ಸಾಲ ಕೊಡಿಸೋದಾಗಿ ಲಕ್ಷಾಂತರ ದೋಖಾ – ಎಸ್‍ಎಂಎಸ್ ಅಸೋಸಿಯೆಟ್ಸ್ ವಿರುದ್ಧ ದೂರು

Public TV
1 Min Read

ಚಾಮರಾಜನಗರ: ಸುಲಭವಾಗಿ ಸಾಲ ಸಿಗುತ್ತದೆ ಎಂಬ ಆಸೆಗೆ ಬಿದ್ದ ಜನರಿಗೆ ಅನಧಿಕೃತ ಖಾಸಗಿ ಸಂಸ್ಥೆಯೊಂದು ಲಕ್ಷಾಂತರ ರೂಪಾಯಿ ಟೋಪಿ ಹಾಕಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಸಾಲ ಕೊಡಿಸುವುದಾಗಿ ಆಮಿಷ ಒಡ್ಡಿದ ಅನಧಿಕೃತ ಖಾಸಗಿ ಸಂಸ್ಥೆಯ ಮಾಲೀಕ ನೂರಾರು ಜನರಿಂದ ಕಮಿಷನ್ ಹಾಗೂ ನೊಂದಣಿ ಶುಲ್ಕದ ರೂಪದಲ್ಲಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದು ಮೋಸ ಹೋದ ಜನ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ವಂಚನೆ ಹೇಗೆ?
ಎಸ್.ಎಂ.ಎಸ್. ಅಸೋಸಿಯೆಟ್ಸ್ ಹೆಸರಿನ ಸಂಸ್ಥೆ, ಉದ್ಯೋಗಿ ಶಶಿಕಲಾ ಎಂಬವರ ಹೆಸರಿನಲ್ಲಿ ಜಿ.ಎಸ್.ಟಿ. ನಂಬರ್ ಪಡೆದಿರುವುದನ್ನು ಬಿಟ್ಟರೆ ಇನ್ನೂ ಯಾವುದೇ ರೀತಿಯ ಸರ್ಕಾರಿ ಸಂಸ್ಥೆಗಳಿಂದ ಪರವಾನಗಿ ಪಡೆದಿಲ್ಲ. ಅಲ್ಲದೆ ನೊಂದವಣಿಯು ಆಗಿಲ್ಲ. ಆದರೂ ಚಾಮರಾಜನಗರ ಕೊಳ್ಳೇಗಾಲ, ಮಳವಳ್ಳಿ, ಟಿ.ನರಸೀಪುರ, ಮೈಸೂರು ಸೇರಿದಂತೆ 15 ಕಡೆ ಬ್ರ್ಯಾಂಚ್ ತೆರೆದು ಖಾಸಗಿ ಬ್ಯಾಂಕುಗಳಿಂದ ವ್ಯಾಪಾರ, ಕೈಗಾರಿಕೆ, ಮನೆ, ವಾಹನ, ಕೃಷಿ ಮತ್ತಿತರ ಸಾಲ ಸೌಲಭ್ಯ ಕೊಡಿಸುವುದಾಗಿ ಜನರನ್ನು ನಂಬಿಸಿದೆ. ಸಂಸ್ಥೆಯ ಬಿಸಿನೆಸ್ ಹೆಡ್ ಎಂದು ಹೇಳಿಕೊಂಡ ಮೋಹನಸುಂದರಂ ಎಂಬಾತ ನೂರಾರು ಮಂದಿಯಿಂದ ತಲಾ 2000 ರೂಪಾಯಿಯಂತೆ ನೊಂದಣಿ ಶುಲ್ಕ ವಸೂಲಿ ಮಾಡಿದ್ದಾನೆ. ಅಲ್ಲದೆ ಕೋಟಿಗಟ್ಟಲೆ ಸಾಲ ಕೊಡಿಸುವುದಾಗಿ ಮುಂಗಡವಾಗಿ ಶೇಕಡಾ ಮೂರರಂತೆ ಲಕ್ಷಾಂತರ ರೂಪಾಯಿ ಕಮಿಷನ್ ವಸೂಲಿ ಮಾಡಿದ್ದಾನೆ.

ಚಾಮರಾಜನಗರ ಹಾಗು ಕೊಳ್ಳೇಗಾಲ ಪೊಲೀಸ್ ಠಾಣೆಗಳಲ್ಲಿ ಈ ಅನಧಿಕೃತ ಖಾಸಗಿ ಸಂಸ್ಥೆಯ ವಿರುದ್ದ ದೂರು ದಾಖಲಿಸಿದ್ದಾರೆ. ಇದೀಗ ಕೊಳ್ಳೇಗಾಲ ಪೊಲೀಸರು ಈ ಸಂಸ್ಥೆಯ ಬಿಸಿನೆಸ್ ಹೆಡ್ ಮೋಹನ ಸುಂದರಂ ಹಾಗು ಉದ್ಯೋಗಿ ಶಶಿಕಲಾ ಎಂಬುವರನ್ನು ಬಂಧಿಸಿದ್ದಾರೆ.

ವಿಷಯ ತಿಳಿದು ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಠಾಣೆಗೆ ಧಾವಿಸಿ, ಈ ಬಗ್ಗೆ ಪ್ರಕರಣ ದಾಖಲಿಸಿ ನೊಂದ ಜನರಿಗೆ ನ್ಯಾಯ ಒದಗಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಕೊಳ್ಳೇಗಾಲ ಪೊಲೀಸರು, ಬಿಸಿನೆಸ್ ಹೆಡ್ ಮೋಹನಸುಂದರಂ ಹಾಗು ಸಂಸ್ಥೆಯ ಉದ್ಯೋಗಿ ಶಶಿಕಲಾ ಎಂಬುವರನ್ನು ಬಂಧಿಸಿ ಇವರ ವಿರುದ್ದ ಮೋಸ ಹಾಗು ನಂಬಿಕೆ ದ್ರೋಹ ಪ್ರಕರಣ ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *