ವಧು ನೋಡಲು ತೆರಳಿದ್ದ 8 ಮಂದಿಗೆ ಕೊರೊನಾ ಸೋಂಕು

Public TV
1 Min Read

ಚಿಕ್ಕಮಗಳೂರು: ವಧುವನ್ನು ನೋಡಲು ಹೋದ 8 ಮಂದಿಗೆ ಕೊರೊನಾ ಪಾಸಿಟಿವ್ ಬಂದಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ತರೀಕೆರೆ ತಾಲೂಕಿನ ಗಡಿ ಗಿರಿಯಾಪುರ ಹಾಗೂ ದಂದೂರು ಸೇರಿದಂತೆ ಒಂದೇ ವಂಶದ ಮೂರು ಹಳ್ಳಿಯ ಸುಮಾರು 20 ಮಂದಿ ಭದ್ರಾವತಿ ಮೂಲದ ವ್ಯಕ್ತಿ ಜೊತೆ ತುಮಕೂರಿಗೆ ವಧುವನ್ನು ನೋಡಲು ಹೋಗಿದ್ದರು. ವಧುವನ್ನು ನೋಡಿ ಹಿಂದಿರುಗುವಾಗ ಹೆಮ್ಮಾರಿ ಕೊರೊನಾ ಜೊತೆ ವಾಪಾಸ್ ಆಗಿದ್ದಾರೆ.

ವಧು ನೋಡಲು ತೆರಳಿದ್ದ ಸುಮಾರು 20 ಮಂದಿಯಲ್ಲಿ 8 ಜನಕ್ಕೆ ಕೊರೊನಾ ಪಾಸಿಟಿವ್ ಬಂದಿದೆ. ತುಮಕೂರಿಗೆ ಹೋಗಿ ಬಂದ ಗ್ರಾಮಸ್ಥರಿಗೆ ಸೋಂಕು ತಗುಲಿರುವುದರಿಂದ ಮೂರು ಹಳ್ಳಿಯ ಜನರಲ್ಲಿ ಇದೀಗ ಆತಂಕ ಎದುರಾಗಿದೆ. ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣಗಳು ಇರಲಿಲ್ಲ. ಆದರೆ ಮೇ 19 ರಿಂದ ಆರಂಭವಾದ ಪಾಸಿಟಿವ್ ಗಳ ಸಂಖ್ಯೆ ಇಂದು 70ಕ್ಕೇರಿದೆ.

ಇಂದು ಒಂದೇ ದಿನ ಜಿಲ್ಲೆಯಲ್ಲಿ 17 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಇಂದು ಜಿಲ್ಲೆಯ ಒಟ್ಟು 17 ಕೇಸ್ ಗಳ ಪೈಕಿ ಬಹುತೇಕ ಕೇಸ್ ಗಳಿಗೆ ಬೆಂಗಳೂರಿನ ನಂಟಿದೆ. ಬೆಂಗಳೂರಿನಲ್ಲಿ ಎಂಎಸ್‍ಸಿ ಕಂಪನಿ ಉದ್ಯೋಗಿ ಬೆಂಗಳೂರಿನಿಂದ ಹಿಂತಿರುಗಿ ಬಂದು ತನ್ನ ಕುಟುಂಬದ ಮೂವರಿಗೆ ಸೋಂಕು ಹರಡಿದೆ. ತರೀಕೆರೆ ತಾಲೂಕಿನ ಸೋಂಕಿತೆಯಿಂದ ಪ್ರತಿದಿನ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿಗೆ ಹೋಗಿ ಬರುತ್ತಿದ್ದ ಉಪನ್ಯಾಸಕರಿಗೂ ಹೆಮ್ಮಾರಿ ತಗುಲಿದೆ.

ಬೆಂಗಳೂರಿನಿಂದ ಹಿಂದಿರುಗಿ ಬಂದಿದ್ದ ವಕೀಲ, ತರಕಾರಿ ವ್ಯಾಪಾರಿ ಹಾಗೂ ಯುವಕನಲ್ಲೂ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಅವರಿಂದಲೂ ಕೂಡ ಕುಟುಂಬ ಸದಸ್ಯರಿಗೆ ಸೋಂಕು ತಗುಲಿಸಿದ್ದಾರೆ. ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜಿಲ್ಲೆಯ ಜನ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಮಳೆ ಆರಂಭವಾಗಿದ್ದು ಇದೇ ವೇಳೆ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗುತ್ತಿರುವುದರಿಂದ ಆತಂಕ ಇಮ್ಮಡಿಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *