ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಯುವ ವೈದ್ಯೆ ಸಾವು

Public TV
2 Min Read

– ಮದುವೆಯಾಗಿ ವರ್ಷಕ್ಕೆ ಆತ್ಮಹತ್ಯೆ..?

ತಿರುವನಂತಪುರಂ: ವರ್ಷದ ಹಿಂದಷ್ಟೇ ವಿವಾಹವಾಗಿದ್ದ 24 ವರ್ಷದ ಯುವ ವೈದ್ಯೆ ಪತಿಯ ಮನೆಯಲ್ಲೇ ಸಾವನ್ನಪ್ಪಿದ್ದು, ಇದಕ್ಕೂ ಮುನ್ನ ತನಗೆ ನೀಡಿದ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾಳೆ.

ಕೇರಳದ ಕೊಲ್ಲಂ ಜಿಲ್ಲೆಯ ಸಾಸ್ತಂಕೋಟಾ ಬಳಿಯ ಸಾಸ್ತಮ್ನಾಡದಲ್ಲಿ ಘಟನೆ ನಡೆದಿದ್ದು, ಸಾವನ್ನಪ್ಪಿದ 24 ವರ್ಷದ ಯುವ ವೈದ್ಯೆಯನ್ನು ವಿಸ್ಮಯ.ವಿ.ನೈಯರ್ ಎಂದು ಗುರುತಿಸಲಾಗಿದೆ. ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಆ್ಯಂಡ್ ಸರ್ಜರಿ ವಿದ್ಯಾರ್ಥಿನಿಯಾಗಿದ್ದ ವಿಸ್ಮಯ 2020ರ ಮೇ ತಿಂಗಳಲ್ಲಿ ಮೋಟಾರು ವಾಹನ ಇಲಾಖೆಯ ಅಧಿಕಾರಿ ಎಸ್.ಕಿರಣ್‍ಕುಮಾರ್ ಜೊತೆ ವಿವಾಹವಾಗಿದ್ದರು. ಮನೆಯವರು ಅದ್ಧೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು. ದಂಪತಿ ಕೇರಳದ ಕೊಲ್ಲಂನಲ್ಲಿ ವಾಸವಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆ ನಡೆಯುವುದಕ್ಕೂ 2 ದಿನ ಮುಂಚೆ ತನ್ನ ಸೋದರ ಸಂಬಂಧಿಗೆ ಈ ಕುರಿತು ತಿಳಿಸಿದ್ದು, ವರದಕ್ಷಿಣೆ ಸಂಬಂಧ ಪತಿ ಕಿರುಕುಳ ನೀಡುತ್ತಿದ್ದು, ಹಲವು ಬಾರಿ ಹೊಡೆದಿದ್ದಾನೆ ಎಂದು ವಿವರಿಸಿದ್ದಾಳೆ.

ಸೋಮವಾರ ಬೆಳಗ್ಗೆ ಗಂಡನ ಮನೆಯಲ್ಲಿ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ದೇಹದ ಮೇಲೆ ಗಾಯದ ಗುರುತುಗಳಿವೆ. ಸಾವಿಗೂ ಮುನ್ನನ ವಿಸ್ಮಯ ತನ್ನ ಸೋದರ ಸಂಬಂಧಿ ಜೊತೆ ನೋವನ್ನು ತೋಡಿಕೊಂಡಿದ್ದು, ಪತಿಯ ಚಿತ್ರ ಹಿಂಸೆಯನ್ನು ಸಹಿಸಲಾಗುತ್ತಿಲ್ಲ, ವರದಕ್ಷಿಣೆ ಬೇಕೆಂದು ನಿತ್ಯ ಹಿಂಸೆ ನಿಡುತ್ತಿದ್ದಾನೆ ಎಂದು ತಿಳಿಸಿದ್ದಾಳೆ. ಈ ಕುರಿತು ಭಾನುವಾರ ರಾತ್ರಿ ಸಹ ಸೋದರಸಂಬಂಧಿ ಜೊತೆ ಸಾಮಾಜಿಕ ಜಾಲತಾಣಗಳ ಮೂಲಕ ಫೋಟೋಗಳನ್ನು ಹಂಚಿಕೊಂಡಿದ್ದು, ಕಿರುಕುಳ ಸಹಿಸಲಾಗುತ್ತಿಲ್ಲ. ಬಹುಶಃ ಇದೇ ಕೊನೆಯ ಮೆಸೇಜ್ ಆಗಬಹುದು ಎಂದು ಹೇಳಿಕೊಂಡಿದ್ದಳು. ಮರುದಿನ ಬೆಳಗ್ಗೆ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ವಿಸ್ಮಯ ತಂದೆ ತ್ರಿವಿಕ್ರಮನ್ ನೈಯರ್ ಈ ಕುರಿತು ಮಾಹಿತಿ ನೀಡಿದ್ದು, ಈ ಹಿಂದೆ ಸಹ ಆತನ ಹಲ್ಲೆ ಮಾಡಿದ್ದ, ಒಮ್ಮೆ ಅವಳೊಂದಿಗೆ ನಾನು ಮನೆಗೆ ತೆರಳಿದಾಗ ಪಾರ್ಟಿ ಮಾಡಿ, ಎಲ್ಲರೂ ಕುಡಿದಿದ್ದರು. ನಾವು ಮನೆಗೆ ಪ್ರವೇಶಿಸುತ್ತಿದ್ದಂತೆ ಆತ ವಿಸ್ಮಯಳನ್ನು ಹೊಡೆಯಲು ಆರಂಭಿಸಿದ. ಈ ಕುರಿತು ನನ್ನ ಮಗ ಪ್ರಶ್ನಿಸಲು ಹೋದಾಗ ಅವನನ್ನೂ ಹೊಡೆದಿದ್ದ. ಆಗಲೂ ಈ ಕುರಿತು ನಾವು ಪ್ಯಾಟ್ರೋಲ್ ಪೊಲೀಸರಿಗೆ ತಿಳಿಸಿದ್ದೆವು. ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದಿದ್ದೆವು. ಸರ್ಕಲ್ ಇನ್‍ಸ್ಪೆಕ್ಟರ್ ಕಿರಣ್ ಕುಟುಂಬಸ್ಥರನ್ನು ಕರೆದು ಸಂಧಾನ ನಡೆಸಿದ್ದರು. ಬಳಿಕ ನನ್ನ ಮಗ ಇದೊಂದು ಬಾರಿ ಬಿಟ್ಟುಬಿಡಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದ. ಬಳಿಕ ನನ್ನ ಮಗಳು ನಮ್ಮ ಮನೆಯಲ್ಲೇ ಇದ್ದಳು. ಆದರೆ ಎರಡು ತಿಂಗಳ ಹಿಂದೆ ಅವಳು ಬಿಎಎಂಎಸ್ ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗುವಾಗ ಕಿರಣ್ ಅವಳನ್ನು ಮನೆಗೆ ಕರೆದೊಯ್ದಿದ್ದ. ಬಳಿಕ ಅವಳು ನಮ್ಮ ಮನೆಗೆ ಬಂದಿರಲಿಲ್ಲ ಎಂದು ವಿವರಿಸಿದ್ದಾರೆ.

ಈ ಘಟನೆ ನಡೆದ ಬಳಿಕ ವಿಸ್ಮಯ ತನ್ನ ತಾಯಿಗೆ ಮಾತ್ರ ಕರೆ ಮಾಡುತ್ತಿದ್ದಳು. ತಂದೆ, ಸಹೋದರನಿಗೆ ಕರೆ ಮಾಡುತ್ತಿರಲಿಲ್ಲ. ಇದೆಲ್ಲ ನನಗೆ ಈಗ ತಿಳಿದಿದೆ. ಕಿರಣ್ ಹಲ್ಲೆ ಮಾಡಿರುವುದನ್ನು ಅವಳು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಅಲ್ಲದೆ ಎರಡು ದಿನಗಳ ಹಿಂದೆ ನನ್ನ ಸೋದರ ಸಂಬಂಧಿಗೂ ಮೆಸೇಜ್ ಮಾಡಿ, ಕಿರಣ್ ಕೆಲಸಕ್ಕೆ ಹೋದಾಗ ನನ್ನನ್ನು ಮನೆಯಿಂದ ಕರೆದುಕೊಂಡು ಹೋಗು ಎಂದು ತಿಳಿಸಿದ್ದಳು ಎಂದು ವಿವರಿಸಿದ್ದಾರೆ.

ಮರುದಿನ ಬೆಳಗ್ಗೆ ವಿಸ್ಮಯ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಗಳ ಸಾವಿಗೆ ಆಕೆಯ ಪತಿಯೇ ಕಾರಣ, ಮದುವೆ ಸಮಯದಲ್ಲಿ ಒಂದು ಎಕರೆ ಭೂಮಿ, ಒಂದು ಕಾರನ್ನು ನೀಡಲಾಗಿದೆ. ಆದರೂ ಅಳಿಯನ ಹಣದಾಹ ಕಡಿಮೆಯಾಗಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದೀಗ ಆರೋಪಿ ಕಿರಣ್ ಕುಮಾರ್‍ನನ್ನು ಬಂಧಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *