ಬೆಂಗಳೂರು: ವಂಚಕ ಯುವರಾಜ ದುಡ್ಡು ಮಾಡಿದ್ದೆಲ್ಲ ಹಿಂದಿನ ಸರ್ಕಾರದಲ್ಲೇ, ನಮ್ಮ ಸರ್ಕಾರ ಆತನನ್ನ ಬಂಧನ ಮಾಡಿ ಬಯಲಿಗೆ ಎಳೆದಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಾಂಗ್ರೆಸ್ ಕಾಲೆಳೆದಿದ್ದಾರೆ.
ಬಿಜೆಪಿ ಹಲವರು ನಾಯಕರ ಜೊತೆಯಲ್ಲಿ ವಂಚಕ ಯುವರಾಜ್ ಫೋಟೋದಲ್ಲಿ ಕಾಣಿಸಿಕೊಂಡಿರುವ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ನಮ್ಮ ಸರ್ಕಾರ ಆತನ ಬಂಧನ ಮಾಡಿ ಪ್ರಕರಣವನ್ನು ಬಯಲಿಗೆ ಎಳೆದಿದೆ. ರಾಜಕಾರಣಿಗಳು ಎಂದರೆ ಜನರ ಗುಂಪಲ್ಲಿ ಎಲ್ಲರೂ ಬಂದು ಫೊಟೋವನ್ನು ತೆಗೆದುಕೊಳ್ಳುತ್ತಾರೆ ಬೇಡ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಅದನ್ನೇ ಗುರಿಯಾಗಿಟ್ಟುಕೊಳ್ಳುವುದು ಸರಿಯಲ್ಲ. ಯಾರೂ ಕೂಡಾ ಅವರೊಂದಿಗೆ ಸಂಪರ್ಕವನ್ನು ಹೊಂದಿಲ್ಲ. ಯುವರಾಜ್ ಜೊತೆಯಲ್ಲಿ ಏನಾದರೂ ವ್ಯವಹಾರ ನಡೆಸಿದ್ದರೆ ನಾವು ಕೇಳಬಹುದೇ ಹೊರತು ಫೋಟೋವನ್ನು ಮಾತ್ರ ಇಟ್ಟುಕೊಂಡು ಹೀಗೆ ಹೇಳುವುದು ಸರಿಯಾದುದ್ದಲ್ಲ ಎಂದು ಹೇಳಿದ್ದಾರೆ.
ಯಾರು ಬಂದು ಸೆಲ್ಫಿ ತಗೋತಾರೋ ಯಾರು ನಮ್ಮಪಕ್ಕದಲ್ಲಿ ಬಂದು ನಿಲ್ಲುತ್ತಾರೋ ಎನ್ನುವುದು ನಮಗೆ ಗೊತ್ತಿರುವುದಿಲ್ಲ. ಇದು ಎಲ್ಲ ಪಕ್ಷದ ನಾಯಕರಿಗೂ ಈ ಸಮಸ್ಯೆಯಾಗುತ್ತಿದೆ. ನಾವು ಇನ್ನು ಮುಂದಿನ ದಿನಗಳಲ್ಲಿ ಜಾಗೃತರಾಗಿರಬೇಕು. ಮಹನೀಯರು, ಸಂತರು, ಸಾಧುಗಳು ಇದ್ದಾರೆ ಅಂಥವರ ಹೆಸರಲ್ಲಿ ವೇಷ ಧರಿಸಿ ವಂಚನೆ ಮಾಡುವ ಇವರು ಕ್ರಿಮಿನಲ್ಗಳು, ಇಂಥವರಿಗೆ ಶಿಕ್ಷೆಯಾಗಬೇಕು. ನಮ್ಮ ಸರ್ಕಾರ ಈ ಪ್ರಕರಣವನ್ನು ಬಯಲಿಗೆ ಎಳದಿದೆ ಎಂದಿದ್ದಾರೆ.
ಕೆ ಸಿ ವೇಣುಗೋಪಾಲ್ ಜತೆಗೂ ಯುವರಾಜನ ಫೊಟೋ ಇದೆ. ವೇಣುಗೋಪಾಲ್ ಅವರಿಗೆ ಏನ್ ಹೇಳಿದ್ನೋ ಗೊತ್ತಿಲ್ಲ. ಪ್ರಧಾನಿ ಮಾಡಿಸ್ತೀನಿ ಅಂತ ವೇಣುಗೋಪಾಲ್ ಗೆ ಹೇಳಿದ್ದಾನೇನೋ ಎಂದು ಸುಧಾಕರ್ ವ್ಯಂಗ್ಯ ಮಾಡಿದ್ದಾರೆ.