ಸಲಾಕೆ ಹಿಡಿದು ಕಲ್ಯಾಣಿ ಕ್ಲೀನ್ ಮಾಡಲು ನಿಂತ ಸಂಸದ ಮುನಿಸ್ವಾಮಿ

Public TV
1 Min Read

– ಎರಡೇ ದಿನದಲ್ಲಿ ಪುರಾತನ ಕಲ್ಯಾಣಿಗೆ ಕಾಯಕಲ್ಪ

ಕೋಲಾರ: ಕೆರೆ-ಕುಂಟೆಗಳ ಅಭಿವೃದ್ದಿಗೆ ಒತ್ತು ನೀಡಿದ್ದ ಸಂಸದ ಮುನಿಸ್ವಾಮಿ, ಇದೀಗ ಕಲ್ಯಾಣಿಗಳ ಸ್ವಚ್ಛತೆಗೆ ಮುಂದಾಗಿದ್ದಾರೆ. ಜಿಲ್ಲೆಯ ಜಲ ಮೂಲಗಳ ಸಂರಕ್ಷಣೆಗೆ ಸ್ವಚ್ಛ ಭಾರತ ಅಭಿಯಾನದಡಿ ಅಂತರ್ಜಲ ವೃದ್ಧಿಸುವ ಕಲ್ಯಾಣಿಗಳಂತಹ ಜಲಮೂಲಗಳ ಅಭಿವೃದ್ದಿ, ಸ್ವಚ್ಛತೆಗೆ ಪಣ ತೊಟ್ಟಿದ್ದಾರೆ.

ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದಲ್ಲಿನ ಕಲ್ಯಾಣಿ ಸ್ವಚ್ಛತೆಗೆ ಪಣ ತೊಟ್ಟಿದ್ದು, ಸ್ವತಃ ಸಂಸದ ಮುನಿಸ್ವಾಮಿಯವರು ಸ್ವಚ್ಛತಾ ಕಾರ್ಯದದಲ್ಲಿ ತೊಡಗಿದ್ದಾರೆ. ಸಾಂಘಿಕ ಪ್ರಯತ್ನದ ಮೂಲಕ ಕಲ್ಯಾಣಿ ಅಭಿವೃದ್ದಿಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಾಥ್ ನೀಡುತ್ತಿದ್ದಾರೆ. ಕೋಲಾರ ಜಿಲ್ಲೆಯನ್ನು ಕೆರೆಗಳ ತವರು ಎನ್ನಲಾಗುತ್ತದೆ. ನದಿ ನಾಲೆಗಳಿಲ್ಲದ ಬಯಲು ಸೀಮೆ ಕೋಲಾರದಲ್ಲಿ 3 ಸಾವಿರಕ್ಕೂ ಹೆಚ್ಚು ಕೆರೆ-ಕುಂಟೆಗಳಿವೆ.

ಮಳೆ ಇಲ್ಲದೆ ಜಲಮೂಲಗಳೆಲ್ಲ ನಾಪತ್ತೆಯಾಗಿದ್ದು, ಇದನ್ನರಿತ ಸಂಸದರು ತಿಂಗಳಿಗೆ ಕನಿಷ್ಟ ಒಂದು ಕಲ್ಯಾಣಿಯನ್ನಾದರೂ ಅಭಿವೃದ್ಧಿಪಡಿಸಬೇಕು ಎಂದು ಪಣ ತೊಟ್ಟಿದ್ದಾರೆ. ಸಂಸದ ಮುನಿಸ್ವಾಮಿ ತಮ್ಮ ತಂಡದೊಂದಿಗೆ ಕಲ್ಯಾಣಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಹಿಂದೆ ಕೆರೆ-ಕುಂಟೆಗಳ ಸ್ವಚ್ಛತೆ ಹಾಗೂ ಅಭಿವೃದ್ದಿಗೆ ಒತ್ತು ನೀಡಿದ್ದ ಸಂಸದ ಮುನಿಸ್ವಾಮಿ, ಇದೀಗ ಅಂತರ್ಜಲ ವೃದ್ಧಿಸುವ ಕಲ್ಯಾಣಿಗಳ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಸ್ವಚ್ಛ ಭಾರತ ಅಭಿಯಾನದ ಮೂಲಕ ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಚಾಲನೆ ನೀಡಿದ್ದಾರೆ.

ಯಲ್ದೂರು ಗ್ರಾಮದ ಹೃದಯ ಭಾಗದಲ್ಲಿರುವ ಚೋಳರ ಕಾಲದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಲ್ಯಾಣಿಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಎಂಪಿ ಆ್ಯಂಡ್ ಟೀಮ್ ಮುಂದಾಗಿದೆ. ಸುಮಾರು ಒಂದು ಎಕರೆ ವಿಸ್ತೀರ್ಣ ಹಾಗೂ ವಿಶಾಲವಾಗಿರುವ ಕಲ್ಯಾಣಿ ಸಂರಕ್ಷಣೆ ಮಾಡುವುದು, ಸ್ವಚ್ಛತೆ ದೃಷ್ಟಿಯಿಂದ ಮಾಲಿನ್ಯ ತಡೆಯಲು ಸುತ್ತ ಮುಳ್ಳು ತಂತಿ ಬೇಲಿ ನಿರ್ಮಿಸಲಾಗುತ್ತಿದೆ.

ಸ್ವಚ್ಛ ಭಾರತ ಅಭಿಯನದಡಿ ಕಲ್ಯಾಣಿ ಸ್ವಚ್ಛ ಮಾಡಿ ಜಲ ಮೂಲ ರಕ್ಷಣೆಗೆ ಒತ್ತು ನೀಡಲಾಗುತ್ತಿದೆ. ಸಂಸದ ಮುನಿಸ್ವಾಮಿ ಈ ಹಿಂದೆ ಜಿಲ್ಲೆಯ ವಿವಿಧ ಕೆರೆಗಳ ಅಭಿವೃದ್ಧಿ ಮಾಡಿದ್ದರು. ಸದ್ಯ ಜಿಲ್ಲೆಯಲ್ಲಿರುವ ಕಲ್ಯಾಣಿಗಳ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ತಿಂಗಳಿಗೆ ಒಂದರಂತೆ ಸ್ವಚ್ಛ ಮಾಡಲು ಮುಂದಾಗಿರುವುದು ಸ್ಥಳೀಯರಿಗೂ ಖುಷಿ ಕೊಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *