ಸಚಿವರ ತವರು ಜಿಲ್ಲೆಯಲ್ಲಿಯೇ ಆರೋಗ್ಯ ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯ

Public TV
1 Min Read

ಬಳ್ಳಾರಿ: ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿಯೇ ಆರೋಗ್ಯ ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯ ತೋರಿದ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ.

ಬಳ್ಳಾರಿಯ ರೂಪನಗುಡಿ ನಿವಾಸಿ ಸುಂಕ್ಲಪ್ಪಾ ಮಂಗಳವಾರ ಬೆಳಗ್ಗೆ ಅನಾರೋಗ್ಯದಿಂದ ಸಾವಿಗೀಡಾಗಿದ್ದರು. ಆದರೆ ಸುಂಕ್ಲಪ್ಪಾ ಅವರ ಮನೆಯ ಎದುರಿಗೆ ವಾಸವಿದ್ದ ದಂಪತಿಗೆ ಕರೋನಾ ಪಾಸಿಟಿವ್ ಬಂದಿತ್ತು. ಜಿಂದಾಲ್ ನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಳಗ್ಗೆ ಅವರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಇದಾದ ಬಳಿಕ ಸುಂಕ್ಲಪ್ಪಾ ಟಿಬಿ ಖಾಯಿಲೆಯಿಂದ ಬಳಲುತ್ತಿದ್ದ ಕಾರಣ ನಿಧನರಾಗಿದ್ದಾರೆ.

ಸುಂಕ್ಲಪ್ಪಾ ಕುಟುಂಬ ಸದಸ್ಯರು ಮೃತದೇಹವನ್ನು ನಡು ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದಾರೆ. ಅವರಿಗೂ ಕೂಡಾ ಕೊರೊನಾ ಸೋಂಕು ಇದೆ ಎನ್ನುವ ಅನುಮಾನದಿಂದ ಮನೆಯವರು ಯಾರು ಹತ್ತಿರ ಸುಳಿದಿಲ್ಲ. ಬೆಳಗ್ಗೆ 4 ಗಂಟೆಗೆ ಮೃತಪಟ್ಟರು ರಾತ್ರಿ ಕಳೆದರೂ ಯಾರು ಮೃತ ಶವವನ್ನು ತೆಗೆದುಕೊಂಡು ಹೋಗಲಿಲ್ಲ. ಇನ್ನು ಬೆಳಗ್ಗೆಯಿಂದ ಆರೋಗ್ಯ ಇಲಾಖೆಯ ಹೆಲ್ಪ್ ಲೈನ್ ಗೆ ಕರೆ ಮಾಡಿ ಮಾಹಿತಿ ನೀಡಿದರೂ ಸಿಬ್ಬಂದಿ ಸಹ ಹತ್ತಿರ ಸುಳಿದಿಲ್ಲ.

ಕೊನೆಗೆ ಶವವನ್ನು ಸ್ಥಳೀಯ ಯುವಕರ ಸಹಾಯದಿಂದ ತಡ ರಾತ್ರಿ ಅಂತ್ಯಸಂಸ್ಕಾರ ಮಾಡಲಾಗಿದೆ. ಆದ್ರೆ ಈಗ ಮೃತ ವ್ಯಕ್ತಿಯ ಶವ ಸಂಸ್ಕಾರ ಮಾಡಿದ ಜನರಲ್ಲಿ ಆತಂಕ ಮನೆ ಮಾಡಿದೆ. ಕಾರಣ ಆ ಮೃತ ವ್ಯಕ್ತಿಯನ್ನು ಕೋವಿಡ್ ಪರೀಕ್ಷೆ ಮಾಡದೇ ಅಂತ್ಯಸಂಸ್ಕಾರ ಮಾಡಿದ್ದಾರೆ. ಹೀಗಾಗಿ ಆ ಮೃತ ವ್ಯಕ್ತಿಗೆ ಸೋಂಕು ಇದೆಯಾ ಇಲ್ವಾ ಎನ್ನುವುದು ಈವರೆಗೂ ತಿಳಿದು ಬಂದಿಲ್ಲಾ.

Share This Article
Leave a Comment

Leave a Reply

Your email address will not be published. Required fields are marked *