ವಿಭಿನ್ನವಾಗಿ ಯೋಧ ಕ್ವಾರಂಟೈನ್- ಹಾಡಿ ಹೊಗಳಿದ ಜನ

Public TV
2 Min Read

ಗದಗ: ಕೊರೊನಾ ಸೋಂಕಿತರು, ಕೈಗೆ ಸೀಲ್ ಹಾಕಿದವರು ಕಣ್ಣು ತಪ್ಪಿಸಿ ಎಲ್ಲೆಂದರಲ್ಲಿ ಓಡಾಡ್ತಾರೆ. ಆದರೆ ಜಿಲ್ಲೆಯ ಯೋಧರೊಬ್ಬರು ಅರುಣಾಚಲ ಪ್ರದೇಶದಿಂದ ರಜೆಗೆಂದು ಊರಿಗೆ ಬಂದಿದ್ದು, ನನ್ನಿಂದ ಹಳ್ಳಿ ಜನರಿಗೆ ಸಮಸ್ಯೆ ಆಗಬಾರದು ಅಂತ ತಮ್ಮ ಜಮೀನಿನಲ್ಲಿ ವಿಭಿನ್ನವಾಗಿ ಕ್ವಾರಂಟೈನ್ ಆಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಯೋಧ ಜಿಲ್ಲೆಯ ಅಂತುರು-ಬೆಂತೂರ ಗ್ರಾಮದ ಊರಾಚೆ ಇರುವ ತಮ್ಮ ಜಮೀನಿನ ಮಧ್ಯೆ ಟ್ರ್ಯಾಕ್ಟರ್ ನಲ್ಲಿ ಟೆಂಟ್ ಹಾಕಿಕೊಂಡು ಕ್ವಾರಂಟೈನ್ ಒಳಗಾಗಿದ್ದಾರೆ. ನಮ್ಮ ಯೋಧರು ಎಲ್ಲಿ ಹೋದರೂ ಒಂದು ಗೌರವದ ಪ್ರತೀಕವೆ ಸರಿ. ಯೋಧ ಪ್ರಕಾಶ್ ಹೈಗರ ಯೋಧ ಅರುಣಾಚಲ ಪ್ರದೇಶದಿಂದ ಒಂದು ತಿಂಗಳ ರಜೆ ಮೇಲೆ ತಾಯಿನಾಡಿಗೆ ಬಂದಿದ್ದಾರೆ. ಆದರೆ ಸೇನೆಯಿಂದ ಬಂದವರು ನೇರವಾಗಿ ಊರಿಗೆ ಹೋಗಲಿಲ್ಲ. ಆಸ್ಪತ್ರೆಗೆ ಹೋಗಿ ಹೆಲ್ತ್ ಚೆಕಪ್ ಮಾಡಿಸಿಕೊಂಡು ನೇರವಾಗಿ ಜಮೀನಿನಲ್ಲಿ ವಿಭಿನ್ನ ರೀತಿಯಲ್ಲಿ ಕ್ವಾರಂಟೈನ್ ಆಗಿದ್ದಾರೆ.

ಜಮೀನಿನಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ ಅದಕ್ಕೆ ಟೆಂಟ್ ಹಾಕಿಕೊಂಡು, ಸುತ್ತಲೂ 5 ಮೀಟರ್ ದೂರದವರೆಗೆ ಹಗ್ಗದಿಂದ ಯಾರು ಬರದಂತೆ ಕಟ್ಟಿಕೊಂಡು ಕ್ವಾರಂಟೈನ್ ಆಗಿದ್ದಾರೆ. ನನ್ನಿಂದ ನನ್ನ ಮನೆಯವರಿಗೆ ಮತ್ತು ಊರಿನವರಿಗೆ ಯಾವುದೇ ತೊಂದರೆ ಆಗಬಾರದು ಅಂತ ಜಮೀನಿನಲ್ಲಿ ಉಳಿದುಕೊಂಡಿದ್ದಾರೆ. ಮನೆಯಿಂದ ಊಟ, ಉಪಹಾರ ತರಿಸಿಕೊಂಡು ಕಾಲ ಕಳೆಯುತ್ತಿದ್ದೇನೆ. ನಿತ್ಯ ಕುಟುಂಬದವರು ದಿನ ಜಮೀನಿಗೆ ಬಂದು ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಾರೆ ಎಂದು ಯೋಧ ಪ್ರಕಾಶ್ ಹೇಳುತ್ತಾರೆ.

ಪ್ರಕಾಶ್ ಹೈಗರ್ ಅವರು ಸೈನ್ಯ ಸೇರಿ 14 ವರ್ಷಗಳೇ ಕಳೆದಿವೆ. ಸದ್ಯ ಯುದ್ಧದ ಬಿಕ್ಕಟ್ಟು ಸೃಷ್ಟಿಸಿರುವ ಲಡಾಕ್ ನಲ್ಲಿ ಸುಮಾರು 4 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಅರುಣಾಚಲ ಪ್ರದೇಶದ 49 ನೇ ಬಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 2 ವರ್ಷದ ನಂತರ ಊರಿಗೆ ಬಾರದೆ ಎಷ್ಟೇ ತೊಂದರೆ ಆದರೂ ಸರಿ ಊರಾಚೆ ಇದ್ದರಾಯ್ತು ಅಂತ ಮಳೆ, ಗಾಳಿ, ಚಳಿ ಲೆಕ್ಕಿಸದೆ ಕಾಲ ಕಳೆಯುತ್ತಿದ್ದಾರೆ. ಸೈನ್ಯದಲ್ಲೂ ಯೋಧನ ಪ್ರಮಾಣಿಕ ಸೇವೆಯ ಹಾಗೆಯೇ ಊರಲ್ಲಿಯೂ ಎಲ್ಲರಿಗೂ ಪ್ರೀತಿಯ ಪುತ್ರನಾಗಿರುವುದರಿಂದ ಇಡೀ ಊರೆ ಹಾಡಿ ಹೊಗಳ್ತಿದೆ.

ಈಗಾಗಲೇ ಆರೋಗ್ಯ ಇಲಾಖೆಯವರು ಯೋಧನನ್ನ ತಪಾಸಣೆಗೊಳಿಸಿದೆ. ಆದರೆ ಯಾವುದೇ ಕೊರೊನಾ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ ಆರೋಗ್ಯ ಇಲಾಖೆಯವರು ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗಲು ತಿಳಿಸಿದ್ದರು. ಹಾಗಿದ್ದರೂ ಯೋಧ ಯಾರಿಗೂ ನನ್ನಿಂದ ತೊಂದರೆ ಯಾಗದಿರಲಿ ಅಂತ ಜಮೀನಿನಲ್ಲಿ ವಿಭಿನ್ನವಾಗಿ ಕ್ವಾರಂಟೈನ್ ಆಗಿರುವುದು ಇತರರಿಗೆ ಮಾದರಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *