ವಿಷ್ಣುವರ್ಧನ್ ಬಗ್ಗೆ ಮಾತಾಡಿದ ವ್ಯಕ್ತಿ ಕ್ಷಮೆಗೆ ಅರ್ಹರಲ್ಲ, ಕ್ಷಮಿಸಲೂ ಬಾರದು: ಸುಮಲತಾ ಕಿಡಿ

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ಸಾಹಸಸಿಂಹ ವಿಷ್ಣುವರ್ಧನ್ ಅವರ ಕುರಿತು ತೆಲುಗು ಚಿತ್ರರಂಗದ ನಟ ವಿಜಯ್ ರಂಗರಾಜು ವಿವಾದಾತ್ಮಹಕ ಹೇಳಿಕೆ ನೀಡಿರುವ ಕುರಿತು ಭಾರೀ ಚರ್ಚೆಯಾಗುತ್ತಿದೆ. ಅಲ್ಲದೆ ಈ ಬಗ್ಗೆ ಕನ್ನಡ ಚಿತ್ರರಂಗದ ಮಂದಿ ನಟನ ವಿರುದ್ಧ ಸಿಡಿದೆದ್ದಿದ್ದಾರೆ. ಅಂತೆಯೇ ಇದೀಗ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರು ವಿಜಯ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡುವ ಮೂಲಕ ರೊಚ್ಚಿಗೆದ್ದ ಸಂಸದೆ, ಕರ್ನಾಟಕದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಘನತೆ ಏನೆಂಬುವುದು ಚೆನ್ನಾಗಿಯೇ ಗೊತ್ತು ಎಂದು ಕಿಡಿಕಾರಿದ್ದಾರೆ.

ಟ್ವೀಟ್‍ನಲ್ಲೇನಿದೆ..?
ಇತ್ತೀಚಿನ ದಿನಗಳಲ್ಲಿ ಜನಪ್ರಿಯ ವ್ಯಕ್ತಿಗಳ ಬಗ್ಗೆ ಇಲ್ಲ ಸಲ್ಲದ ವಿವಾದಾತ್ಮಕ ಹೇಳಿಕೆ ನೀಡಿ ಬಿಟ್ಟಿ ಪ್ರಚಾರ ಪಡೆಯುವುದೇ ಕೆಲವರಿಗೆ ಹವ್ಯಾಸವಾಗಿ ಹೋಗಿದೆ. ಇಡೀ ದೇಶವೇ, ಅದರಲ್ಲೂ ದಕ್ಷಿಣ ಭಾರತೀಯ ಚಿತ್ರ ರಸಿಕರಿಗೆ ನಮ್ಮ ಕರ್ನಾಟಕದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಘನತೆ ಏನೆಂಬುವುದು ಚೆನ್ನಾಗಿಯೇ ಗೊತ್ತು.

ವಿಷ್ಣು ನಮ್ಮನ್ನು ದೈಹಿಕವಾಗಿ ದೂರವಾಗಿ ಹತ್ತು ವರುಷಗಳೇ ಕಳೆದರೂ ಅವರ ಮೇಲಿನ ಅಭಿಮಾನ ಎಳ್ಳಷ್ಟೂ ಕಡಿಮೆಯಾಗದಿರುವುದೇ ಅದಕ್ಕೆ ಸಾಕ್ಷಿ. ಯಾರಿಗೂ ತಿಳಿಯದ, ಯಾರೋ ಒಬ್ಬ ಅವರ ಬಗ್ಗೆ ಮನಸ್ಸೋ ಇಚ್ಛೆ ಕೆಲವು ಕೆಟ್ಟ ಪದಗಳಿಂದ ನಿಂದಿಸಿದರೆ ಅದರಿಂದ ನಮ್ಮ ವಿಷ್ಣುವಿನ ಘನತೆಗೆ ಒಂದು ಸಾಸಿವೆ ಕಾಳಷ್ಟು ಧಕ್ಕೆಯಾಗದು!

ಅದು ಕೇವಲ ಅಂತಹ ಬಾಯಿಬಡುಕ ವ್ಯಕ್ತಿಯ ಕೆಟ್ಟ ಗುಣ ಹಾಗೂ ನೀಚ ಬುದ್ಧಿಯ ಅನಾವರಣವಲ್ಲದೆ ಬೇರೇನಲ್ಲ. ಅದರಲ್ಲೂ ನಮ್ಮನ್ನು ಅಗಲಿದ ವ್ಯಕ್ತಿಯ ಬಗ್ಗೆ ಈ ರೀತಿಯ ತುಚ್ಛವಾಗಿ ಮಾತನಾಡುವುದು ಕ್ಷಮಿಸಲಾಗದ ದೊಡ್ಡ ಅಪರಾಧ. ಇದನ್ನೂ ಓದಿ: ವಿಷ್ಣುವರ್ಧನ್ ಬಗ್ಗೆ ಮಾತಾಡಿದವನ ಚಳಿ ಬಿಡಿಸಿದ ರಾಕಿಭಾಯ್

ಸರಿಯಾದ ಮನಸ್ಥಿತಿ ಉಳ್ಳವನು, ಒಬ್ಬ ವ್ಯಕ್ತಿಯು ಬದುಕಿದ್ದಾಗಲೇ ಅವರ ಬಗ್ಗೆ ಮಾತನಾಡಿ ಅವರ ಪ್ರತಿಕ್ರಿಯೆ ನಿರೀಕ್ಷಿಸುವುದು ಸರಿಯೇ ಹೊರತು, ಅವರ ನಿಧನದ ನಂತರ ಅವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಪ್ರಯತ್ನ, ಕೇವಲ ಹೇಡಿತನದ ಪರಮಾವಧಿ ಅಲ್ಲದೆ ಮತ್ತೇನೂ ಅಲ್ಲ.

ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ವರ್ಚಸ್ಸು ಅವರನ್ನು ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳಿಗೆ ಗೊತ್ತು. ನಾಯಿ ಬೊಗಳಿದರೆ ದೇವಲೋಕ ಹಾಳಾಗದು ಎಂಬುದಕ್ಕೆ ಇದೊಂದು ಸರಿಯಾದ ಉದಾಹರಣೆ. ಇಂತಹ ‘ಚೀಪ್ ಪಬ್ಲಿಸಿಟಿ’ ಗಾಗಿ ಮನಬಂದಂತೆ ಬಾಯಿ ಹರಟುವ ವ್ಯಕ್ತಿಗಳು ಕ್ಷಮೆ ಕೇಳಲು ಅರ್ಹರಲ್ಲ. ಕ್ಷಮಿಸಲು ಆಗದು, ಕ್ಷಮಿಸಲು ಬಾರದು ಎಂದು ಸರಣಿ ಟ್ವೀಟ್ ಮಾಡುವ ಮೂಲಕ ಸಂಸದೆ ಕಿಡಿಕಾರಿದ್ದಾರೆ.

ನಟ ಹೇಳಿದ್ದೇನು?
ತೆಲುಗು ಚಿತ್ರರಂಗದ ನಟ ವಿಜಯ್ ರಂಗರಾಜು ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ವೈರಲ್ ಆಗಿದೆ. ಇದನ್ನು ಗಮನಿಸಿದ ಸ್ಯಾಂಡಲ್‍ವುಡ್ ತಾರೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಶಕಗಳ ಹಿಂದೆ ವಿಷ್ಣುವರ್ಧನ್ ಜೊತೆ ನಟಿಸಿದ್ದಾಗಿ ಹೇಳಿಕೊಂಡಿದ್ದು, ಇದೇ ವೇಳೆ ವಿಷ್ಣುವರ್ಧನ್ ಅವರ ನಡತೆ ಬಗ್ಗೆ ಆಕ್ಷೇಪಣೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಅಂದು ವಿಷ್ಣುವರ್ಧನ್ ಕಾಲರ್ ಹಿಡಿದು ಜಗಳ ಮಾಡಿದ್ದಾಗಿ ಸಹ ಹೇಳಿದ್ದಾರೆ. ಹೀಗಾಗಿ ಆಕ್ರೋಶ ಭುಗಿಲೆದ್ದಿದೆ.

ವಿಷ್ಣುಸೇನೆ, ವಿಷ್ಟುವರ್ಧನ್ ಅಭಿಮಾನಿಗಳು ನಟನ ವಿರುದ್ಧ ಹಲವು ಕಡೆ ದೂರು ದಾಖಲಿಸಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಸಹ ದೂರು ದಾಖಲಿಸಿಕೊಂಡಿದೆ. ಅಲ್ಲದೆ ಸ್ಯಾಂಡಲ್‍ವುಡ್ ನಟರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಯಶ್ ಈ ಬಗ್ಗೆ ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *