ಸರ್ಕಾರಕ್ಕೆ ಪಂಚೇಂದ್ರಿಯಗಳು ಇದ್ರೆ ನೌಕರರ ಬೇಡಿಕೆ ಈಡೇರಿಸಲಿ: ರಮೇಶ್ ಕುಮಾರ್

Public TV
1 Min Read

ಕೋಲಾರ: ಸಾರಿಗೆ ನೌಕರರು ಹಾಗೂ ಸಾರಿಗೆಯನ್ನು ಅವಲಂಬಿಸಿರುವವರೆಲ್ಲರೂ ಮಧ್ಯಮ ವರ್ಗದವರು, ಸರ್ಕಾರಕ್ಕೆ ಪಂಚೇಂದ್ರಿಯಗಳು ಕೆಲಸ ಮಾಡುತ್ತಿದ್ದರೆ ಮುಷ್ಕರವನ್ನು ಹತ್ತಿಕ್ಕುವ ಬದಲು ನೌಕರರ ಬೇಡಿಕೆ ಈಡೇರಿಸಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸರ್ಕಾರವನ್ನು ಆಗ್ರಹಿಸಿದರು.

ಕೋಲಾರದ ಶ್ರೀನಿವಾಸಪುರದ ಕಾಂಗ್ರೆಸ್ ಕಚೇರಿಯಲ್ಲಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರಮೇಶ್ ಕುಮಾರ್, ಜನರನ್ನು ಅತಂತ್ರ ಸ್ಥಿತಿಗೆ ತಲುಪಿಸಿ ಸಾರಿಗೆ ನೌಕರರಿಗೆ ನೋಟಿಸ್ ಜಾರಿ ಮಾಡುವುದು ಸರಿಯಲ್ಲ, ಮುಷ್ಕರವನ್ನು ಹತ್ತಿಕ್ಕಲು ಸರ್ಕಾರ ಮುಂದಾಗಿದೆ ಹೊರತು, ಅವರ ಬೇಡಿಕೆಗಳನ್ನು ಕೇಳುವ ಗೋಜಿಗೆ ಹೋಗಿಲ್ಲ. ಸಾರಿಗೆ ನೌಕರರ ವಿಚಾರದಲ್ಲಿ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ನಡೆದುಕೊಳ್ಳುತ್ತಿದೆ. ನೌಕರರಿಗೆ ಎಸ್ಮಾ ಅಸ್ತ್ರ ಪ್ರಯೋಗ, ಕಾನೂನು ತೋರಿಸಿ ಬೆದರಿಸುವುದು ಸರಿಯಲ್ಲ ಎಂದು ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗಿದೆ ಆ ವಿಚಾರ ನಮಗು ಅದಕ್ಕೂ ಸಂಬಂಧವಿಲ್ಲವೆನ್ನುವಂತ್ತಿರುವ ಸರ್ಕಾರ, ಖಾಸಗಿಯವರಿಗೆ ಅನುಮತಿ ಕೊಟ್ಟು ಸಾರಿಗೆ ನೌಕರರ ಮೇಲೆ ಅರೋಪ ಮಾಡುತ್ತಿದೆ. ನನ್ನ ಅಂತಃಕರಣ ಕಾಳಜಿಯಿಂದ ಹೇಳುವೆ ಸರ್ಕಾರ ಕೂಡಲೆ ನೌಕರರಿಗೆ ಸ್ಪಂದಿಸಬೇಕು, ನೌಕರರನ್ನು ಶತ್ರುಗಳ ರೀತಿ ನೋಡುವುದು ಸರಿಯಲ್ಲ. ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ನಮ್ಮ ಒಲವು ದುಡಿಯುವ ವರ್ಗದವರ ಪರವಾಗಿರುತ್ತೆ. ರಾಜ್ಯ ಸರ್ಕಾರದ ಸಿಎಂ ಸೇರಿ ಎಲ್ಲರೂ ಉಪ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಸರ್ಕಾರಕ್ಕೆ ಛಾಟಿ ಬೀಸಿದರು.

ಯುಗಾದಿ ಹಬ್ಬ ಸಮೀಪಿಸುತ್ತಿದ್ದು ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ನೌಕರರ ಸಮಸ್ಯೆ ಇತ್ಯರ್ಥ ಮಾಡಬೇಕು. ಅಲ್ಲದೆ ಸರ್ಕಾರ ನೌಕರರನ್ನು ಪರೋಕ್ಷವಾಗಿ ಹೆದರಿಸಲು ಮುಂದಾದರೆ ದಬ್ಬಾಳಿಕೆ, ದೌರ್ಜನ್ಯ ಮಾಡಿದರೆ ಖಂಡಿಸುತ್ತೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *