ವಯಸ್ಸು, ಅನುಭವದಲ್ಲಿ ಹಿರಿಯರಾದ ಸಿದ್ದರಾಮಯ್ಯರಿಂದ ಬೊಮ್ಮಾಯಿಗೆ ಸಲಹೆ

Public TV
2 Min Read

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿಯವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈ ಬೆನ್ನಲ್ಲೇ ವಯಸ್ಸಿನಲ್ಲಿ ಹಾಗೂ ಅನುಭವದಲ್ಲಿ ಹಿರಿಯರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೆಲವೊಂದಿಷ್ಟು ಸಲಹೆಗಳನ್ನು ನೀಡಿ ಅವುಗಳನ್ನು ಬೊಮ್ಮಾಯಿ ಈಡೇರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ನಲ್ಲೇನಿದೆ..?
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ್ ಬೊಮ್ಮಾಯಿ ಅವರಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು. ಜವಾಬ್ದಾರಿಯುತ ವಿರೋಧಪಕ್ಷವಾಗಿ ನಿಮಗೆ ರಚನಾತ್ಮಕ ಸಹಕಾರದ ಭರವಸೆಯನ್ನು ನೀಡಬಯಸುತ್ತೇನೆ. ಇದೇ ರೀತಿಯ ಸಹಕಾರ ನಿಮ್ಮ ಪಕ್ಷದಿಂದಲೂ ಸಿಗಲಿ ಎಂದು ಹಾರೈಸುತ್ತೇನೆ.

ಕಳೆದೆರಡು ವರ್ಷಗಳಿಂದ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಎಸಗಿರುವುದು ಕೇಂದ್ರದ ಬಿಜೆಪಿ ಸರ್ಕಾರ. ಅಧಿಕಾರದ ಆಸೆಯೋ, ತಿಳುವಳಿಕೆಯ ಕೊರತೆಯೋ, ಇಲ್ಲವೇ ಅವ್ಯಕ್ತ ಭೀತಿಯೋ ಬಿಎಸ್ ಯಡಿಯೂರಪ್ಪ ಅವರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸೊಲ್ಲೆತ್ತಲಿಲ್ಲ. ಆ ಧೈರ್ಯ ನೀವು ತೋರಿಸುತ್ತೀರಿ ಎಂದು ನಂಬಿದ್ದೇನೆ. ಇದನ್ನೂ ಓದಿ: ನಾನುಶ್ರೀನಿವಾಸ್ ಪ್ರಸಾದ್ ಮಾತು ಹೇಳಿದ್ದೆ ಹೇಳೋ ಕಿಸುಬಾಯಿ ದಾಸಯ್ಯ ಥರ : ಧೃವನಾರಾಯಣ್ ವ್ಯಂಗ್ಯ

ಬರಪರಿಹಾರ, ಜಿಎಸ್ ಟಿ ಪಾಲು, ತೆರಿಗೆ ಹಂಚಿಕೆ, ಕೊರೊನಾ ನಿಯಂತ್ರಣಕ್ಕೆ ನೆರವು -ಈ ಎಲ್ಲ ವಿಚಾರಗಳಲ್ಲಿ ಬೊಮ್ಮಾಯಿ ಸರ್ಕಾರ ಕರ್ನಾಟಕವನ್ನು ಮಲತಾಯಿ ಧೋರಣೆಯಲ್ಲಿ ಕಂಡಿದೆ. ಇದನ್ನು ಕೇಂದ್ರದ ಗಮನಕ್ಕೆ ತಂದು ರಾಜ್ಯಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ನೀವು ಆದ್ಯತೆಯಿಂದ ಮಾಡಬೇಕು ಎಂದು ಬರೆದುಕೊಂಡು ಬೊಮ್ಮಾಯಿಗೆ ಟ್ಯಾಗ್ ಮಾಡಿದ್ದಾರೆ.

ರಾಜ್ಯಕ್ಕೆ ಅನ್ಯಾಯವಾದಾಗ ಸರ್ವಪಕ್ಷಗಳ ಸಭೆ ಮತ್ತು ನಿಯೋಗದ ಮೂಲಕ ನ್ಯಾಯ ಪಡೆಯುವ ಪರಂಪರೆ ನಮ್ಮಲ್ಲಿದೆ. ಕಳೆದ 2 ವರ್ಷಗಳ ಅವಧಿಯಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಬುನಾದಿಯಾದ ಮುಕ್ತ ಚರ್ಚೆ – ಸಂವಾದಗಳೇ ನಿಂತುಬಿಟ್ಟಿವೆ. ನೀವು ಇದಕ್ಕೆ ಮರುಚಾಲನೆ ನೀಡುವಿರೆಂಬ ನಿರೀಕ್ಷೆ ನನ್ನದು.

ಮುಖ್ಯಮಂತ್ರಿ ಸ್ಥಾನ ಪಕ್ಷದ ಹುದ್ದೆಯಲ್ಲ, ಅದು ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು. ವಿರೋಧ ಪಕ್ಷವಾಗಿ ಸೈದ್ಧಾಂತಿಕ ಸಂಘರ್ಷ ಜಾರಿಯಲ್ಲಿದ್ದರೂ ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ನಾವೆಲ್ಲ ಒಂದು ತಂಡವಾಗಿ ಕೆಲಸಮಾಡಬೇಕೆಂದು ನಿಮಗಿಂತ ವಯಸ್ಸು ಮತ್ತು ಅನುಭವದಲ್ಲಿ ಹಿರಿಯನಾದ ನನ್ನ ಸಲಹೆಯಾಗಿದೆ. ಇದನ್ನೂ ಓದಿ: ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ಮಾತ್ರ ಕೆಲಸ ಮಾಡ್ತೇನೆ: ವಿಜಯೇಂದ್ರ

ಸಾರ್ವಜನಿಕ ಮಹತ್ವದ ಹತ್ತಾರು ಪತ್ರಗಳನ್ನು ಬರೆದರೂ ಪ್ರತಿಕ್ರಿಯಿಸುವ ಸೌಜನ್ಯವನ್ನೂ ಹಿಂದಿನ ಮುಖ್ಯಮಂತ್ರಿಗಳು ತೋರಿಲ್ಲ ಎನ್ನುವುದನ್ನು ವಿಷಾದದಿಂದ ಹೇಳಬೇಕಾಗಿದೆ. ಪಾರದರ್ಶಕತೆ ಪ್ರಜಾಪ್ರಭುತ್ವದ ಆತ್ಮವಾಗಿದೆ. ನಿಮ್ಮ ಕಾಲದಲ್ಲಿಯಾದರೂ ಮಾಹಿತಿ ವಿನಿಮಯ ಸುಗಮವಾಗಿ ನಡೆಯುವಂತೆ ಮಾಡುವಿರೆಂದು ನಂಬಿದ್ದೇನೆ ಎಂದು ದೀರ್ಘವಾಗಿ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *