ಲಿಂಗಾಯತ ಸಮುದಾಯಕ್ಕೆ ಸಿಎಂ ಬಂಪರ್ ಗಿಫ್ಟ್!

Public TV
1 Min Read

ಬೆಂಗಳೂರು: ವೀರಶೈವ ಲಿಂಗಾಯತರಿಗೆ ಬಂಪರ್ ಮೇಲೆ ಬಂಪರ್ ಸಿಗುತ್ತಿದೆ. ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ಬಿಗ್ ಗಿಫ್ಟ್ ನೀಡಲಿದ್ದಾರೆ. ಮೊನ್ನೆಯಷ್ಟೇ ಲಿಂಗಾಯತ ನಿಗಮ ಸ್ಥಾಪನೆ ಆದೇಶ ನೀಡಿದ್ದ ಸಿಎಂ, ನಿಗಮಕ್ಕೆ 500 ಕೋಟಿ ಆರಂಭಿಕ ಅನುದಾನ ಘೋಷಿಸಿದ್ದರು. ಇದೀಗ ಲಿಂಗಾಯತ ಸಮುದಾಯಕ್ಕೆ ಮತ್ತಷ್ಟು ಬಂಪರ್ ಗಿಫ್ಟ್ ನೀಡಲಿದ್ದಾರೆ.

ಲಿಂಗಾಯತ ಓಲೈಕೆಗೆ ಯಡಿಯೂರಪ್ಪ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಕೇಂದ್ರದ ಒಬಿಸಿ ಪಟ್ಟಿಗೆ ಲಿಂಗಾಯತ ಸಮುದಾಯ ಸೇರ್ಪಡೆಗೆ ಶಿಫಾರಸು ಮಾಡಲಿದ್ದಾರೆ. ತರಾತುರಿಯಲ್ಲಿ ಕ್ಯಾಬಿನೆಟ್ ಅಜೆಂಡಾಗೆ ಸೇರಿಸಿರುವ ಸಿಎಂ, ಕೇಂದ್ರಕ್ಕೆ ಶಿಫಾರಸು ಕಳಿಸುವಲ್ಲಿ ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಇಂದು ಬೆಳಗ್ಗೆ 10.30ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಬಳಿಕ ಸಿಎಂ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಿಎಂ ಈ ಬಗ್ಗೆ ಖುದ್ದು ಘೋಷಣೆ ಮಾಡಲಿದ್ದಾರೆ. ನಿನ್ನೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮುಖ್ಯಮಂತ್ರಿಗಳನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದರು. ಈ ವೇಳೆ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು 2ಎಗೆ ಸೇರಿಸಬೇಕು ಎಂದು ಮನವಿ ಮಾಡಿದ್ದರು. ಆಗ ಸಿಎಂ, ಕೆಲವೇ ದಿನಗಳಲ್ಲಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದರು ಎನ್ನಲಾಗಿದೆ.

ಇನ್ನು ಇದೇ ವಿಚಾರವಾಗಿ ನಿನ್ನೆ ಸಿಎಂ ಲಿಂಗಾಯತ ಸಚಿವರ ಜೊತೆ ಪ್ರತ್ಯೇಕ ಚರ್ಚೆ ನಡೆಸಿದ್ದರು. ಸಚಿವ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಸಿ.ಸಿ ಪಾಟೀಲ್ ಹಾಗೂ ಶಶಿಕಲಾ ಜೊಲ್ಲೆ ಜೊತೆ ಸಿಎಂ ಪ್ರತ್ಯೇಕ ಮಾತುಕತೆ ನಡೆಸಿದ್ದರು.

ಈ ಹಿಂದೆಯೇ ಪಂಚಮಸಾಲಿಯನ್ನು 2ಎಗೆ ಸೇರಿಸಬೇಕು ಎಂದು ಹೋರಾಟ ನಡೆದಿತ್ತು. ಈ ಹಿಂದೆ ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಒತ್ತಾಯಿಸಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿತ್ತು. ಲಿಂಗಾಯತ ಸಮುದಾಯದಲ್ಲಿ ಒಟ್ಟು 102 ಜಾತಿಗಳನ್ನು ಗುರುತಿಸಲಾಗಿದೆ. ಅದರಲ್ಲಿ ಈಗಾಗಲೇ 30 ಜಾತಿಗಳು ಒಬಿಸಿ ಪಟ್ಟಿಯಲ್ಲಿವೆ. ಒಬಿಸಿ ಪಟ್ಟಿಗೆ ಸೇರಿಸುವುದಾದರೆ ಉಳಿದ 72 ಜಾತಿಗಳನ್ನು ಸೇರಿಸಬೇಕು ಎಂದು ಸಮುದಾಯದ ವೀರಶೈವ ಲಿಂಗಾಯತ ಸ್ವಾಮೀಜಿಗಳು ಒತ್ತಾಯಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *