ವರನಿಗೆ 2ರ ಮಗ್ಗಿ ಬರದಿದ್ದಕ್ಕೆ ಮದುವೆ ಕ್ಯಾನ್ಸಲ್

Public TV
1 Min Read

ಲಕ್ನೋ: ಮದುವೆ ಮನೆಯಲ್ಲಿ ವರದಕ್ಷಿಣೆ, ಊಟ ಸರಿ ಇಲ್ಲ ಹೀಗೆ ಹಲವು ಕಾರಣಗಳಿಗೆ ಕಿರಿಕ್ ಮಾಡಿಕೊಂಡು ಮದುವೆ ಮುರಿದು ಬೀಳುವುದನ್ನು ನೋಡಿದ್ದೇವೆ. ಆದರೆ ಉತ್ತರಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ವರನಿಗೆ 2ರ ಮಗ್ಗಿ ಹೇಳಲು ಬಂದಿಲ್ಲ ಎಂದು ಮದುವೆ ರದ್ದಾಗಿದೆ.

ವಧು ದಿಬ್ಬಣದೊಂದಿಗೆ ವಿವಾಹ ಮಂಟಪವನ್ನು ತಲುಪಿದ್ದಳು. ಆ ಸಂದರ್ಭದಲ್ಲೇ ವರನ ಶೈಕ್ಷಣಿಕೆ ಅರ್ಹತೆಗಳ ಬಗ್ಗೆ ಅನುಮಾನ ಹೊಂದಿದ್ದ ವಧು, ಹೂ ಮಾಲೆ ಹಾಕುವುದಕ್ಕೂ ಮೊದಲು 2ರ ಮಗ್ಗಿ ಹೇಳು ಎಂದಿದ್ದಾಳೆ. ಆದರೆ ವರನಿಗೆ ಮಗ್ಗಿ ಹೇಳಲು ಸಾಧ್ಯವಾಗಿಲ್ಲ. ಇದರಿಂದ ಸಿಟ್ಟು ಮಾಡಿಕೊಂಡ ವಧು ವಿವಾಹ ರದ್ದು ಮಾಡಿ ಹೊರಟು ಹೋಗಿದ್ದಾಳೆ. ವರ ಅವಿದ್ಯಾವಂತ ಎಂದು ಗೊತ್ತಾಗಿ ವಧುವಿನ ಕುಟುಂಬಸ್ಥರು ಕೂಡ ಶಾಕ್ ಆಗಿದ್ದಾರೆ.

ಇದು ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಮದುಮಗ ಮಹೋಬಾ ಜಿಲ್ಲೆಯ ಧವಾರ್ ಗ್ರಾಮದವನಾಗಿದ್ದ. 2 ಕುಟುಂಬದ ಸದಸ್ಯರು ಮತ್ತು ಹಲವಾರು ಗ್ರಾಮಸ್ಥರು ಮದುವೆಗಾಗಿ ಸೇರಿದ್ದರು. ಇನ್ನೇನು ಮದುವೆ ನಡೆಯಬೇಕು ಎನ್ನುವಾಗ ವಧು ಮಂಟಪದಿಂದ ಹೊರನಡೆದಿದ್ದಾಳೆ. ಗಣಿತದ ಬೇಸಿಕ್ ಅಂಶಗಳನ್ನು ಕೂಡ ತಿಳಿದಿಲ್ಲದ ವ್ಯಕ್ತಿಯನ್ನು ನಾನು ಮದುವೆಯಾಗಲು ಸಾಧ್ಯವಿಲ್ಲ ಎಂದು ಆಕೆ ಹೇಳಿದ್ದಾಳೆ. ವಧುವನ್ನು ಮನವೊಲಿಸುವಲ್ಲಿ ಸ್ನೇಹಿತರು ಮತ್ತು ಸಂಬಂಧಿಕರು ವಿಫಲರಾಗಿದ್ದಾರೆ ಎಂದು ಪನ್ವಾರಿ ಸ್ಟೇಷನ್ ಹೌಸ್ ಆಫೀಸರ್ ವನೋದ್ ಕುಮಾರ್ ಹೇಳಿದ್ದಾರೆ.

ವರನಿಗೆ ಓದು ಬರಹ ಬರುವುದಿಲ್ಲ ಎನ್ನುವ ವಿಷಯವನ್ನು ಕುಟುಂಬಸ್ಥರು ನಮ್ಮಿಂದ ಮುಚ್ಚಿಟ್ಟಿದ್ದರು ಎಂದು ವಧುವಿನ ಸೋದರಸಂಬಂಧಿ ಹೇಳಿದ್ದಾರೆ. ಗ್ರಾಮದ ಮುಖ್ಯಸ್ಥರು ಮಧ್ಯಪ್ರವೇಶಿಸಿ ಎರಡೂ ಕುಟುಂಬಗಳ ನಡುವೆ ರಾಜಿ ಮಾಡಿಸಿದ ಹಿನ್ನೆಲೆ ಪೊಲೀಸರು ಕೇಸ್ ದಾಖಲಿಸಿಲ್ಲ. ಎರಡೂ ಕಡೆಯವರು ಉಡುಗೊರೆ ಮತ್ತು ಆಭರಣಗಳನ್ನು ಪರಸ್ಪರ ವಾಪಸ್ ನೀಡುವಂತೆ ಒಪ್ಪಂದಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *