ವೃದ್ಧೆಯನ್ನು 5 ಕಿ.ಮೀ ಜೋಲಿಯಲ್ಲಿ ಹೊತ್ತು ಆಸ್ಪತ್ರೆ ಸೇರಿಸಿದ ಯುವಕರು

Public TV
2 Min Read

ಕಾರವಾರ: ರಸ್ತೆ ಸಂಪರ್ಕ ಇಲ್ಲದ ಕಾರಣ ಅನಾರೋಗ್ಯಕ್ಕೊಳಗಾದ ವೃದ್ಧೆಯೋರ್ವರನ್ನು ಖುರ್ಚಿಯ ಜೋಲಿಯಲ್ಲಿ ಸುಮಾರು 5 ಕಿ.ಮೀ. ಕಡಿದಾದ ದಾರಿಯಲ್ಲಿ ಹೊತ್ತುತಂದು ಆಸ್ಪತ್ರೆ ಸೇರಿಸಿರುವ ಘಟನೆ ಕಾರವಾರ ತಾಲೂಕಿನ ಮಚ್ಚಳ್ಳಿಯಲ್ಲಿ ನಡೆದಿದೆ.

ತಾಲೂಕಿನ ಅಮದಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ದಟ್ಟಾರಣ್ಯದ ಮಧ್ಯಭಾಗದಲ್ಲಿರುವ ಮಚ್ಚಳ್ಳಿ ಗ್ರಾಮದ ನೇಮಿ ಗೌಡ ಅನಾರೋಗ್ಯಕ್ಕೊಳಗಾಗಿದ್ದರು. ರಸ್ತೆ ಸಂಪರ್ಕ ಇಲ್ಲದ ಕಾರಣ ಗ್ರಾಮಕ್ಕೆ ಯಾವುದೇ ಅಂಬುಲೆನ್ಸ್ ಅಥವಾ ಇತರೆ ವಾಹನ ಬರಲು ಸಾಧ್ಯವಿರಲಿಲ್ಲ. ಹೀಗಾಗಿ ಗ್ರಾಮದ ಯುವಕರೇ ಸೇರಿ ಪ್ಲಾಸ್ಟಿಕ್ ಖುರ್ಚಿಯೊಂದನ್ನು ಕಟ್ಟಿಗೆಯ ಕೋಲಿಗೆ ಬಳ್ಳಿಯ ಸಹಾಯದಿಂದ ತೊಟ್ಟಿಲಿನ ರೀತಿಯಲ್ಲಿ ಕಟ್ಟಿಕೊಂಡು ಅದರಲ್ಲಿ ಮಹಿಳೆಯನ್ನು ಕೂರಿಸಿ ದೂರಕ್ಕೆ ತಲಾ ಇಬ್ಬರಂತೆ ಹೆಗಲಮೇಲೆ ಹೊತ್ತು ಅಮದಳ್ಳಿ ಗ್ರಾಮವನ್ನು ತಲುಪಿ ಬಳಿಕ ಅಲ್ಲಿಂದ ವಾಹನದ ಮೂಲಕ ಆಸ್ಪತ್ರೆಯನ್ನು ತಲುಪಿದ್ದಾರೆ. ಇದನ್ನೂ ಓದಿ:  ಕಲಾಗ್ರಾಮದಲ್ಲಿ ಕವಿ ಡಾ.ಸಿದ್ದಲಿಂಗಯ್ಯ ಅಂತ್ಯಕ್ರಿಯೆ- ಸರ್ಕಾರದ ಪರ ಅಂತಿಮ ನಮನ ಅರ್ಪಿಸಿದ ಡಿಸಿಎಂ

ವೃದ್ಧೆಗೆ ಚಿಕಿತ್ಸೆ ಲಭಿಸಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ತಪ್ಪದ ಅರಣ್ಯ ಪ್ರದೇಶದಲ್ಲಿ ಇರುವ ಗ್ರಾಮಸ್ಥರ ಗೋಳು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಇರುವ ಬಹುತೇಕ ಹಳ್ಳಿ ಜನರ ಪರಿಸ್ಥಿತಿ ಹೀಗೆಯೇ ಇದೆ. ಕಾರವಾರ ನಗರ ಹತ್ತಿರವೇ ಇದ್ದರೂ ರಸ್ತೆ ಸಂಪರ್ಕ ಇಲ್ಲದ ಕಾರಣ ಈ ಭಾಗದಲ್ಲಿ ಗ್ರಾಮದಿಂದ ಯಾರೇ ಅನಾರೋಗ್ಯಕ್ಕೆ ಒಳಗಾದರೂ ಜೋಲಿ ಮಾಡಿ ತರಬೆರಕಾದ ಸ್ಥಿತಿ ಇದ್ದು, ಕಾಲು ದಾರಿಯಲ್ಲಿ ಸುಮಾರು 1 ಗಂಟೆಗೂ ಅಧಿಕ ಸಮಯ ವ್ಯಯವಾಗುತ್ತದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ಕೆಲಸಗಾತಿ ಅಲ್ಲ, ಪ್ರಚಾರ ಪ್ರಿಯೆ ಅಂತ ಹೇಳೋಕೆ ಬಂದೆ: ಎ. ಮಂಜು

ಒಂದು ವೇಳೆ ತುರ್ತು ಪರಿಸ್ಥಿತಿಯಾಗಿದ್ದರೆ ಹೆಚ್ಚಿನ ಅನಾಹುತವೇ ಸಂಭವಿಸುವ ಸಾಧ್ಯತೆ ಇದೆ. ಈ ಭಾಗದಲ್ಲಿ ಹಲವು ದಶಕಗಳಿಂದ ಇರುವ ಸಮಸ್ಯೆಯಾಗಿದ್ದು ಇದುವರೆಗೂ ಗ್ರಾಮಕ್ಕೆ ತೆರಳಲು ಸೂಕ್ತ ರಸ್ತೆ ವ್ಯವಸ್ಥೆ ಆಗಿಲ್ಲ. ಈ ಬಗ್ಗೆ ಹಲವಾರು ಬಾರಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದರೂ ಇದುವರೆಗೆ ಪ್ರಯೋಜನವಾಗಿಲ್ಲ. ತಮ್ಮ ಗ್ರಾಮಕ್ಕೆ ರಸ್ತೆಯೊಂದನ್ನು ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಹಲವಾರು ವರ್ಷಗಳಿಂದ ಮನವಿ ನೀಡುತ್ತಾ ಬಂದರೂ ಇದುವರೆಗೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಾದರೂ ಈ ಬಗ್ಗೆ ಸರ್ಕಾರ ಗಮನ ಹರಿಸಿ ರಸ್ತೆ ಸಂಪರ್ಕ ಕಲ್ಪಿಸಿ ಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *