ವಾಜಪೇಯಿ ಜನ್ಮದಿನಾಚರಣೆ – ಗೋಪಾಲಕನಾಗಿ ಪ್ರತಾಪ್‍ಸಿಂಹ ವಿಶೇಷ ಗೌರವ

Public TV
2 Min Read

– ಸಿದ್ದರಾಮಯ್ಯ ವಿರುದ್ಧ ಕಿಡಿ
– ಪೊಲೀಸರಲ್ಲಿ ಸಂಸದ ಮನವಿ

ಮೈಸೂರು: ಇಂದು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಅಜಾತಶ್ರುವಿನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.

ಮೈಸೂರಿನ ಪಿಂಜರಾಪೋಲ್ ಗೋಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ಗೋಶಾಲೆಯಲ್ಲಿ ಸಗಣಿ ಬಾಚಿ ಗೋಪಾಲಕನಾಗಿ ಸೇವೆ ಸಲ್ಲಿಸಿದ್ದಾರೆ. ಗೋಪೂಜೆಗಾಗಿ ತಾನೇ ಹಸುವಿನ ಮೈತೊಳೆದು ಮೇವು ತಿನ್ನಿಸಿ ಆರೈಕೆ ಮಾಡಿ. ಗೋಶಾಲೆಯಲ್ಲಿ ಶ್ರಮದಾನ ಮಾಡುವ ಮೂಲಕ ವಿಭಿನ್ನವಾಗಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತಾನಾಡುತ್ತಾ ಸಿದ್ದರಾಮಯ್ಯನವರ ಕೊಡವರು ಗೋಮಾಂಸ ತಿನ್ನುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ನಿಮ್ಮ ಅಕ್ಕ-ಪಕ್ಕದಲ್ಲಿರುವ ಕೊಡವರು ಯಾರೋ ಗೋಮಾಂಸ ತಿನ್ನಬಹುದು. ಆದರೆ ಆ ಕಾರಣಕ್ಕೆ ಇಡೀ ಕೊಡವರನ್ನು ಗೋಮಾಂಸ ತಿನ್ನುತ್ತಾರೆ ಎಂದರೆ ಹೇಗೆ.? ನೀವು ಗೋಮಾಂಸ ತಿನ್ನುತ್ತೀರಿ ಅಂತ ಇಡೀ ಕುರುಬ ಸಮಾಜ ಬೀಫ್ ತಿನ್ನುತ್ತಾರೆ ಎಂದರೆ ಅದೂ ಸರಿಯೇ ಎಂದು ಸಿದ್ದರಾಮಯ್ಯ ಅವರನ್ನು ಸಂಸದ ಪ್ರತಾಪ್‍ಸಿಂಹ ಪ್ರಶ್ನಿಸಿದರು.

ಸಿದ್ದರಾಮಯ್ಯ ವಿವೇಚನೆ ಇಲ್ಲದೆ ಯಾಕೇ ಮಾತನಾಡಿದ್ದಾರೆ ಅನ್ನೋದೆ ನನಗೆ ಅರ್ಥ ಆಗುತ್ತಿಲ್ಲ. ಆತ್ಮದ್ರೋಹದ ಮಾತುಗಳನ್ನ ಕಾಂಗ್ರೆಸ್ಸಿನವರು ಮಾತ್ರ ಮಾತನಾಡೋಕೆ ಸಾಧ್ಯ. ಕೊಡವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಮಾಜಿ ಸಿಎಂಗೆ ಸಂಸದ ಎಚ್ಚರಿಕೆ ನೀಡಿದರು.

ಕೊಡವರು ಗೋಮಾತೆಯನ್ನು ಎರಡನೆ ತಾಯಿಯಾಗಿ ನೋಡುತ್ತಾರೆ. ನಿಮ್ಮ ಹೇಳಿಕೆಯಿಂದ ಕೋಟ್ಯಂತರ ಜನರ ಭಾವನೆಗೆ ಧಕ್ಕೆಯಾಗಿದೆ. ನಿಮ್ಮ ತಪ್ಪಿನ ಅರಿವಾಗಿ ಅದನ್ನ ತಪ್ಪಾಗಿ ಅರ್ಥೈಸಲಾಗಿದೆ ಅಂತ ಹೇಳಿದ್ದೀರಾ. ಆದರೆ ಇನ್ನು ಮುಂದೆ ಕೊಡವರಿಗೆ ನೋವಾಗುವಂತೆ ಮಾತನಾಡಬೇಡಿ ಎಂದರು.

ಕೊರೊನಾ ಮತ್ತು ಮಾಸ್ಕ್ ವಿಚಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಸಂಸದರು, ಜನರನ್ನು ಇನ್ನೆಷ್ಟು ದಿನ ಮನೆಯಲ್ಲಿ ಕೂರಿಸಲು ಸಾಧ್ಯ. ಕಳೆದ ಮಾರ್ಚ್‍ನಿಂದಲೂ ಜನರು ನಿರ್ಬಂಧದ ವ್ಯವಸ್ಥೆಯಲ್ಲೆ ಇದ್ದಾರೆ. ಇನ್ನಾದರೂ ಜನರನ್ನು ಓಡಾಡಲು ಬಿಡಿ. ಮಾಸ್ಕ್ ಹೆಸರಿನಲ್ಲಿ ಜನರಿಗೆ ಕಾರು, ಬೈಕ್ ನಿಲ್ಲಿಸಿ ಅನಗತ್ಯ ತೊಂದರೆ ಕೊಡಬೇಡಿ ಎಂದು ಪೊಲೀಸರೊಂದಿಗೆ ಮನವಿ ಮಾಡಿಕೊಂಡರು.

ನಾನು ದೆಹಲಿ ಸೇರಿದಂತೆ ಹಲವು ಪ್ರದೇಶಗಳಿಗೆ ಹೋಗಿ ಬಂದಿದ್ದೇನೆ. ಎಲ್ಲ ಕಡೆ ಕೊರೊನಾ ರೂಪಾಂತರದ ಬಗ್ಗೆ ಚರ್ಚೆ ಇದೆ. ಆದರೆ ಜನರನ್ನು ಹೆಚ್ಚು ದಿನ ನಿರ್ಬಂಧ ಮಾಡೋಕೆ ಸಾಧ್ಯವಿಲ್ಲ. ಹಾಗಾಗಿ ಉದ್ಯಮ ಹಾಗೂ ಅವರ ದೈನಂದಿನ ಚಟುವಟಿಕೆಗಳಿಗೆ ಅವಕಾಶ ಕೊಡಬೇಕು. ಮಾಸ್ಕ್ ಕಡ್ಡಾಯ ಮಾಡಲಿ ಎಂದು ಪ್ರತಾಪ್ ಸಿಂಹ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *