ವಿದ್ಯಾರ್ಥಿನಿ ರೇಪ್, ಕೊಲೆ ಕೇಸ್- ಕರ್ತವ್ಯಕ್ಕೂ ಮೀರಿ ಮಾನವೀಯತೆ ಮೆರೆದ ಪಿಎಸ್‍ಐ

Public TV
2 Min Read

– ಮಾನವೀಯತೆ ಮೆರೆದ ಪಿಎಸ್‍ಐ ವಾಸೀಂವುಲ್ಲಾ

ಬೆಂಗಳೂರು: ಅನ್ಯ ರಾಜ್ಯದ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವೇಳೆ ಮರಣೋತ್ತರ ಪರೀಕ್ಷೆಯ 10 ಸಾವಿರ ರೂ. ವೆಚ್ಚವನ್ನು ಪಿಎಸ್‍ಐ ವಾಸೀಂವುಲ್ಲಾ ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತಮ್ಮ ಕಾರ್ಯದ ಮೂಲಕ ಬ್ಯಾಡರಹಳ್ಳಿ ಠಾಣಾ ಪಿಎಸ್‍ಐ ವಸೀಂ ವುಲ್ಲಾ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೃತಪಟ್ಟ ಅನ್ಯ ರಾಜ್ಯದ ಯುವತಿಯ ಶವದ ಮರಣೋತ್ತರ ಪರೀಕ್ಷೆಗೆ 10 ಸಾವಿರ ರೂ. ಶುಲ್ಕವನ್ನು ವೈಯಕ್ತಿಕವಾಗಿ ನೀಡಿದ್ದಾರೆ. ಮಾತ್ರವಲ್ಲದೆ ಗೌರವಯುತವಾಗಿ ಮೃತ ಯುವತಿಯ ಶವವನ್ನು ಅಸ್ಸಾಂಗೆ ತಲುಪಿಸಲು ನೆರವಾಗಿದ್ದಾರೆ. ಡಿ.17ರಂದು ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಟ್ವಿಸ್ಟ್
ಕಾಲೇಜು ವಿದ್ಯಾರ್ಥಿನಿ ರೇಪ್ ಆ್ಯಂಡ್ ಮರ್ಡರ್ ಕೇಸ್‍ಗೆ ಟ್ವಿಸ್ಟ್ ಸಿಕ್ಕಿದ್ದು, ನಾನು ರೇಪ್ ಮಾಡಿಲ್ಲ ಒಪ್ಪಿತ ಲೈಂಗಿಕ ಕ್ರಿಯೆಯಾಗಿತ್ತು. ಅಲ್ಲದೆ ನಾನು ಕೊಲೆ ಮಾಡಿಲ್ಲ ರಕ್ತಸ್ರಾವವಾಗಿ ಅವಳೇ ಪ್ರಜ್ಞೆ ತಪ್ಪಿದಳು ಎಂದು ಆರೋಪಿ ತಿಳಿಸಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸರು ಆರೋಪಿ ರೆಹಮಾನ್‍ನನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. ಪೊಲೀಸರ ತನಿಖೆ ವೇಳೆ ಆರೋಪಿ ಕಣ್ಣೀರಿಟ್ಟಿದ್ದು, ಕೆಲ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿದ್ಯಾರ್ಥಿ ರೆಹಮಾನ್‍ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಒಪ್ಪಿಗೆ ಮೇರೆಗೆ ಲೈಂಗಿಕ ಕ್ರಿಯೆ ನಡೆದಿತ್ತು. ನಾನು ಸೆಕ್ಸ್ ಮಾಡುವಾಗ ಆಕೆಯೇ ಪ್ರಜ್ಞೆ ತಪ್ಪಿದಳು. ನಾನು ಕೊಲೆ ಮಾಡಿಲ್ಲ ಎಂದು ಆರೋಪಿ ಕಣ್ಣಿರಿಟ್ಟಿದ್ದಾನೆ.

ನಾನು ಖಾಸಗಿ ಕಾಲೇಜ್‍ನಲ್ಲಿ 2ನೇ ವರ್ಷದ ಪ್ಯಾರಾಮೆಡಿಕಲ್ ವ್ಯಾಸಂಗ ಮಾಡುತ್ತಿದ್ದೆ. ವಿದ್ಯಾರ್ಥಿನಿ ಸಹೋದರ ನನಗೆ ಪರಿಚಯವಿದ್ದ. ಈ ಹಿನ್ನಲೆ ವಿದ್ಯಾರ್ಥಿನಿ ಕುಟುಂಬಕ್ಕೆ ನಾನು ಹತ್ತಿರವಾಗಿದ್ದೆ. ಪ್ಯಾರಾಮೆಡಿಕಲ್ ಕೋರ್ಸ್ ಗೆ ಡಿಮ್ಯಾಂಡ್ ಇದೆ ಎಂದು ಹೇಳಿ ನಾನು ವ್ಯಾಸಂಗ ಮಾಡುತ್ತಿರುವ ಕಾಲೇಜಿನಲ್ಲೇ ಅವಳಿಗೂ ಪ್ರವೇಶ ಕೊಡಿಸುತ್ತೇನೆ ಎಂದು ಹೇಳಿದ್ದೆ. ಅದರಂತೆ ಬೆಂಗಳೂರಿಗೆ ಬಂದು ಖಾಸಗಿ ಕಾಲೇಜ್ ನಲ್ಲಿ ಪ್ಯಾರಾಮೆಡಿಕಲ್ ಕೊರ್ಸ್ ಗೆ ರೆಫರ್ ಮಾಡಿದ್ದೆ ಎಂದು ಆರೋಪಿ ವಿಚಾರಣೆ ವೇಳೆ ಪೊಲೀಸರಿಗೆ ವಿವರಿಸಿದ್ದಾನೆ.

ಕಾಲೇಜಿನ ಪ್ರವೇಶ ಪ್ರಕ್ರಿಯೆ ಬಾಕಿಯಿದ್ದ ಕಾರಣ ಡಿಸೆಂಬರ್ 15ರಂದು ಯುವತಿ ಬೆಂಗಳೂರಿಗೆ ಬಂದು ಹಾಸ್ಟೆಲ್ ನಲ್ಲಿ ತಂಗಿದ್ದಳು. ಬಳಿಕ ಯುವತಿಗೆ ಕರೆ ಮಾಡಿ ನನ್ನ ರೂಮ್ ಬಳಿ ಬರುವಂತೆ ತಿಳಿಸಿದೆ. ಅದರಂತೆ ಯುವತಿ ಆಟೋ ಮಾಡಿಕೊಂಡು ನನ್ನ ಮನೆ ಬಳಿ ಬಂದಿದ್ದಳು. ಈ ವೇಳೆ ಇಬ್ಬರು ಪರಸ್ಪರ ಒಪ್ಪಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೆವು. ಆಗ ತೀವ್ರ ರಕ್ತಸ್ರಾವ ಉಂಟಾಗಿ ಯುವತಿ ಪ್ರಜ್ಞೆ ತಪ್ಪಿ ಬಿದ್ದಳು. ಆಟೋ ಮಾಡಿಕೊಂಡು ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದೆ. ಈ ವೇಳೆ ತೀವ್ರ ರಕ್ತಸ್ರಾವದಿಂದ ಮಾರ್ಗ ಮಧ್ಯೆ ಯುವತಿ ಸಾವನ್ನಪ್ಪಿದಳು ಎಂದು ತಿಳಿಸಿದ್ದಾನೆ.

ಬ್ಯಾಡರಹಳ್ಳಿ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದು, ಮೃತ ಯುವತಿಯ ಮರಣೋತ್ತರ ಪರೀಕ್ಷಾ ವರದಿಗೆ ಕಾಯುತ್ತಿದ್ದಾರೆ. ಯುವತಿ ಈಶಾನ್ಯ ರಾಜ್ಯದಿಂದ ವಿದ್ಯಾಭ್ಯಾಸ ಮಾಡಲು ನಗರಕ್ಕೆ ಬಂದಿದ್ದಳು. ವಿದ್ಯಾಭ್ಯಾಸಕ್ಕೆ ಬಂದ ಯುವತಿಯನ್ನು ರೇಪ್ ಆ್ಯಂಡ್ ಮರ್ಡರ್ ಮಾಡಿದ ಘಟನೆ ನಡೆದಿತ್ತು.

Share This Article
Leave a Comment

Leave a Reply

Your email address will not be published. Required fields are marked *