು ಹೇಳಿಕೆ ನೀಡಿದ್ದರು. ಅದಾದ ಬಳಿಕ ಸಿಡಿ ಬಗ್ಗೆ ಭಾರೀ ಚರ್ಚೆಯಾಗಿತ್ತು. ಶುಕ್ರವಾರವಷ್ಟೇ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸುವುದಾಗಿ ಗೃಹ ಸಚಿವರು ಬೊಮ್ಮಾಯಿ ಹೇಳಿದ್ದರು. ಅದರಂತೆ ನಿನ್ನೆ ತಾನೇ ಎಸ್‍ಐಟಿ ಟೀಂ ರಚನೆಗೊಂಡಿದ್ದು, ಮೊದಲ ದಿನವೇ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.

ಎಸ್‍ಐಟಿ ತನಿಖೆಯ ಬೆನ್ನಲ್ಲೇ ಇತ್ತ ಇಂದು ಸಂಜೆ ರಮೇಶ್ ಜಾರಕಿಹೊಳಿ ಅವರು ತಮ್ಮ ಆಪ್ತ ನಾಗರಾಜ್ ಮೂಲಕ ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಪರಿಚಿತರ ಮೇಲೆ ಎಫ್‍ಐಆರ್ ಕೂಡ ದಾಖಲಾಗಿದೆ. ಈ ಮಧ್ಯೆ ಯುವತಿ  ವೀಡಿಯೋ ಬಿಡುಗಡೆ ಮಾಡಿ, ನನಗೆ ಯಾವುದೇ ರಾಜಕೀಯ ನಾಯಕರ ಬೆಂಬಲವಿಲ್ಲ. ರಮೇಶ್ ಜಾರಕಿಹೊಳಿ ವೀಡಿಯೋ ರಿಲೀಸ್ ಮಾಡಿದ್ದಾರೆ. ಈ ವೀಡಿಯೋದಿಂದ ನನ್ನ ಮಾನ ಹರಾಜಾಗಿದೆ. ನನಗೆ ಕೆಲಸ ಕೊಡಿಸೋದಾಗಿ ಜಾರಕಿಹೊಳಿ ವಂಚಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾಳೆ.

ವೀಡಿಯೋ ಹೇಗೆ ಮಾಡಿದ್ದು ಅಂತಾ ನನಗೆ ಗೊತ್ತಿಲ್ಲ. ನನ್ನ ತಂದೆ ತಾಯಿ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನು ಕೂಡ ಹಲವಾರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ನನಗೆ, ನನ್ನ ಕುಟುಂಬಕ್ಕೆ ರಕ್ಷಣೆ ಕೊಡಿ ಎಂದು ಯುವತಿ ಗೃಹ ಸಚಿವರಿಗೆ ಮನವಿ ಮಾಡಿಕೊಂಡಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *