ಸರ್ಕಾರದ ವಿರುದ್ಧ ಹೋರಾಟಕ್ಕೆ ಪೋಷಕರ ನಿರ್ಧಾರ

Public TV
1 Min Read

ಬೆಂಗಳೂರು : ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸದ ಸರ್ಕಾರದ ವಿರುದ್ಧ ಜನವರಿ 31ರ ಭಾನುವಾರದಂದು ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಮಕ್ಕಳ ಪೋಷಕರು ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ಕುರಿತು ಮಾತಾನಾಡಿರುವ ವಾಯ್ಸ್ ಆಫ್ ಪೇರೆಂಟ್ಸ್ ಅಸೋಸಿಯೇಷನ್‍ನ ಅಧ್ಯಕ್ಷರಾದ ಗಣೇಶ್ ಪೂಜಾರಿ, ಸರ್ಕಾರಕ್ಕೆ ಪೋಷಕರು ನೀಡಿರುವ ಡೆಡ್ ಲೈನ್ ಇಂದಿಗೆ ಅಂತ್ಯವಾಗಿದ್ದು, ಶಿಕ್ಷಣ ಸಚಿವರು ಈ ದಿನ ಸುದ್ದಿಗೋಷ್ಠಿಯಲ್ಲಿ ನೀಡಿರುವ ಉತ್ತರವನ್ನು ಒಪ್ಪದ ಪೋಷಕರು ಮತ್ತೊಮ್ಮೆ ಬೀದಿಗಿಳಿಯಲಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಖಾಸಗಿ ಶಾಲೆಗಳ ಫೀಸ್ ಕಿರುಕುಳಕ್ಕೆ ಬೇಸತ್ತ ಪಾಲಕರು, ನವೆಂಬರ್ 14, ಡಿಸೆಂಬರ್ 20 ಹಾಗೂ ಜನವರಿ 10 ರಂದು ಮೂರು ಬಾರಿ ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಜನವರಿ 12 ರಂದು ಸಚಿವ ಸಚಿವ ಸುರೇಶ್ ಕುಮಾರ್ ಮನೆ ಮುಂದೆ ಕಸ ಗುಡಿಸುವ ಮೂಲಕ ಮತ್ತೊಮ್ಮೆ ಪ್ರತಿಭಟನೆಗೆ ಯತ್ನಿಸಿದಾಗ ಪೊಲೀಸರು ಪೋಷಕರನ್ನ ವಶಕ್ಕೆ ಪಡೆದುಕೊಂಡಿದ್ದರು. ಮೂರು ಪ್ರತಿಭಟನೆಗಳನ್ನು ಮಾಡಿದ್ದರು ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಜನವರಿ 15 ರಂದು ಸರ್ಕಾರ ಪೋಷಕರೊಂದಿಗೆ ಒಂದು ಸುತ್ತಿನ ಸಭೆ ನಡೆಸಿತ್ತು. ಸಭೆ ಮುಗಿದು 2 ವಾರ ಕಳೆದರೂ, ಶಿಕ್ಷಣ ಇಲಾಖೆಯಿಂದ ಯಾವುದೇ ಪ್ರಕಟಣೆ ಬಂದಿಲ್ಲ. ಸರ್ಕಾರದ ಈ ಆಮೆ ನಡಿಗೆಗೆ ಪೋಷಕರಿಂದ ಆಕ್ರೋಶ ವ್ಯಕ್ತವಾಗಿದೆ.

ಸರ್ಕಾರ ಕಾರ್ಪೋರೇಟ್ ಶಾಲೆಗಳನ್ನು ರಕ್ಷಿಸುವ ಹುನ್ನಾರ ನಡೆಸುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶೇಕಡಾ 75 ಶುಲ್ಕವನ್ನು ಕಡಿಮೆ ಮಾಡಲಿ. ವೆಚ್ಚಕ್ಕೆ ತಕ್ಕ ಶುಲ್ಕ ಆದೇಶವನ್ನು ಜಾರಿ ಮಾಡಲಿ. ಈ ವರ್ಷ ಶಾಲೆಯ ಫೀಸ್ ಗಳು ಶಾಲೆಯ ಖರ್ಚಿಗೆ ತಕ್ಕಷ್ಟು ಇರಬೇಕು. ಶಾಲೆಯ ಶಿಕ್ಷಕರಿಗೆ ಮತ್ತು ಶಿಕ್ಷಕೇತರರ ಸಂಬಳ ಹಾಗೂ ಅಗತ್ಯ ಖರ್ಚಿಗೆ ಮಾತ್ರ ಫೀಸ್ ತೆಗೆದುಕೊಳ್ಳಬೇಕು. ಅನಗತ್ಯವಾಗಿ ಫೀಸ್ ಕೇಳಬಾರದು. ಸರ್ಕಾರ ಪೋಷಕರ ಪರವಾದ ಆದೇಶ ಹೊರಡಿಸದೇ ಇದ್ದಲ್ಲಿ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲವೆಂದು ಪೋಷಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *