ಸತ್ತವರು, ಸೋಂಕಿತರು, ಸಂಬಂಧಿಕರು ಒಂದೇ ಕಡೆ – ಆಸ್ಪತ್ರೆ ವಿರುದ್ಧ ಸ್ಥಳೀಯರು ಆಕ್ರೋಶ

Public TV
1 Min Read

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಮೃತದೇಹ, ಸೋಂಕಿತರು, ಸೋಂಕಿತರ ಸಂಬಂಧಿಕರನ್ನು ಒಂದೇ ಕಡೆ ಇರಿಸಲಾಗಿದೆ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಫಿನಾಡಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿನ ಪರಿಸ್ಥಿತಿ ಹೀಗಿದ್ದರೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗದೇ ಇನ್ನೇನು ಕಡಿಮೆಯಾಗುತ್ತಾ ಎಂದು ಜಿಲ್ಲಾಸ್ಪತ್ರೆ ವಿರುದ್ಧ ಜನರು ಅಸಮಾಧಾನ ಹೊರಹಾಕಿದ್ದಾರೆ.

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಮೃತದೇಹ, ಸೋಂಕಿತರು, ಸೋಂಕಿತರ ಸಂಬಂಧಿಕರು ಎಲ್ಲರೂ ಒಂದೇ ಜಾಗದಲ್ಲಿ ಅಕ್ಕಪಕ್ಕದ ಬೆಡ್‍ನಲ್ಲಿ ಇರಿಸಲಾಗಿದೆ. ಸೋಂಕಿತರನ್ನ ಸಂಬಂಧಿಗಳೇ ಉಪಚರಿಸುತ್ತಿದ್ದಾರೆ. ಸಾಮಾಜಿಕ ಅಂತರ, ಪಿಪಿಇ ಕಿಟ್ ಧರಿಸದೇ ಸೋಂಕಿತರಿಗೆ ಊಟ-ತಿಂಡಿ ಮಾಡಿಸುವ ಸಂಬಂಧಿಕರು ಸಂಜೆ ಮನೆಗೆ ಬಂದು ಮಾಮೂಲಿಯಂತೆ ಇದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಸಾರ್ವಜನಿಕರು ಆಸ್ಪತ್ರೆ ವ್ಯವಸ್ಥೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನು ಓದಿ: ಮುದ್ದು ಕಂದಮ್ಮನ ಮುಖ ನೋಡುವ ಮುನ್ನವೇ ಕೊರೊನಾಗೆ ಬಲಿಯಾದ ಪವರ್ ಮ್ಯಾನ್

ಜಿಲ್ಲಾಸ್ಪತ್ರೆಯ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳು, ರೋಗಿಗಳ ಜೊತೆ ಸಂಬಂಧಿಕರು, ಮೃತದೇಹಗಳು ಅಲ್ಲೆ ಇವೆ. ಸೋಂಕಿತರ ಊಟ-ತಿಂಡಿಯೂ ಅಲ್ಲೆ ನಡೆಯುತ್ತಿದೆ. ಹೀಗೆ ಒಂದೇ ಜಾಗದಲ್ಲಿ ಎಲ್ಲರೂ ಹೀಗಿದ್ದರೆ ಕೊರೊನಾ ಹೆಚ್ಚಾಗದೆ ಕಡಿಮೆ ಹೇಗಾಗುತ್ತೆ ಎನ್ನುವ ಪ್ರಶ್ನೆ ಮೂಡಿದೆ ಎಂದು ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಕೊರೊನಾ ಸೋಂಕಿತರ ಸಂಬಂಧಿಕರು ಕಿಡಿಕಾರಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಜಿಲ್ಲೆಯ ಪಾಸಿಟಿವಿಟಿ ರೇಟ್ ಕೂಡ 21ರಷ್ಟಿದೆ. ಹಳ್ಳಿಗಳಲ್ಲಿ ಕೊರೊನಾ ಅಬ್ಬರ ಜೋರಿದೆ. ಹಳ್ಳಿಗರು ಪರೀಕ್ಷೆಗೆ ಬರುತ್ತಿಲ್ಲ. ಮನೆಮದ್ದಿಗೆ ಆದ್ಯತೆ ನೀಡಿ ಸೋಂಕು ಹೆಚ್ಚಿಸುತ್ತಿದ್ದಾರೆ. ಇನ್ನೂ ಆಸ್ಪತ್ರೆಯಲ್ಲಿ ಈ ರೀತಿ ಪರಿಸ್ಥಿತಿ ಕಂಡ ಜಿಲ್ಲೆಯ ಜನ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *