ಸಂಜನಾಗೆ 2 ದಿನ, ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ಯಾಕೆ?

Public TV
2 Min Read

ಬೆಂಗಳೂರು: ಡ್ರಗ್ಸ್ ಕೇಸಲ್ಲಿ ಸ್ಯಾಂಡಲ್‍ವುಡ್‍ನ ಮತ್ತೊಬ್ಬ ನಟಿ ಜೈಲು ಸೇರಿದ್ದಾರೆ. ರಾಗಿಣಿ ಪರಪ್ಪನ ಅಗ್ರಹಾರ ಸೇರಿದ ಬೆನ್ನಲ್ಲೇ, ಇಂದು ಪ್ರಕರಣದ 14ನೇ ಆರೋಪಿಯಾಗಿರುವ ನಟಿ ಸಂಜನಾ ಕೂಡ ಜೈಲು ಪಾಲಾಗಿದ್ದಾರೆ.

ಸಿಸಿಬಿ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸಂಜನಾ, ವೀರೇನ್ ಖನ್ನಾ ಮತ್ತು ರವಿಶಂಕರ್‌ನನ್ನು 1ನೇ ಎಸಿಎಂಎಂ ಕೋರ್ಟ್ ಮುಂದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ನಟಿ ಸಂಜನಾರನ್ನು 2 ದಿನ, ವೀರೇನ್ ಖನ್ನಾ ಮತ್ತು ರವಿಶಂಕರ್‌ಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತು. ಜೊತೆಗೆ ಸಂಜನಾ ಪ್ರಕರಣವನ್ನು 2 ದಿನಗಳ ಒಳಗಾಗಿ 33ನೇ ಸಿಸಿಹೆಚ್ ಕೋರ್ಟ್‍ಗೆ ವರ್ಗಾಯಿಸುವಂತೆ ಸೂಚನೆ ನೀಡಿತು.

ಇಂದಿನ ವಿಚಾರಣೆಯಲ್ಲಿ ಸಂಜನಾ ಪರ ವಕೀಲ ಶ್ರೀನಿವಾಸ ರಾವ್‌ ಮಾತ್ರ ಹಾಜರಾಗಿದ್ದರು. ಪ್ರಬಲ ವಾದ ಮಂಡಿಸಿದ ಶ್ರೀನಿವಾಸ ರಾವ್‌, ನಮ್ಮ ಕಕ್ಷಿದಾರರಿಗೆ ಜಾಮೀನು ತಪ್ಪಿಸಲು ಬೇಕೆಂದೆ ಆರೋಪಿಗಳನ್ನು ಸಿಸಿಬಿ ಈ ಕೋರ್ಟ್‌ಗೆ ಹಾಜರುಪಡಿಸಿದೆ. ನಮಗೆ ಜಾಮೀನು ಕೇಳಲು ಇಲ್ಲಿ ಅವಕಾಶವಿತ್ತು. ಆದ್ರೆ ಈ ಕೋರ್ಟ್‍ಗೆ ಜಾಮೀನು ನೀಡುವ ಅಧಿಕಾರವಿಲ್ಲ. ಸಿಸಿಬಿ ನಮ್ಮ ಕಕ್ಷಿದಾರರ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡ್ತಿದೆ ಎಂದು ಆಪಾದಿಸಿದರು.

ವಾದ ಆಲಿಸಿದ ನ್ಯಾಯಾಧೀಶರು, ಕೇವಲ ಎರಡು ದಿನಗಳ ಮಟ್ಟಿಗೆ ನಟಿ ಸಂಜನಾರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು. ಹೀಗಾಗಿ, ಸೆಪ್ಟೆಂಬರ್ 18ರವರೆಗೆ ಸಂಜನಾ ಜೈಲಲ್ಲಿ ಇರಬೇಕಾಗುತ್ತದೆ.

 

ಕೋರ್ಟ್ ಆದೇಶದ ಬೆನ್ನಲ್ಲೇ ಸಾಂತ್ವನ ಕೇಂದ್ರದಲ್ಲಿ ಸಂಜನಾ ಕಣ್ಣೀರಿಟ್ಟರು. ಸಂಜೆ 7 ಗಂಟೆ ವೇಳೆಗೆ ನಟಿ ಸಂಜನಾ ಸೇರಿ ಮೂವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಸಿಸಿಬಿ ಪೊಲೀಸರು ಶಿಫ್ಟ್ ಮಾಡಿದರು. ಇದರೊಂದಿಗೆ ಡ್ರಗ್ಸ್ ಪ್ರಕರಣದಲ್ಲಿ 8 ಆರೋಪಿಗಳು ಜೈಲು ಸೇರಿದಂತಾಗಿದೆ.

ಸಂಜನಾ ಪರ ವಕೀಲರ ವಾದ ಏನಾಗಿತ್ತು?
ಈ ಪ್ರಕರಣದ ವಿಚಾರಣೆ ಎನ್‍ಡಿಪಿಎಸ್ ಕೋರ್ಟ್‍ನಲ್ಲಿ ನಡೆಯಬೇಕಿತ್ತು. ಎನ್‍ಡಿಪಿಎಸ್ ಕೋರ್ಟ್‍ನಲ್ಲಿ ನಮಗೆ ಜಾಮೀನು ಕೇಳಲು ಅವಕಾಶವಿತ್ತು. ಆದರೆ ಸಿಸಿಬಿ ಬೇಕಂತಲೇ ಕಕ್ಷಿದಾರರನ್ನು ಈ ಕೋರ್ಟ್‍ಗೆ ಹಾಜರುಪಡಿಸಿದೆ. ಈ ಕೋರ್ಟ್‍ಗೆ ಜಾಮೀನು ನೀಡಲು ಅಧಿಕಾರವಿಲ್ಲ. ಇದು ಗೊತ್ತಿದ್ದೇ ಸಿಸಿಬಿ ಆರೋಪಿಗಳನ್ನು ಇಲ್ಲಿಗೆ ಹಾಜರುಪಡಿಸಿದೆ. ನಮ್ಮ ಕಕ್ಷಿದಾರರಿಗೆ ಜಾಮೀನು ಸಿಗದಂತೆ ಮಾಡಲು ಸಿಸಿಬಿ ಹೀಗೆ ಮಾಡಿದೆ. ಇದನ್ನೂ ಓದಿ: ವಿಚಾರಣೆ ಮುಗಿಸಿ ಹೊರಟ ದಿಗಂತ್, ಐಂದ್ರಿತಾಗೆ ಮುಗಿದಿಲ್ಲ ಸಂಕಷ್ಟ

ನಮ್ಮ ಕಕ್ಷಿದಾರರ ಹಕ್ಕುಗಳನ್ನು ಸಿಸಿಬಿ ಕಿತ್ತುಕೊಳ್ಳುವ ಪ್ರಯತ್ನ ನಡೆಸಿದೆ. ಇಲ್ಲಿ ಸಿಸಿಬಿ ಲೋಪ ಎಸಗಿರುವುದು ಸ್ಪಷ್ಟವಾಗಿದೆ. ಡ್ರಗ್ಸ್ ಕೇಸ್‍ನಲ್ಲಿ ಸಂಜನಾ ಪಾತ್ರ ಏನು ಎನ್ನುವುದನ್ನು ಸಿಸಿಬಿ ಇಲ್ಲಿಯವರೆಗೆ ತಿಳಿಸಿಲ್ಲ. ಯಾವ ಉದ್ದೇಶಕ್ಕೆ ಸಂಜನಾರನ್ನು ವಶಕ್ಕೆ ಪಡೆಯಲಾಗಿತ್ತು ಎಂಬುದನ್ನು ತಿಳಿಸಿಲ್ಲ. ಯಾವುದೇ ಕಾರಣ ಇಲ್ಲದೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದು ಎಷ್ಟು ಸರಿ? ಸಿಸಿಬಿ ಮಾಡಿರುವ ತಪ್ಪಿಗೆ ಕಕ್ಷಿದಾರರಿಗೆ ತೊಂದರೆ ಆಗಬಾರದು ಎಂದು ಶ್ರೀನಿವಾಸ ರಾವ್‌ ಪ್ರಬಲ ವಾದ ಮಂಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *