ಸರಕಾರಿ ಕಾಲೇಜು ದತ್ತು: ಡಿಸಿಎಂ ಮನವಿಗೆ ಒಪ್ಪಿದ ಜ್ಯೋತಿ ನಿವಾಸ್ ಕಾಲೇಜ್

Public TV
1 Min Read

ಬೆಂಗಳೂರು: ಸರಕಾರಿ ಪದವಿ ಕಾಲೇಜೊಂದನ್ನು ದತ್ತು ಸ್ವೀಕರಿಸಿ ಗುಣಮಟ್ಟದ ಶಿಕ್ಷಣ ನೀಡುವ ಸರಕಾರ ಪ್ರಯತ್ನಕ್ಕೆ ಬೆಂಬಲ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಾಡಿಕೊಂಡ ಮನವಿಗೆ ನಗರದ ಜ್ಯೋತಿ ನಿವಾಸ್ ಕಾಲೇಜ್ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜ್‍ನಲ್ಲಿ ಗುರುವಾರದಂದು ಕಾಲೇಜಿನ ಪ್ರಾಂಶುಪಾಲೆ ಡಾ. ಎಲಿಜೆಬೆತ್ ಅವರು ಬರೆದಿರುವ ಎಕೋಸ್ ಅವರ್ ಟೈಮ್ಸ್, ಅವರ್ ರೆಸ್ಪಾನ್ಸಿಬಿಲಿಟಿ (Echoes- Our times, Our response) ಎಂಬ ಆಂಗ್ಲ ಕೃತಿಯನ್ನು ಬಿಡುಗಡೆ ಮಾಡಿ ಡಿಸಿಎಂ ಅವರು ಮಾತನಾಡಿದರು.

ಜ್ಯೋತಿ ನಿವಾಸ ಸ್ವಾಯತ್ತ ಶಿಕ್ಷಣ ಸಂಸ್ಥೆಯಾಗಿದ್ದು, ವಿಶ್ವವಿದ್ಯಾಲಯ ಆಗುವ ಎಲ್ಲ ಅರ್ಹತೆ ಹೊಂದಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಪ್ರಯತ್ನ ಮಾಡಿದರೆ ಸರಕಾರ ಸಹಕಾರ ನೀಡಲಿದೆ. ಜತೆಗೆ, ಯಾವುದಾದರೊಂದು ಸರಕಾರಿ ಕಾಲೇಜನ್ನು ದತ್ತು ಪಡೆಯಬೇಕು ಎಂಬುದು ನನ್ನ ಅಭಿಲಾಶೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು. ಇದಕ್ಕೆ ಕೂಡಲೇ ಸ್ಪಂದಿಸಿದ ಪ್ರಾಂಶುಪಾಲರು, ಕಾಲೇಜು ದತ್ತು ಸ್ವೀಕರಿಸಲು ಒಪ್ಪಿಗೆ ಸೂಚಿಸಿದರಲ್ಲದೆ, ಯಾವ ಕಾಲೇಜು ಎಂದು ಸೂಚಿಸಿದರೆ ಕಾರ್ಯಪ್ರವೃತ್ತರಾಗುವುದಾಗಿ ಭರವಸೆ ನೀಡಿದರು.

ಕಾಲೇಜುಗಳನ್ನು ದತ್ತು ಪಡೆಯುವ ಮೂಲಕ ಸರಕಾರಿ ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸುವುದು, ವಿದ್ಯಾರ್ಥಿಗಳಿಗೆ ಬೋಧನೆ-ಕಲಿಕೆಗೆ ನೆರವಾಗುವುದು, ತಾಂತ್ರಿಕ ಸಹಕಾರ ಕೊಡುವುದು ಹಾಗೂ ಅಧ್ಯಾಪಕರಿಗೆ ತರಬೇತಿ ನೀಡುವುದು ಇತ್ಯಾದಿಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಬಹುದು. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಈಗಾಗಲೇ ಹೆಲ್ಪ್ ಎಜ್ಯುಕೇಟ್ ಎಂಬ ಕಾರ್ಯಕ್ರಮವನ್ನು ಶುರು ಮಾಡಿದೆ ಎಂದರು ಡಿಸಿಎಂ.

ಈ ಸಂದರ್ಭದಲ್ಲಿ ಕೃತಿಯ ಲೇಖಕರು ಆದ ಪ್ರಾಂಶುಪಾಲೆ ಡಾ. ಎಲಿಜೆಬೆತ್, ಕಾಲೇಜಿನ ಅಧ್ಯಾಪಕರು. ಇತರೆ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *