ಸಂಚಾರಿ ವಿಜಯ್ ಕೋಮಾದಲ್ಲಿದ್ದಾರೆ, ಪರಿಸ್ಥಿತಿ ಗಂಭೀರ- ಅಪೋಲೋ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

Public TV
2 Min Read

ಬೆಂಗಳೂರು: ನಟ ಸಂಚಾರಿ ವಿಜಯ್ ಅವರು ಕೋಮಾದಲ್ಲಿದ್ದು, ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಫುಲ್ ಲೈಫ್ ಸಪೋರ್ಟ್‍ನೊಂದಿಗೆ ನ್ಯೂರೋ ಐಸಿಯುನಲ್ಲಿದ್ದಾರೆ ಎಂದು ಅಪೋಲೋ ಆಸ್ಪತ್ರೆ ಮಾಹಿತಿ ನೀಡಿದೆ.

ಸಂಚಾರಿ ವಿಜಯ್ ಅವರ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಭನ್ನೇರುಘಟ್ಟದ ರಸ್ತೆಯ ಅಪೋಲೋ ಆಸ್ಪತ್ರೆ, ವಿಜಯ್ ಅವರಿಗೆ ರಾತ್ರಿ 11.45ರ ಸುಮಾರಿಗೆ ರಸ್ತೆ ಅಪಘಾತವಾಗಿದ್ದು, ತಕ್ಷಣವೇ ಭನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ಕರೆತರಲಾಯಿತು. ಅವರನ್ನು ತುರ್ತು ವಿಭಾಗಕ್ಕೆ ದಾಖಲಿಸಿಕೊಂಡಾಗ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು ಎಂದು ಆಸ್ಪತ್ರೆ ವಿವರಿಸಿದೆ.

ಮೆದುಳಿನ ಸಿ.ಟಿ. ಸ್ಕ್ಯಾನ್ ಮಾಡಿದಾಗ ಮೆದುಳಿಗೆ ತೀವ್ರ ಗಾಯವಾಗಿ ರಕ್ತಸ್ರಾವವಾಗುತ್ತಿತ್ತು. ಮೆದುಳಿನ ರಕ್ತಸ್ರಾವವನ್ನು ತಡೆಯಲು ತಕ್ಷಣವೇ ಬ್ರೇನ್ ಸರ್ಜರಿ ಮಾಡಲಾಯಿತು. ಪ್ರಸ್ತುತ ಅವರು ಫುಲ್ ಲೈಫ್ ಸಪೋರ್ಟ್‍ನೊಂದಿಗೆ ನ್ಯೂರೋ ಐಸಿಯುನಲ್ಲಿದ್ದು, ಕೋಮಾ ಸ್ಥತಿಯಲ್ಲೇ ಮುಂದುವರಿದಿದ್ದಾರೆ. ಅಲ್ಲದೆ ಅವರ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಅವರ ಆರೋಗ್ಯದ ಸ್ಥಿತಿಗತಿ ಕುರಿತು ನಿಗಾ ವಹಿಸಿದ್ದೇವೆ. ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಆಸ್ಪತ್ರೆ ಹೆಲ್ತ್ ಬುಲೆಟಿನ್‍ನಲ್ಲಿ ವಿವರಿಸಿದೆ. ಇದನ್ನೂ ಓದಿ: ತಲೆಭಾಗಕ್ಕೆ ಬಲವಾದ ಪೆಟ್ಟು – ಸಂಚಾರಿ ವಿಜಯ್ ಬೈಕ್ ಅಪಘಾತವಾಗಿದ್ದೇಗೆ?

ಅಪಘಾತವಾಗಿದ್ದು ಹೇಗೆ?
ಶನಿವಾರ ರಾತ್ರಿ ಗೆಳೆಯನ ಮನೆಯಲ್ಲಿ ಊಟ ಮಾಡಿಕೊಂಡು ಬೈಕ್ ನಲ್ಲಿ ಹಿಂದಿರುಗಿತ್ತಿದ್ದರು. ಬೈಕ್ ಗೆಳೆಯ ನವೀನ್ ಓಡಿಸುತ್ತಿದ್ದರು, ವಿಜಯ್ ಹಿಂಬದಿಯಲ್ಲಿ ಕುಳಿತಿದ್ದರು. ಜೆಪಿ ನಗರದ 7ನೇ ಹಂತದಲ್ಲಿ ಬೈಕ್ ಸ್ಕಿಡ್ ಆಗಿದ್ದರಿಂದ ಅಪಘಾತ ಸಂಭವಿಸಿದೆ. ಕೂಡಲೇ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೈಕ್ ವೇಗವಾಗಿದ್ದರಿಂದ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿದೆ.

ವಿಜಯ್ ಬಲ ತೊಡೆ ಭಾಗ ಮುರಿದಿದ್ದು, ಮೆದುಳಿನ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿದೆ. ತಲೆಗೆ ಪೆಟ್ಟು ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದರಿಂದ ರಾತ್ರಿಯೇ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮೆದುಳಿನ ರಕ್ತಸ್ತ್ರಾವ ತಡೆಗೆ ಸರ್ಜರಿ ನಡೆದಿದೆ. ಡಾ.ಅರುಣ್.ಎಲ್.ನಾಯ್ಕ್ ಟೀಂ ಸಂಚಾರಿ ವಿಜಯ್ ಗೆ ಚಿಕಿತ್ಸೆ ಮಾಡಿದ್ದಾರೆ. ಆರೋಗ್ಯದ ಮಾಹಿತಿ ನೀಡಲು ಆಸ್ಪತ್ರೆ 48 ಗಂಟೆ ಸಮಯ ಕೇಳಿತ್ತು. ಸದ್ಯ ಐಸಿಯುನಲ್ಲಿರುವ ವಿಜಯ್ ಅವರಿಗೆ ಚಿಕಿತ್ಸೆ ಮುಂದುವರಿದಿದೆ.

ಅಪಘಾತದ ವಿಷಯ ತಿಳಿಯುತ್ತಿದ್ದಂತೆ ನಟ ನೀನಾಸಂ ಸತೀಶ್ ಆಸ್ಪತ್ರೆಗೆ ಆಗಮಿಸಿ, ವೈದ್ಯರ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿರುವ ವಿಜಯ್ ಕುಟುಂಬಸ್ಥರಿಗೆ ನೀನಾಸಂ ಸತೀಶ್ ಧೈರ್ಯ ಹೇಳುವ ಕೆಲಸ ಮಾಡುತ್ತಿದ್ದಾರೆ.

ಮೂಲತಃ ರಂಗಭೂಮಿ ಕಲಾವಿದರಾಗಿರುವ ಸಂಚಾರಿ ವಿಜಯ್, ನಾನು ಅವನಲ್ಲ, ಅವಳು ಸಿನಿಮಾ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಸಿನಿಮಾ ಜೊತೆಯಲ್ಲಿ `ಉಸಿರು’ ಹೆಸರಿನ ತಂಡವನ್ನು ಕಟ್ಟಿಕೊಂಡು ಲಾಕ್‍ಡೌನ್ ನಲ್ಲಿ ಸಂಕಷ್ಟ ಸಿಲುಕಿದವರಿಗೆ ಸಹಾಯ ಮಾಡುತ್ತಿದ್ದರು.

Share This Article
Leave a Comment

Leave a Reply

Your email address will not be published. Required fields are marked *