ಸಂಪುಟ ಪುನರ್‌ ರಚನೆಯಾದ್ರೆ ಮೂವರು ಸಚಿವರಿಗೆ ಕೊಕ್ – 7 ಶಾಸಕರಿಗೆ ಸಚಿವ ಸ್ಥಾನ?

Public TV
1 Min Read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ ನಡೆಯುತ್ತಿದ್ದು, ಸಂಪುಟ ಪುನರ್‌ರಚನೆ ಆದರೆ ಮೂವರು ಸಚಿವರಿಗೆ ಕೊಕ್ ನೀಡಲು ಮತ್ತು ಏಳು ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್ ಮಾಡಿದೆ.

ಸಿಎಂ ಯಡಿಯೂರಪ್ಪ ಬದಲಿಗೆ ಪರ್ಯಾಯ ನಾಯಕನ ಆಯ್ಕೆ ಆಗಲಿದ್ಯಾ?, ಬಿಜೆಪಿ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಕೈ ಹಾಕಲಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೇ ಒಂದು ವೇಳೆ ನಾಯಕತ್ವ ಬದಲಾದರೆ ಹೈಕಮಾಂಡ್ ಪ್ಲ್ಯಾನ್ ಏನು ಎಂಬ ಪ್ರಶ್ನೆಗಳು ಎದ್ದಿವೆ.

ಈ ನಡುವೆ ಬಿಎಸ್‍ವೈ ಒಂದು ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರ್ ರಚನೆಯ ಎರಡು ಆಯ್ಕೆಯನ್ನು ಹೈಕಮಾಂಡ್ ಮುಂದಿಡುವ ಸಾಧ್ಯತೆ ಇದೆ. ಸಂಪುಟ ವಿಸ್ತರಣೆಯಾದರೆ ಆರು ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ಇದೆ. ಆಗ ಪರಿಷತ್‍ಗೆ ಆಯ್ಕೆ ಆಗಿರುವ ಆರ್.ಶಂಕರ್ ಮತ್ತು ಎಂ.ಟಿ.ಬಿ ನಾಗರಾಜ್‍ಯನ್ನು ಮಂತ್ರಿಗಳನ್ನಾಗಿ ಮಾಡಲೇಬೇಕಾಗುತ್ತದೆ. ಜೊತೆಗೆ ಪಕ್ಷದ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರಸ್ತಾಪ ಮಾಡಬಹುದು. ಉಮೇಶ್ ಕತ್ತಿ, ತಪ್ಪಾರೆಡ್ಡಿ, ಯತ್ನಾಳ್ ಮತ್ತು ಮುರುಗೇಶ್ ನಿರಾಣಿ ಪೈಕಿ ಇಬ್ಬರು ಮಂತ್ರಿ ಪಟ್ಟ ಸಿಗುವ ಸಾಧ್ಯತೆಯಿದೆ.

ಒಂದೇ ವೇಳೆ ಸಂಪುಟ ಪುನರ್ ರಚನೆಯಾದಲ್ಲಿ ಹಾಲಿ ಮೂವರು ಸಚಿವರಿಗೆ ಕೊಕ್ ಕೊಡಬೇಕಾಗುತ್ತದೆ. ಹಾಲಿ ಸಚಿವರಾದ ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ್ ಮತ್ತು ಕೋಟಾ ಶ್ರೀನಿವಾಸ್ ಪೂಜಾರಿ ಕೈ ಬಿಡುವ ಸಾಧ್ಯತೆ ಇದೆ.

ಸೇರ್ಪಡೆಯ ಪಟ್ಟಿಯಲ್ಲಿ ಸುನೀಲ್ ಕುಮಾರ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಸುಳ್ಯದ ಅಂಗಾರ, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಶಂಕರ್, ಎಂ.ಟಿ.ಬಿ.ನಾಗರಾಜ್, ಯೋಗೇಶ್ವರ್ ಇದ್ದಾರೆ. ಈ ಬಗ್ಗೆ ಗುರುವಾರವೇ ಬಿಎಲ್ ಸಂತೋಷ್ ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *