ಸಿಎಂ ಮುಂದೆಯೇ ಆಕ್ರೋಶ ಹೊರಹಾಕಿದ ಯತ್ನಾಳ್‌

Public TV
1 Min Read

ಬೆಂಗಳೂರು: ನಿರೀಕ್ಷೆಯಂತೆ ರಾಜ್ಯ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟಗೊಂಡಿದೆ. ಸಿಎಂ ವಿರುದ್ಧ ಬಂದಲ್ಲಿ ಹೋದಲ್ಲಿ ಸಿಡಿಮಿಡಿ ಎನ್ನುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇಂದು ಬಿಎಸ್‍ವೈ ಮುಂದೆಯೇ ಆಕ್ರೋಶ ಹೊರಹಾಕಿದ್ದಾರೆ.

ಬಜೆಟ್ ಸಿದ್ಧತೆಗೆ ಮುನ್ನ ಸಿಎಂ ಕರೆದಿದ್ದ ಬಿಜೆಪಿ ಶಾಸಕರ ವಲಯವಾರು ಸಭೆಯಲ್ಲಿ ಪಾಲ್ಗೊಂಡ ಯತ್ನಾಳ್, ನಮ್ಮದೇ ಸರ್ಕಾರದಲ್ಲಿ ನಮ್ಮ ಶಾಸಕರ ಸಮಸ್ಯೆಗಳಿಗೆ ಸ್ಪಂದನೆ ಸಿಗ್ತಿಲ್ಲ. ಅನುದಾನ ನೀಡಿ ಎಂದು ಬೇಡಿಕೊಳ್ಳುವ ಸ್ಥಿತಿ ಬಂದಿದೆ. ಆಡಳಿತ ಪಕ್ಷದ ಶಾಸಕರು ಅನುದಾನಕ್ಕೆ ಬೇಡುವುದು ಅಂದರೆ ಅರ್ಥ ಏನು? ವಿಪಕ್ಷಗಳ ಮುಂದೆ ನಗೆಪಾಟಲಿಗೆ ಈಡಾಗಬೇಕು. ಈ ಸರ್ಕಾರ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡುತ್ತಿಲ್ಲ ಎಂದು ನೇರವಾಗಿ ಹೇಳಿರುವುದಾಗಿ ಮೂಲಗಳು ಪಬ್ಲಿಕ್‌ ಟಿವಿಗೆ ತಿಳಿಸಿವೆ.

ಕೊರೊನಾ ನೆಪ ಹೇಳಿ ಅನುದಾನ ಕೊರತೆ ಮಾಡಿದ್ದಕ್ಕೆ ಬಹುತೇಕ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲ ಸಚಿವರು ಕೈಗೆ ಸಿಗುತ್ತಿಲ್ಲ ಎಂದು ದೂರಿದ್ದಾರೆ.

ಸಿಎಂ ಕರೆದಿದ್ದ ಸಭೆಗೆ ಸಚಿವ ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಎನ್.ವೈ ಗೋಪಾಲ್ ಕೃಷ್ಣ, ಶಿವನಗೌಡ ನಾಯಕ್, ಸೋಮಶೇಖರ್ ರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಆನಂದ್ ಮಾಮನಿ ಸೇರಿ ಹಲವರು ಗೈರಾಗಿದ್ರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, ನಮ್ಮಲ್ಲಿ ನಾಯಕತ್ವ ಕುರಿತ ಚರ್ಚೆಯೇ ಆಗಿಲ್ಲ. ಮುಂದಿನ 2 ವರ್ಷ ಯಡಿಯೂರಪ್ಪ ಅವರೇ ಸಿಎಂ ಎಂದು ಸ್ಪಷ್ಟಪಡಿಸಿದರು. ಯತ್ನಾಳ್ ಹೇಳಿಕೆ ವಿಚಾರವನ್ನು ಕೇಂದ್ರ ಶಿಸ್ತು ಸಮಿತಿ ಗಮನಕ್ಕೆ ತಂದಿದ್ದೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *