ಶಾಸಕಾಂಗ ಸಭೆ ಕುರಿತು ಚರ್ಚೆ ನಡೆದಿಲ್ಲ, ನಾಯಕತ್ವ ಬದಲಾವಣೆ ಸತ್ಯಕ್ಕೆ ದೂರವಾದ ಮಾತು: ಅಶ್ವಥ್ ನಾರಾಯಣ್

Public TV
1 Min Read

– ಯಡಿಯೂರಪ್ಪನವರೇ ನಮ್ಮ ನಾಯಕರು

ಬೆಂಗಳೂರು: ಹೈ ಕಮಾಂಡ್ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಸೂಚಿಸಿಲ್ಲ. ನಾಯಕತ್ವ ಬದಲಾವಣೆ ಆಗುವುದು ಸತ್ಯಕ್ಕೆ ದೂರವಾದ ಮಾತು ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಜೂನ್ 7ರಂದು ಹೈ ಕಮಾಂಡ್ ಶಾಸಕಾಂಗ ಪಕ್ಷದ ಸಭೆ ಕರೆಯಲು ಸೂಚಿಸಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ಹೈಕಮಾಂಡ್ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಸೂಚಿಸಿಲ್ಲ. ನಾಯಕತ್ವ ಬದಲಾವಣೆ ಆಗುವುದು ಸತ್ಯಕ್ಕೆ ದೂರವಾದ ಮಾತು. ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯುತ್ತಾರೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಆರ್.ಎಸ್.ಎಸ್. ನಾಯಕರು ಚರ್ಚೆ ಮಾಡಿದ್ದಾರೆ. ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕಾಂಗ ಸಭೆ ಕರೆಯುವ ಬಗ್ಗೆ ಹೈ ಕಮಾಂಡ್‍ನಿಂದ ಯವುದೇ ಸೂಚನೆ ಬಂದಿಲ್ಲ. ಈ ಸುದ್ದಿ ಹೇಗೆ ತಿಳಿಯಿತು ಎಂಬುದು ನನಗೆ ಗೊತ್ತಿಲ್ಲ. ಕೆಲವರು ದೆಹಲಿಗೆ ಹೋಗಿದ್ದಾರೆ ಎಂಬುದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ಆ ಬಗ್ಗೆ ನನಗೇನೂ ಗೊತ್ತಿಲ್ಲ. ಆದರೆ ನಾಯಕತ್ವ ಬದಲಾವಣೆ ಕುರಿತು ಮಾಹಿತಿ, ಸೂಚನೆಯಾಗಲಿ ನಮಗೆ ಬಂದಿಲ್ಲ. ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ, ಕೋವಿಡ್ ನಿರ್ವಹಣೆಯಲ್ಲಿ ಇಡೀ ನಮ್ಮ ವ್ಯವಸ್ಥೆ ಕೆಲಸ ಮಾಡುತ್ತಿದೆ.

ಸಂಘ ಪರಿವಾರದವರು ಅಭಿವೃದ್ಧಿ ಕೆಲಸದ ಕುರಿತು ಮಾತ್ರ ಚರ್ಚಿಸುತ್ತಾರೆ. ರಾಜಕೀಯ, ರಾಜಕೀಯದ ಬದಲಾವಣೆ ಕುರಿತು ಯಾವುದೇ ರೀತಿ ಚರ್ಚೆ ನಡೆಯುವುದಿಲ್ಲ. ಕೋವಿಡ್ ಸೇರಿದಂತೆ ಇನ್ನಿತರೆ ವಿಚಾರಗಳ ಕುರಿತು ಯಾವ ರೀತಿ ಉತ್ತಮವಾಗಿ ಕೆಲಸ ಮಾಡಬಹುದು, ನಾವು ಹೇಗೆ ಮಾಡಿದ್ದೇವೆ ಎಂಬುದನ್ನು ಮಾತ್ರ ಆರ್‍ಎಸ್‍ಎಸ್ ನಾಯಕರು ತಿಳಿಸುತ್ತಾರೆ. ಇದೀಗ ನಮ್ಮ ಕಾರ್ಯಕರ್ತರು ನಾಯಕರು ಸಂಪೂರ್ಣವಾಗಿ ಕೋವಿಡ್ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದು, ಮನೆ ಮನೆಗಳಿಗೆ ಜನರ ಸೇವೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ, ನಮ್ಮ ಸಂಘಟನೆ ಎಲ್ಲವೂ ಸಂಪೂರ್ಣವಾಗಿ ಕೋವಿಡ್ ನಿರ್ವಹಣೆಯಲ್ಲಿ ತೊಡಗಿದ್ದೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *