ಶ್ರೀಭೋಗನಂದೀಶ್ವರ ಆಲಯದಲ್ಲಿ ಭಕ್ತರು ದೀಪ ಹಚ್ಚುವಂತಿಲ್ಲ: ಡಿಸಿ

Public TV
1 Min Read

ಚಿಕ್ಕಬಳ್ಳಾಪುರ: ಇತಿಹಾಸ ಪ್ರಸಿದ್ಧ ದಕ್ಷಿಣ ಕಾಶೀ ಕ್ಷೇತ್ರವೆಂದೇ ಪ್ರತೀತಿಯಾಗಿರೋ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಶ್ರೀಭೋಗನಂದೀಶ್ವರ ದೇಗುಲ ಹಾಗೂ ಆವರಣದಲ್ಲಿ ಈ ಬಾರಿ ದೀಪ ಹಚ್ಚುವಂತಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ.

ನಾಳೆ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಶ್ರೀಭೋಗನಂದೀಶ್ವರನಿಗೆ ವಿಶೇಷ ಪೂಜಾ ಕೈಂಕರ್ಯಗಳು ನೇರವೇರಲಿವೆ. ಪ್ರತಿ ವರ್ಷದಂತೆ ಈ ವರ್ಷವೂ ಕಾರ್ತಿಕ ಸೋಮವಾರದ ಪ್ರಯುಕ್ತ ಸಾವಿರಾರು ಮಂದಿ ಭಕ್ತರು ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಕೊರೊನಾ ಭೀತಿ ಆತಂಕದಿಂದ ಜಿಲ್ಲಾಡಳಿತ ಕೆಲ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನಾಳೆ ಬೆಳಗ್ಗೆ 5 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಒಂದು ಬಾರಿಗೆ ದೇವಾಲಯದೊಳಗೆ ಕೇವಲ 300 ಮಂದಿಗಷ್ಟೇ ಪ್ರವೇಶಕ್ಕೆ ಅನುಮತಿಸಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಂಡು ಭಕ್ತರು ದೇವರ ದರ್ಶನ ಪಡೆಯಬೇಕಿದ್ದು, ಮಾಸ್ಕ್ ಹಾಕಿದರೆ ಮಾತ್ರ ದೇವಾಲಯದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ.

ಭಕ್ತರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಪ್ರವೇಶ ಕಲ್ಪಿಸಲಾಗುವುದು. ಮತ್ತೊಂದೆಡೆ ಪ್ರತಿ ವರ್ಷ ಕಾರ್ತಿಕ ಸೋಮವಾರದಂದು ದೇವಾಲಯಕ್ಕೆ ಬರುವ ಭಕ್ತರು ದೇವಾಲಯದೊಳಗೆ ಹಾಗೂ ಕಳೆದ ವರ್ಷದಿಂದ ದೇವಾಲಯದ ಹೊರಭಾಗದಲ್ಲಿ ದೀಪ ಹಚ್ಚಿ ದೇವರಿಗೆ ಆರತಿ ಬೆಳಗಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಈ ವರ್ಷ ಭಕ್ತರು ದೇವರ ದರ್ಶನ ಪಡೆಯಬಹುದು. ದೀಪದಾರತಿ ಮಾಡಲು ಅವಕಾಶವಿಲ್ಲ ಅಂತ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಭಕ್ತರನ್ನ ನಿಯಂತ್ರಿಸುವ ಸಲುವಾಗಿ ಬ್ಯಾರಿಕೇಡ್, ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗುವುದಾಗಿ ಅಂತ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *