ವಿವಾದಕ್ಕೀಡಾದ ಡೆಲ್ಲಿ ಕ್ಯಾಪ್ಟನ್ ಹೇಳಿಕೆ- ಗಂಗೂಲಿಯನ್ನ ಸಂಕಷ್ಟಕ್ಕೆ ಸಿಲುಕಿಸಿದ ಅಯ್ಯರ್

Public TV
2 Min Read

ದುಬೈ: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯರ್ ಅಯ್ಯರ್ ನೀಡಿದ ಒಂದು ಹೇಳಿಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ರೋಚಕ ಗೆಲುವು ಪಡೆದಿತ್ತು. ಆದರೆ ಪಂದ್ಯದ ಟಾಸ್ ಸಂದರ್ಭದಲ್ಲಿ ಮಾತನಾಡಿದ್ದ ಅಯ್ಯರ್, ತನಗೆ ಮಾರ್ಗದರ್ಶನ ನೀಡಲು ಪಾಂಟಿಂಗ್ ಹಾಗೂ ಗಂಗೂಲಿ ಇರುವುದು ನನ್ನ ಅದೃಷ್ಟ. ತಂಡಕ್ಕೂ ಗಂಗೂಲಿ ಅವರ ಮಾರ್ಗದರ್ಶನ ಹಾಗೂ ಸಹಕಾರ ಲಭಿಸುತ್ತಿದೆ ಎಂದು ಹೇಳಿದ್ದರು.

ಶ್ರೇಯರ್ ಅಯ್ಯರ್ ಅವರ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ನಡುವೆಯೇ ಟ್ವೀಟ್ ಮಾಡಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಅಯ್ಯರ್, ಯುವ ನಾಯಕನಾಗಿ ಕಳೆದ ಆವೃತ್ತಿಯಲ್ಲಿ ನನಗೆ ಪಾಂಟಿಂಗ್ ಹಾಗೂ ಗಂಗೂಲಿ ಸಹಕಾರ ನೀಡಿದ್ದರು. ಆದ್ದರಿಂದ ನಾನು ಅವರಿಗೆ ಧನ್ಯವಾದ ಹೇಳುವ ಕ್ರಮದಲ್ಲಿ ಆ ರೀತಿ ಮಾತನಾಡಿದ್ದೇನೆ ಅಷ್ಟೇ. ನನ್ನ ವೈಯುಕ್ತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಬ್ಬರಿಗೂ ಧನ್ಯವಾದ ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು ಎಂದು ಅಯ್ಯರ್ ಸ್ಪಷ್ಟಪಡಿಸಿದ್ದಾರೆ.

ಬಿಸಿಸಿಯ ಅಧ್ಯಕ್ಷರಾಗಿರುವ ಗಂಗೂಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಲಹೆಗಾರರಾಗಲೂ ಹೇಗೆ ಸಾಧ್ಯ, ನಿಯಮಗಳ ಅನ್ವಯ ಇದು ಕಾನ್‍ಫ್ಲಿಕ್ಟ್ ಆಫ್ ಇಂಟ್ರಸ್ಟ್ ಆಗುತ್ತೆ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಕಳೆದ ಆವೃತ್ತಿಯಲ್ಲಿ ಗಂಗೂಲಿ, ಡೆಲ್ಲಿ ತಂಡದ ಮೆಂಟರ್ ಆಗಿದ್ದರು. ಆ ಹಿನ್ನೆಲೆಯಲ್ಲಿ ಅಯ್ಯರ್ ಕೃತಜ್ಞತೆ ತಿಳಿಸಿದ್ದರೆ ಸಾಕಾಗಿತ್ತು ಎಂದು ಕ್ರಿಕೆಟ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಲವರು, ಶ್ರೇಯಸ್ ಅಯ್ಯರ್ ಬಾಯಿ ತಪ್ಪಿ ಹೇಳಿದ್ದಾರೆ. ಅದನ್ನು ದೊಡ್ಡ ವಿವಾದ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ. ಗಂಗೂಲಿ ಅವರ ವಿರುದ್ಧ ಕಾನ್‍ಫ್ಲಿಕ್ಟ್ ಆರೋಪಗಳು ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಐಪಿಎಲ್ ಡ್ರಿಮ್ 11 ಟೈಟಲ್ ಪ್ರಯೋಕತ್ವ ನೀಡುತ್ತಿದೆ. ಇದರ ನಡುವಯೇ ಗಂಗೂಲಿ ಆ್ಯಪ್ ಮೈ ಸರ್ಕಿಲ್ 11 ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಟೀಂ ಇಂಡಿಯಾ ಪ್ರಯೋಕತ್ವ ಹೊಂದಿರುವ ಬೈಜೂಸ್ ಗೆ ಪೈಪೋಟಿ ನೀಡುತ್ತಿರುವ ಆನ್‍ಲೈನ್ ಶಿಕ್ಷಣದ ಆ್ಯಪ್ ಜಾಹೀರಾತಿನಲ್ಲೂ ಗಂಗೂಲಿ ಕಾಣಿಸುತ್ತಿದ್ದಾರೆ. ಬಿಸಿಸಿಐಗೆ ಪ್ರಯೋಜಕತ್ವ ನೀಡುತ್ತಿರುವ ಅಂಬುಜಾ ಸಿಮೆಂಟ್ಸ್ ಬದಲಾಗಿ ಜೆಎಸ್‍ಡಬ್ಲ್ಯೂ ಸಿಮೆಂಟ್ಸ್ ಪರ ಗಂಗೂಲಿ ಪ್ರಚಾರ ಮಾಡುತ್ತಿರುವುದು ತಪ್ಪು ಎಂಬ ವಿಮರ್ಶೆಗಳು ಕೇಳಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *