ಸರ್ಕಾರದ ನಿರ್ಧಾರದಿಂದ 2,000 ಕುಟುಂಬಗಳು ಬೀದಿಗೆ ಬರುವ ದುಸ್ಥಿತಿ

Public TV
1 Min Read

– ಸರ್ಕಾರದ ನಿರ್ಧಾರ ಖಂಡಿಸಿ ಕಂಕನವಾಡಿ ಪಟ್ಟಣ ಬಂದ್

ಚಿಕ್ಕೋಡಿ(ಬೆಳಗಾವಿ): ಒಂದು ಕಡೆ ಆ ಗ್ರಾಮಸ್ಥರಿಗೆ ಸರ್ಕಾರನೇ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ ಅಲ್ಲದೇ ಸರ್ಕಾರದ ಯೋಜನೆಯಡಿ ಆಶ್ರಯ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. ಆದರೆ ಈಗ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ಸರ್ಕಾರದ ತೀರ್ಮಾನದಿಂದ ಇಡೀ ಪಟ್ಟಣದ ಜನರೇ ಬೀದಿಗೆ ಬರುವ ಸ್ಥಿತಿ ಬಂದಿದೆ.

ಕಳೆದ 40 ವರ್ಷಗಳಿಂದ ನೆಮ್ಮದಿಯಿಂದ ಇದ್ದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕನವಾಡಿ ಗ್ರಾಮಸ್ಥರ ಜನರ ಪರಿಸ್ಥಿತಿ ಈಗ ಸರ್ಕಾರದ ಒಂದು ನಿರ್ಧಾರದಿಂದ ಬೀದಿಗೆ ಬಂದು ನಿಲ್ಲುವ ಸ್ಥಿತಿ ಬಂದೊದಗಿದೆ. ಕಳೆದ 40 ವರ್ಷಗಳಿಂದ ಕಂಕನವಾಡಿ ಗ್ರಾಮದ ಗೈರಾಣು ಜಮೀನಿನಲ್ಲಿ ವಾಸವಿದ್ದ 2,000 ಕುಟುಂಬಗಳಿಗೆ ಸರ್ಕಾರನೇ ಮೂಲಭೂತ ಸೌಕರ್ಯಗಳನ್ನ ನೀಡಿ ಆಶ್ರಯ ಯೋಜನೆಯಲ್ಲೂ ಮನೆ ನಿರ್ಮಿಸಿ ಕೊಟ್ಟಿದೆ.

ಆದರೆ ಈಗ ಏಕಾಏಕಿ ಗೈರಾಣು ಜಮೀನನ್ನ ಖಾಲಿ ಮಾಡುವಂತೆ ಆದೇಶ ಹೊರಡಿಸಿದೆ. ಇದರಿಂದ ಮನೆಗಳನ್ನು ಈಗ ಖಾಲಿ ಮಾಡಿಸುವಂತೆ ರಾಯಬಾಗ ತಾಲೂಕಾಡಳಿತ ಸೂಚನೆ ನೀಡಿರುವ ಕಾರಣ ಈಗ ಕಂಕನವಾಡಿ ಪಟ್ಟಣದ ಶೇ.75 ರಷ್ಟು ಕುಟುಂಬಗಳು ಬೀದಿಗೆ ಬರುವ ಸ್ಥಿತಿಯಲ್ಲಿವೆ. ರಾಯಬಾಗ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಅವರು ಈಗ ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಪ್ರಶ್ನೆ ಕೇಳದ ಕಾರಣ ಸರ್ಕಾರ ಜಮೀನನ್ನು ಖಾಲಿ ಮಾಡಿಸಲು ಮುಂದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅಲ್ಲದೇ ಸರ್ಕಾರದ ನೀತಿಯನ್ನು ಖಂಡಿಸಿ ಈಡಿ ಪಟ್ಟಣವನ್ನೇ ಬಂದ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ತಕ್ಷಣವೇ ಅಕ್ರಮ ಸಕ್ರಮದಡಿ ಗೈರಾಣ ಜಮೀನನಲ್ಲೇ ನಮಗೆ ವಾಸವಿರಲು ಅವಕಾಶ ಮಾಡಿಕೊಡುವಂತೆ ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ 40 ವರ್ಷಗಳ ಕಾಲ ಈ ಗ್ರಾಮಸ್ಥರಿಗೆ ಸರ್ಕಾರ ಎಲ್ಲ ಸೌಲಭ್ಯಗಳನ್ನ ಕೊಟ್ಟು ಈಗ ಏಕಾಏಕಿ ಮನೆಗಳನ್ನು ಖಾಲಿ ಮಾಡಿಸಲು ಮುಂದಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *