ರಿಪೋರ್ಟ್ ಬರುವ ಮೊದಲೇ ಮನೆಗೆ ಕಳುಹಿಸಿದ್ರು-ಸರ್ಕಾರದ ಎಡವಟ್ಟಿಗೆ ಜನರ ಆಕ್ರೋಶ

Public TV
1 Min Read

– ಮನೆ ಸೇರಿದ್ದ 13 ಮಂದಿ ಆಸ್ಪತ್ರೆಗೆ ಶಿಫ್ಟ್
– ಉಡುಪಿಯಲ್ಲಿ ಸೋಂಕಿತರ ಸಂಖ್ಯೆ 177ಕ್ಕೇರಿಕೆ

ಉಡುಪಿ: ಮಹಾರಾಷ್ಟ್ರದಿಂದ ಬಂದು ಏಳು ದಿನ ಕ್ವಾರಂಟೈನ್ ಮುಗಿಸಿ ಮನೆಗೆ ಹೋದ 12 ಜನ ಕೊರೊನಾ ಸ್ಫೋಟಿಸಿದ್ದಾರಾ ಎಂಬ ಅನುಮಾನ ಎದ್ದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹದ್ದೊಂದು ಎಡವಟ್ಟು ನಡೆದಿದ್ದು, ಉಡುಪಿಯ ಜನ ಭಯಭೀತರಾಗಿದ್ದಾರೆ.

ಮಹಾರಾಷ್ಟ್ರದಿಂದ ಬಂದ 12 ಜನರಲ್ಲಿ ಮತ್ತು ತೆಲಂಗಾಣದಿಂದ ಬಂದ ಓರ್ವಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಇಲಾಖೆಯ ಸೂಚನೆಯಂತೆ ಏಳು ದಿನ ಕ್ವಾರಂಟೈನ್ ಮುಗಿಸಿದವರನ್ನು ಶುಕ್ರವಾರವಷ್ಟೇ ಮನೆಗೆ ಕಳುಹಿಸಲಾಗಿತ್ತು. ಆಗಿನ್ನೂ ಇವರ ವರದಿ ಬಂದಿರಲಿಲ್ಲ. ಇಂದು ಕೆಲ ವೈದ್ಯಕೀಯ ವರದಿಗಳು ಜಿಲ್ಲಾಡಳಿತದ ಕೈ ಸೇರಿದ್ದು, ಈ ಪೈಕಿ ಹದಿಮೂರು ಮಂದಿಗೆ ಸೋಂಕು ತಗುಲಿರುವುದು ಕಂಡು ಬಂದಿದೆ.

ನೆಮ್ಮದಿಯಾಗಿ ಮನೆ ಸೇರಿದ್ದ ಹದಿಮೂರು ಮಂದಿಯನ್ನು ಗುರುತಿಸಿ ಜಿಲ್ಲಾಡಳಿತ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿದೆ. ಕೊರೊನಾ ಪೀಡಿತರು ಕುಟುಂಬಸ್ಥರ ಜೊತೆ ಸೇರಿದ್ದರಿಂದ ಅವರಿಗೂ ಸೋಂಕು ಹರಡಿರುವ ಸಾಧ್ಯತೆ ಇದೆ. ಇದೀಗ ಸೋಂಕಿತರ ಮನೆಯನ್ನು ಕ್ಲೋಸ್ ಮಾಡಬೇಕಾ, ಇಡೀ ಏರಿಯಾವನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಬೇಕಾ ಎಂಬ ಗೊಂದಲ ಜಿಲ್ಲಾಡಳಿತಕ್ಕಿದೆ. ಗಂಟಲ ದ್ರವ ಪಡೆದು, ವರದಿ ಬರುವ ಮೊದಲೇ ಮನೆಗೆ ಕಳುಹಿಸಿರುವ ಅಧಿಕಾರಿಗಳ ಎಡವಟ್ಟಿನಿಂದಾಗಿ ಅಲ್ಲಿನ ಜನತೆ ಆತಂಕ ಪಡುವಂತಾಗಿದೆ.

ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 177ಕ್ಕೆ ಏರಿಕೆಯಾಗಿದ್ದು, ಶನಿವಾರ ಒಂದೇ ದಿನ 13 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *