ಸರ್ಕಾರದ ಕ್ರಮಕ್ಕೆ ‘ಸಲಗ’ ಚಿತ್ರತಂಡ ಅಸಮಾಧಾನ- ಚಿತ್ರ ಬಿಡುಗಡೆ ಮುಂದೂಡಿಕೆ

Public TV
1 Min Read

– ಶೇ.100 ಆಸನದ ವ್ಯವಸ್ಥೆ ಜಾರಿಯಾದ ಮೇಲೆ ಸಲಗ ಬಿಡುಗಡೆ

ಹುಬ್ಬಳ್ಳಿ: ಕೋವಿಡ್ 2ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಚಿತ್ರ ಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡಿತ್ತು. ಬಳಿಕ ಏ.6ರ ವರೆಗೆ ಮಾತ್ರ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಸಲಗ ಚಿತ್ರತಂಡ ಅಸಮಾಧಾನ ವ್ಯಕ್ತಪಡಿಸಿದ್ದು, ಶೇ.100ರಷ್ಟು ಭರ್ತಿಗೆ ಅವಕಾಶ ನೀಡಿದ ನಂತರ ನಂತರ ಸಲಗ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಸಲಗ ಚಿತ್ರದ ನಾಯಕ ನಟ ದುನಿಯಾ ವಿಜಯ್, ಖಳನಟ ಡಾಲಿ ಧನಂಜಯ್, ನಿರ್ಮಾಪಕ ಕೆಪಿ ಶ್ರೀಕಾಂತ್ ಮಾತನಾಡಿದರು. ಸರ್ಕಾರದ ಈ ಆದೇಶ ಚಿತ್ರರಂಗಕ್ಕೆ ಮಾಡಿದ ಅನ್ಯಾಯವಾಗಿದೆ. ಸರ್ಕಾರದ ನಿರ್ಧಾರವನ್ನು ಒಪ್ಪಲಾಗದು, ಆದರೂ ಸ್ವಾಗತಿಸುತ್ತೇವೆ. ಚುನಾವಣೆಯ ಪ್ರಚಾರ, ರ್ಯಾಲಿಗೆ ಇಲ್ಲದ ನಿಯಮಗಳನ್ನು ಜಿಮ್ ಹಾಗೂ ಸಿನಿಮಾರಂಗದ ಮೇಲೆ ಹೇರುವುದು ಸರಿಯಲ್ಲ ಎಂದು ದುನಿಯಾ ವಿಜಯ್ ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿಗೆ ಬಿಡಿಗಡೆಯಾದ 2 ಸ್ಟಾರ್ ನಟರ ಚಿತ್ರಗಳು ಹಿಟ್ ಆಗಿವೆ. ಆ ವೇಳೆ ಚಿತ್ರ ವೀಕ್ಷಿಸಿದ ಯಾವ ಪೇಕ್ಷಕರಿಗೂ ಕೋವಿಡ್ ಬಂದ ಉದಾಹರಣೆಗಳಿಲ್ಲ. ಚಿತ್ರ ಮಂದಿರ ಹಾಗೂ ಜಿಮ್ ಗಳ ಮೇಲೆ ನಿರ್ಬಂಧ ಹೇರುವುದು ತರವಲ್ಲ ಎಂದು ನಟ ದುನಿಯಾ ವಿಜಯ ಕಿಡಿಕಾರಿದರು.

ನಟ ಡಾಲಿ ಧನಂಜಯ ಸಹ ಸರ್ಕಾರ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಕೊರೊನಾಗೆ ವ್ಯಾಕ್ಸಿನ್ ಇದೆ, ಹಸಿವಿನಿಂದ ಸಾಯುವವರಿಗೆ ಔಷಧಿ ಇಲ್ಲ. ಸರ್ಕಾರ ಅವರಿಗೆ ಬೇಕಾದ ಹಾಗೆ ನಿಯಮಗಳ ಮಾಡುವುದನ್ನು ಬಿಡಬೇಕು, ಸಿನಿಮಾ ರಂಗಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಚಿತ್ರ ಮಂದಿರಗಳಲ್ಲಿ ಸಿನಿಮಾ ನೋಡಿ ಬಂದವರಿಗೆ ಕೊರೊನಾ ಬಂದ ಉದಾಹರಣೆಗಳಿಲ್ಲ. ಸರ್ಕಾರ ಚಿತ್ರಮಂದಿರಗಳ ಮೇಲೆ ನಿರ್ಬಂಧ ವಿಧಿಸುವುದರಿಂದ ಸಾವಿರಾರು ಬಡ ಕಾರ್ಮಿಕರು ಕಷ್ಟ ಅನುಭವಿಸಬೇಕಾಗುತ್ತದೆ. ಪ್ರೇಕ್ಷಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚಿತ್ರ ವೀಕ್ಷಣೆ ಮಾಡಲಿದ್ದಾರೆ. ಸರ್ಕಾರ ನಿಯಮ ಹೇರಿ ಚಿತ್ರರಂಗವನ್ನು ಸಂಕಷ್ಟಕ್ಕೆ ತಳ್ಳಬಾರದೆಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *