ಸಾವನ್ನಪ್ಪಿದ್ದಾಳೆಂದ ವೈದ್ಯರು- ಅಂತ್ಯಸಂಸ್ಥಾರಕ್ಕೆ ಕೊಂಡೊಯ್ಯುವಾಗ ಎಚ್ಚರಗೊಂಡ ಮಹಿಳೆ

Public TV
1 Min Read

– ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಕುಟುಂಬಸ್ಥರು

ಲಕ್ನೋ: ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ಘೋಷಿಸಿದ್ದಾರೆ. ಆದರೆ ಅಂತ್ಯಸಂಸ್ಕಾರಕ್ಕೆ ಕರೆದೊಯ್ಯುವ ವೇಳೆ ಮಹಿಳೆ ಎಚ್ಚರಗೊಂಡಿದ್ದು, ಸ್ಥಳದಲ್ಲಿದ್ದ ಸಂಬಂಧಿಕರು ಬೆಚ್ಚಿಬಿದ್ದಿದ್ದಾರೆ.

ಉತ್ತರ ಪ್ರದೇಶದ ಮೀರತ್‍ನಲ್ಲಿ ಘಟನೆ ನಡೆದಿದ್ದು, ಮಹಿಳೆಯನ್ನು 20 ವರ್ಷ ಆಸ್ಮಾ ಎಂದು ಗುರುತಿಸಲಾಗಿದೆ. ಮವಾನಾ ನಗರದ ಮೊಹಲ್ಲಾ ಮುನ್ನಾಲಾಲ್ ನಿವಾಸಿಯಾಗಿದ್ದಾರೆ. ಆರೋಗ್ಯದಲ್ಲಿ ತುಂಬಾ ಏರುಪೇರಾದ ಕಾರಣ ಆಗಸ್ಟ್ 24ರಂದು ಮಹಿಳೆಯನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬುಧವಾರ ವೈದ್ಯರು ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ್ದಾರೆ. ನಂತರ ಅಂತ್ಯಕ್ರಿಯೆಗಾಗಿ ಮನೆಗೆ ಕೊಂಡೊಯ್ಯುವಾಗ ಮಹಿಳೆ ಎಚ್ಚರಗೊಂಡಿದ್ದಾಳೆ. ರೋಗಗ್ರಸ್ಥ ಮಹಿಳೆಗೆ ದೆಹಲಿಯ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಮಹಿಳೆ ಪ್ರಜ್ಞಾಹೀನವಾಗಿದ್ದು, ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರು ತಿಳಿಸಿದ ಬಳಿಕ ಕುಟುಂಬಸ್ಥರು ಮಹಿಳೆ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲದೆ ದೆಹಲಿಯ ಆಸ್ಪತ್ರೆಯಿಂದ ಮವಾನಾದ ಅವರ ಮನೆಗೆ ಮಹಿಳೆಯನ್ನು ಕೊಂಡೊಯ್ಯುತ್ತಿದ್ದಾಗ ಗಾಜಿಯಾಬಾದ್ ಬಳಿ ಮಹಿಳೆ ಎಚ್ಚರಗೊಂಡಿದ್ದು, ಬದುಕಿರುವ ಕುರಿತ ಲಕ್ಷಣಗಳನ್ನು ತೋರಿಸಿದ್ದಾರೆ. ಕುಟುಂಬಸ್ಥರು ತಕ್ಷಣ ಅಂತ್ಯಸಂಸ್ಕಾರದ ಸಿದ್ಧತೆಯನ್ನು ಮುಂದೂಡಿದ್ದು, ಮನೆಗೆ ಕರೆದೊಯ್ದು ಆಕ್ಸಿಜೆನ್ ವ್ಯವಸ್ಥೆ ಮಾಡಿದ್ದಾರೆ.

ಈ ಕುರಿತ ಸುದ್ದಿ ಹಬ್ಬುತ್ತಿದ್ದಂತೆ ಸ್ಥಳಿಯರೆಲ್ಲ ಮಹಿಳೆ ನೋಡಲು ಅವರ ಮನೆ ಕಡೆ ಧಾವಿಸಿದ್ದಾರೆ. ಘಟನೆ ಕುರಿತು ಮವಾನಾ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಸತೀಶ್ ಭಾಸ್ಕರ್ ಈ ಕುರಿತು ಪ್ರತಿಕ್ರಿಯಿಸಿ, ಇಂತಹ ಘಟನೆ ನಡೆಯಲು ಸಾಧ್ಯವೇ ಇಲ್ಲ. ಇಂತಹ ಸುದ್ದಿಯನ್ನು ನಾವು ಈ ಹಿಂದೆ ಎಂದೂ ಕೇಳಿಲ್ಲ. ಆದರೂ ಕೆಲವು ಬಾರಿ ರೋಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗ ಈ ರೀತಿಯಾಗುತ್ತದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *