ವಲಸಿಗರ ಸಭೆ – ಮಿತ್ರಮಂಡಳಿಗೆ ತಿರುಗೇಟು ಕೊಟ್ಟ ರಮೇಶ್ ಜಾರಕಿಹೊಳಿ

Public TV
1 Min Read

ಬೆಂಗಳೂರು: ಬಿಜೆಪಿಗೆ ವಲಸೆ ಬಂದವರು ಪರ್ಯಾಯ ಸಭೆ ನಡೆಸುವುದು ಬಂದ್ ಆಗಲಿ ಎಂದು ಹೇಳುವ ಮೂಲಕ ಸಚಿವ ರಮೇಶ್ ಜಾರಕಿಹೊಳಿ ಮಿತ್ರಮಂಡಳಿಗೆ ತಿರುಗೇಟು ನೀಡಿದ್ದಾರೆ.

ಇಂದು ದೆಹಲಿಯಿಂದ ವಾಪಸ್ ಆಗಿರುವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇಂದು ತಮ್ಮ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಕೇಂದ್ರ ಸಚಿವರ ಜೊತೆ ನಡೆದ ಭೇಟಿ ಬಗ್ಗೆ ಸಿಎಂಗೆ ಮಾಹಿತಿ ಕೊಟ್ಟಿದ್ದೇನೆ. ದೆಹಲಿಗೆ ಸಿಟಿ ರವಿ ಆಫೀಸ್ ಪೂಜೆಗೆ ಹೋಗಿದ್ದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ವಲಸಿಗರ ಸಭೆ ವಿಚಾರವಾಗಿ ಮಾತನಾಡಿದ ಅವರು, ನನ್ನ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದ್ದು ನನಗೆ ಗೊತ್ತಿಲ್ಲ. ನನ್ನದೇನಿದರೂ ಇಲಾಖೆಯ ಕೆಲಸದ ಕಡೆ ಗಮನ ಕೊಡೋದು. ಪರ್ಯಾಯ ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಸಭೆಯಲ್ಲಿ ಏನಾಯ್ತು ಅಂತ ಕೇಳಿ ಸಣ್ಣವನಾಗಲ್ಲ. ಸಭೆ ನಡೆಸಿದವರೇ ಹೇಳಲಿ. ಈ ರೀತಿಯ ಸಭೆ ನಡೆಸುವುದು ಬಂದ್ ಆಗಬೇಕು. ಇದು ಶಿಸ್ತಿನ ಪಕ್ಷ, ಇಲ್ಲಿ ಸಿಎಂ ನಿರ್ಧಾರವೇ ಅಂತಿಮ ಎಂದು ಹೇಳುವ ಮೂಲಕ ಮಿತ್ರಮಂಡಳಿಗೆ ತಿರುಗೇಟು ನೀಡಿದರು.

ನಾನು 17 ಶಾಸಕರ ನಾಯಕ ಅಲ್ಲ. ನಮ್ಮದು ಸಾಮೂಹಿಕ ನಾಯಕತ್ವ. ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು, ಅದು ನಮ್ಮ ಒತ್ತಾಯವಾಗಿದೆ. ಆದರೆ ಕೆಲವೊಂದು ವಿಚಾರವನ್ನು ನಾನು ಬಹಿರಂಗವಾಗಿ ಹೇಳಲು ಆಗಿಲ್ಲ. ಸಿಎಂ ಹಾಗೂ ಹೈಕಮಾಂಡ್ ಜೊತೆ ಚರ್ಚೆ ಮಾಡಿದ್ದೇವೆ. ನಮ್ಮದು ಸಾಮೂಹಿಕ ನಾಯಕತ್ವ, ಸಾಮೂಹಿಕ ನಾಯಕತ್ವದಲ್ಲೇ ನಾವು ಬಿಜೆಪಿಗೆ ಬಂದಿದ್ದು ನಾನು ನಾಯಕ ಎಂದು ಎಲ್ಲೂ ಹೇಳಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ ವಿಚಾರವಾಗಿ ಡಿಕೆಶಿ ಆರೋಪದ ಬಗ್ಗೆ ಮಾತನಾಡಿದ ಅವರು, ಡಿಕೆಶಿ ಯಾವ ಸಚಿವರ ಬಗ್ಗೆ ಹೇಳಿದರೋ ಗೊತ್ತಿಲ್ಲ. ದೆಹಲಿಗೆ ನಾನೊಬ್ಬನೇ ಸಚಿವ ಹೋಗಿರಲಿಲ್ಲ. ಆರ್ ಅಶೋಕ್ ಸಹ ಹೋಗಿದ್ರು. ನಾವು ಬೆಳಗಾವಿಯವರು ನೇರವಂತರು, ಅಶೋಕ್ ಕೊಟ್ಟಿರಬಹದು ಎಂದು ತಮಾಷೆ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *