ಶಿಷ್ಟಾಚಾರ ಪಾಲಿಸದ ಅಧಿಕಾರಿಗಳ ವಿರುದ್ಧ ಸ್ಪೀಕರ್‌ಗೆ ದೂರು ನೀಡುತ್ತೇನೆ : ಸಾರಾ ಮಹೇಶ್

Public TV
2 Min Read

ಮೈಸೂರು: ಯಾವುದೇ ಸಮಿತಿ ಸಭೆಗಳಲ್ಲಿ ಶಿಷ್ಟಾಚಾರ ಪಾಲಿಸದ ಕೆಲವು ಅಧಿಕಾರಿಗಳ ವರ್ತನೆ ಕುರಿತಂತೆ ಸ್ಪೀಕರ್‌ಗೆ ದೂರು ನೀಡುತ್ತೇನೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಹೇಳಿದ್ದಾರೆ.

ನಿನ್ನೆ ಮೈಸೂರಿನಲ್ಲಿ ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದ ಮೈಸೂರು ಡಿಸಿ ರೋಹಿಣಿ ಸಿಂಧೂರಿ ನಡೆ ವಿಚಾರವಾಗಿ ಇಂದು ಚಾಮರಾಜನಗರದಲ್ಲಿ ಮಾತನಾಡಿದ ಅವರು, ವಿಧಾನಮಂಡಲ ಸಭೆಯ ಮುಂದಿಡಲಾದ ಸಮಿತಿ ಸಂವಿಧಾನ ಬದ್ಧವಾಗಿ ರಚನೆಯಾಗಿದೆ. ಸಮಿತಿ ಸಭೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅದರದ್ದೇ ಆದ ಶಿಷ್ಟಾಚಾರ ಇರುತ್ತದೆ. ಹಾಗಾಗಿ ಶಿಷ್ಟಾಚಾರ ಪಾಲನೆ ಬಗ್ಗೆ ಕೆಲವು ಅಧಿಕಾರಿಗಳ ವರ್ತನೆ ಕುರಿತಂತೆ ಸ್ಪೀಕರ್ ಹಾಗೂ ಮುಖ್ಯಕಾರ್ಯದರ್ಶಿಗಳ ಜೊತೆ ಚರ್ಚೆ ನಡೆಸುತ್ತೇವೆ. ಯಾವುದೇ ಸಮಿತಿ ಸಭೆ ಬಂದಾಗ ಡಿಸಿ ಮತ್ತು ಎಸ್ಪಿ ಅವರು ಬರಬೇಕು. ಅವರ ಅವಶ್ಯಕತೆ ಇದ್ದರೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಹೇಳುತ್ತೇವೆ. ಆದರೆ ನಿನ್ನೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವಶ್ಯಕತೆ ಇರಲಿಲ್ಲ. ಹಾಗಾಗಿ ಅವರನ್ನು ಬೇಡ ಎಂದು ಕಳುಹಿಸಿದ್ದೇವೆ ಎಂದು ಹೇಳಿದರು.

ಮೈಸೂರು ಜಿಲ್ಲಾ ಪಂಚಾಯತ್ ಯಲ್ಲಿ ವಿಧಾನಮಂಡಲ ಕಾಗದ ಪತ್ರಗಳ ಸಮಿತಿ ಸಭೆಯಲ್ಲಿ ಮೊದಲ ಬಾರಿಗೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾರಾ ಮಹೇಶ್ ಮುಖಾಮುಖಿಯಾಗಿದ್ದರು. ಸಭೆಯಲ್ಲಿ ಮಾಸ್ಕ್ ಹಾಕಿಕೊಂಡು ಮಾತು ಆರಂಭಿಸಿದ ಡಿಸಿ ರೋಹಿಣಿ ಸಿಂದೂರಿಯವರಿಗೆ ನಿಮ್ಮ ಮಾತು ಕೇಳುತ್ತಿಲ್ಲ. ಮಾಸ್ಕ್ ತೆಗೆದು ಮಾತನಾಡಿ ಎಂದು ಸಾರಾ ಮಹೇಶ್ ಹೇಳಿದರು. ನಾನು ಮಾಸ್ಕ್ ತೆಗೆಯವುದಿಲ್ಲ. ಮಾಸ್ಕ್ ತೆಗೆದು ಮಾತನಾಡಬಾರದು ಅದಕ್ಕಾಗಿ ಮಾಸ್ಕ್ ತೆಗೆಯುವುದಿಲ್ಲ ಎಂದು ಸಾರಾ ಮಹೇಶ್‍ಗೆ ಉತ್ತರ ನೀಡುವುದರ ಮೂಲಕ ಬಹಿರಂಗವಾಗಿ ಇಬ್ಬರು ಮುಸುಕಿನ ಗುದ್ದಾಟ ನಡೆಸಿದರು.

ಈ ಸಭೆಯಲ್ಲಿ ನನಗೆ ಸಂಬಂಧಿಸಿದ ವಿಷಯಗಳ ಚರ್ಚೆ ಇಲ್ಲ, ಹಾಗಾಗಿ ನೀವು ಸಮ್ಮತಿಸಿದರೆ ನಾನು ಸಭೆಯಿಂದ ಹೋಗುತ್ತೇನೆ ಎಂದ ಸಿಂಧೂರಿ ತಿಳಿಸಿದರು. ಅದಕ್ಕೆ ನಿಮ್ಮನ್ನು ನಾವು ಸಭೆಗೆ ಕರೆದಿರಲಿಲ್ಲ. ಆದರೂ ತಾವು ಸಭೆಗೆ ಬಂದಿದ್ದಿರಿ. ಜಿಲ್ಲೆಯ ಯಾವುದೇ ಸಭೆಯ ಮಾಹಿತಿ ಕೊಡುವುದು ಕರ್ತವ್ಯ. ಅದಕ್ಕೆ ಮಾಹಿತಿ ಕೊಟ್ಟಿದ್ದೇವೆ ಅಷ್ಟೇ. ಆದರೂ ಪರವಾಗಿಲ್ಲ. ಸಮಯ ಇದ್ದರೆ ಇರಿ, ಬೇರೆ ಕೆಲಸ ಇದ್ದರೆ ಹೋಗಿ ಎಂದು ನೇರವಾಗಿ ಸಾರಾ ಮಹೇಶ್ ಉತ್ತರಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *