ಲೋನ್ ಕೊಡಿಸುವ ನೆಪದಲ್ಲಿ ಚಿನ್ನ ಎಗರಿಸಿ ಪರಾರಿ

Public TV
1 Min Read

– ದಾರಿ ಕೇಳುವ ನೆಪದಲ್ಲಿ ಮುಗ್ದ ಜನರ ಪರಿಚಯ

ಹಾಸನ: ಬ್ಯಾಂಕ್‍ನಲ್ಲಿ ಲೋನ್ ಮಾಡಿಸಿಕೊಡುವುದಾಗಿ ಹೇಳಿ ಅಮಾಯಕರನ್ನು ವಂಚಿಸುತ್ತಿದ್ದ ಆರೋಪಿಯನ್ನು ಜಿಲ್ಲೆಯ ಶಾಂತಿಗ್ರಾಮ ಪೊಲೀಸರು ಬಂಧಿಸಿದ್ದಾರೆ.

ಮಹೇಶ್ (44) ಬಂಧಿತ ಆರೋಪಿ. ಬಂಧಿತನಿಂದ ಎರಡೂವರೆ ಲಕ್ಷ ಮೌಲ್ಯದ 55 ಗ್ರಾಂ. ಚಿನ್ನದ ಒಡವೆ, 34 ಸಾವಿರ ನಗದು, ಕೃತ್ಯಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಮಹೇಶ್ ಬೈಕ್‍ನಲ್ಲಿ ತೆರಳುವಾಗ ಹಳ್ಳಿಗಳಲ್ಲಿ ದಾರಿ ಕೇಳುವ ನೆಪದಲ್ಲಿ ಮುಗ್ದ ಜನರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ನಾನು ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದು, ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸುಲಭವಾಗಿ ಲೋನ್ ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ಮೊಬೈಲ್ ನಂಬರ್ ಪಡೆದು ಎರಡು ಮೂರು ದಿನ ನಿರಂತರವಾಗಿ ಕರೆ ಮಾಡುತ್ತಿದ್ದ.

ಹೀಗೆ ಕರೆ ಮಾಡಿ ನಂತರ ಒಡವೆ ತೆಗೆದುಕೊಂಡು ಬ್ಯಾಂಕ್ ಬಳಿ ಬರಲು ಹೇಳುತ್ತಿದ್ದ. ಆರೋಪಿ ಒಡವೆ ಪಡೆದು ಇಲ್ಲಿಯೇ ಕುಳಿತಿರಿ. ನಿಮ್ಮ ಒಡವೆ ಅಡವಿಟ್ಟು ಹಣ ತಂದುಕೊಡುತ್ತೇನೆ ಎಂದು ನಂಬಿಸಿ ಪರಾರಿಯಾಗುತ್ತಿದ್ದ. ಹೀಗೆ ಜಿಲ್ಲೆಯ ವಿವಿಧ ಕಡೆಯ ಜನರಿಗೆ ವಂಚಿಸಿದ್ದು, ಶಾಂತಿಗ್ರಾಮ, ಹಾಸನ ನಗರ, ಹಿರೀಸಾವೆ, ತಿಪಟೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟಾರೆ ಆರು ಜನರಿಗೆ ವಂಚಿಸಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *