‘ವಿಮಾನ ಅಪ್ಪಳಿಸಿದಂತೆ ಕೇಳಿದ್ದು, ರಾತ್ರಿಯೇ ಓಡಿದ್ವಿ- ಕಿ.ಮೀಗಟ್ಟಲೆ ದೂರದಿಂದ ಕೊಚ್ಚಿ ಬಂದವು ಸಾವಿರಾರು ಮರಗಳು’

Public TV
1 Min Read

– ಭೀಕರ ದೃಶ್ಯದ ಅನುಭವ ಹಂಚಿಕೊಂಡ ಚೇರಂಗಾಲ ಗ್ರಾಮಸ್ಥರು
– ತಲಕಾವೇರಿಯಲ್ಲಿ ಕುಸಿದ ಭೂಮಿ
– ಜೋಡುಪಾಲದಲ್ಲಿ ಸಂಭವಿಸಿದಂತೆ ಮತ್ತೆ ಭೂಕುಸಿತ

ಮಡಿಕೇರಿ: “ಕೊಡಗಿನಲ್ಲಿ ಮಳೆ ಬರುವುದು ಸಾಮಾನ್ಯ. ಆದರೆ ನಿನ್ನೆ ರಾತ್ರಿ ವಿಮಾನ ಅಪ್ಪಳಿಸದಂತೆ ಏನೋ ಧ್ವನಿ ಕೇಳಿತು. ಕೂಡಲೇ ನಾವೆಲ್ಲ ಮನೆಯಿಂದ ಹೊರ ಬಂದೆವು. ನೋಡಿದಾಗ ಮನೆಯ ಮುಂಭಾಗವೇ ನೀರಿನಲ್ಲಿ ಭಾರೀ ಸಂಖ್ಯೆಯ ಮರಗಳನ್ನು ನೋಡಿ ಜೀವ ಉಳಿಸಿದರೆ ಸಾಕು ಎಂದು ಭಾವಿಸಿ ಮನೆಯನ್ನು ಖಾಲಿ ಮಾಡಿದೆವು” – ಇದು ಕೊಡಗಿನ ಚೇರಂಗಾಲದ ಗ್ರಾಮಸ್ಥರು ರಾತ್ರಿ ನಡೆದ ಘಟನೆಯನ್ನು ವಿವರಿಸಿದ ರೀತಿ.

ಎರಡು ವರ್ಷದ ಹಿಂದೆ ಕೊಡಗಿನ ಜೋಡುಪಾಲ, ಮದೆನಾಡಿನಲ್ಲಿ ಸಂಭವಿಸಿದಂತೆ ಮತ್ತೆ ಚೇರಂಗಾಲದಲ್ಲಿ ಭೂ ಕುಸಿತ ಸಂಭವಿಸಿದೆ. ತಲಕಾವೇರಿ ಕಾಡಿನಿಂದ ಸಾವಿರಾರು ಮರಗಳು ನೀರಿನ ಚಿಕ್ಕ ಕೊಲ್ಲಿಯಲ್ಲಿ ತೇಲಿಕೊಂಡು ಬಂದಿದ್ದು, ಗ್ರಾಮದ ಮನೆಗಳ ಮುಂಭಾಗ ಶೇಖರಣೆಯಾಗಿವೆ. ಇದರಿಂದಾಗಿ ಕೊಲ್ಲಿಯ ನೀರೆಲ್ಲ ಮನೆಗೆ ನುಗ್ಗಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ.

ರಾತ್ರಿ 9ಗಂಟೆ ಹೊತ್ತಿಗೆ ವಿಮಾನ ಅಪ್ಪಳಿಸಿದ ಹಾಗೆ ಭಾರೀ ಶಬ್ದ ಕೇಳಿತು, ಆಗ ಕೊಲ್ಲಿಯಲ್ಲಿ ರಭಸವಾಗಿ ನೀರು ಹರಿದು ಬಂದಿದ್ದು, ಇದರೊಂದಿಗೆ ಸಾವಿರಾರು ಮರಗಳು ಸಹ ತೇಲಿ ಬಂದಿವೆ. ನೀರು ಮನೆಗೆ ನುಗ್ಗಿದ್ದು, ಕುಟುಂಬಸ್ಥರು ಪಕ್ಕದ ಮನೆಗೆ ಹೋಗಿದ್ದಾರೆ. ಇಂತಹ ಅನಾಹುತ ಇಲ್ಲಿಯವರೆಗೆ ನಡೆದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

ಕಾಡು ಪ್ರದೇಶದಿಂದ ಸುಮಾರು 5 ಕಿ.ಮೀ. ದೂರದಿಂದ ಮರಗಳು ಕೊಚ್ಚಿ ಬಂದಿದ್ದು, ಮರಗಳ ರಾಶಿ ಕೊಲ್ಲಿಯಲ್ಲಿ ನಿಂತಿದ್ದರಿಂದ ಕೊಲ್ಲಿಯ ನೋರು ಮನೆಗೆಳಿಗೆ ನುಗ್ಗಿದೆ. ಅಲ್ಲದೆ ಮರಗಳ ಹೊಡೆತಕ್ಕೆ ವಿದ್ಯುತ್ ಕಂಬಗಳು ಬಿದ್ದಿವೆ. ಹೀಗಾಗಿ ಮನೆಯ ವಿದ್ಯುತ್ ಸಂಪರ್ಕ ಸಹ ಕಡಿತವಾಗಿದೆ. ಗಾಳಿಗೆ ಮನೆಯ ಹೆಂಚುಗಳು ಹಾರಿ ಹೋಗಿವೆ. ಸೇತುವೆ ಕೊಚ್ಚಿ ಹೋಗಿದ್ದರಿಂದ ಇಲ್ಲಿನ 10 ಮನೆಗಳಿಗೆ ಸಂಪರ್ಕವಿಲ್ಲ. ಇದರಿಂದಾಗಿ ಹೊರಗಿನವರಿಗೆ ಇಲ್ಲಿಗೆ ಬರಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಪಿಡಿಒಗೆ ಮಾಹಿತಿ ನೀಡಲಾಗಿದೆ. ಭಾಗಮಂಡಲದ ಸಂಪರ್ಕ ಸಹ ಕಡಿತವಾಗಿದ್ದರಿಂದ ಗ್ರಾಮಸ್ಥರೂ ಎಲ್ಲಿಗೂ ಹೋಗದ ಸ್ಥಿತಿಯಲ್ಲಿದ್ದಾರೆ. ನಮಗೆ ಏನಾದರೂ ವ್ಯವಸ್ಥೆ ಕಲ್ಪಿಸಿ ಎಂದು ಗ್ರಾಮಸ್ಥರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *