ಶಾಲೆಗಳನ್ನು ತೆರೆಯುವ ಆತುರ ಸರ್ಕಾರಕ್ಕಿಲ್ಲ: ಸುಧಾಕರ್

Public TV
1 Min Read

ಚಿಕ್ಕಬಳ್ಳಾಪುರ: ಶಾಲೆಗಳನ್ನು ಆರಂಭ ಮಾಡುತ್ತೇವೆ ಎಂದು ಸರ್ಕಾರ ಎಲ್ಲೂ ಹೇಳಿಲ್ಲ. ಆದರೂ ಕೂಡ ಪ್ರತಿನಿತ್ಯ ವಿರೋಧ ಪಕ್ಷದವರು ಕೊಡುತ್ತಿರುವ ಹೇಳಿಕೆಗಳು ಆಶ್ಚರ್ಯ ತಂದಿವೆ. ನಾವು ತಜ್ಞರ ಸಮಿತಿಯನ್ನ ನೇಮಕ ಮಾಡಿದ್ದೀವಿ, ಹೀಗಾಗಿ ಶಾಲೆಗಳನ್ನ ತೆರೆಯುವ ಯಾವ ಆತುರತೆಯೂ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಸಚಿವ ಸುಧಾಕರ್, ಕೊರೊನಾ ಆರಂಭದಲ್ಲಿ ಇಡೀ ದೇಶದಲ್ಲಿ ಶಾಲೆಗಳನ್ನು ಮೊದಲು ಬಂದ್ ಮಾಡಿದ್ದು ಕರ್ನಾಟಕ ಸರ್ಕಾರ. ನಿಮ್ಮಷ್ಟೇ ಕಾಳಜಿ ನಮಗೂ ಇದೆ ಅಂತ ಹೇಳಿದರು. ಮಕ್ಕಳು ಹಾಗೂ ಶಿಕ್ಷಕರ ಜೀವ ಉಳಿಸೋದು ನಮ್ಮ ಮೊದಲ ಆದ್ಯತೆ. ಆದರ ಜೊತೆ ಜೊತೆಗೆ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಸಹ ಇದೆ.

ಎಲ್ಲಾ ವೃತ್ತಿರಂಗಗಲ್ಲಿಯೂ ಕೋವಿಡ್ ಸೋಂಕು ತಗುಲಿದೆ. ಮಂತ್ರಿ ವರ್ಗದವರಿಗೂ, ಶಾಸಕರಿಗೂ ಕೊರೊನಾ ಸೋಂಕು ತಗುಲಿದೆ. ಇದನ್ನು ನಿಯಂತ್ರಣ ಮಾಡಲು ಅಗತ್ಯ ಕ್ರಮಗಳನ್ನ ಸರ್ಕಾರ ಮಾಡುತ್ತಿದೆ. ಪೋಷಕರ ಒತ್ತಡದ ಮೇಲೆ ಕೆಲ ಪ್ರಯೋಗಗಳನ್ನು ಮಾಡಿದ್ದೀವಿ, ವಿದ್ಯಾಗಮ ಯೋಜನೆ ಜಾರಿ ಮಾಡಿದ್ದೀವಿ.

ಇಡೀ ದೇಶದಲ್ಲಿ ಎಲ್ಲಾ ರಾಜ್ಯಗಳು ಆ ಕ್ರಮವನ್ನು ಮೆಚ್ಚಿ ಅಧಿಕಾರಿಗಳಿಗೆ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕೆಲವರಿಗೆ ಕೊರೊನಾ ಸೋಂಕು ಬಂದಿರುವುದರಿಂದ ಇಡೀ ವಿದ್ಯಾಗಮ ಯೋಜನೆಯೇ ಬೇಡ ಅನ್ನೋದು ಸರಿಯಲ್ಲ. ತಜ್ಞರ ವರದಿ ಬಂದ ನಂತರ ಸಿಎಂ ಅಧ್ಯಕ್ಷತೆಯಲ್ಲಿ ಶಾಲೆಗಳ ಆರಂಭದ ಬಗ್ಗೆ ತೀರ್ಮಾನ ಮಾಡಲಿದ್ದೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *