ಲಾಕ್‍ಡೌನ್ ಸಮಯದಲ್ಲಿ ಹಣ ಕೂಡಿಸಿ, ಬಡಾವಣೆ ನಿವಾಸಿಗಳಿಂದ ಕೆರೆ ನಿರ್ಮಾಣ

Public TV
1 Min Read

ಧಾರವಾಡ: ಕಳೆದ 8 ವರ್ಷಗಳಿಂದ ಕೆರೆ ನಿರ್ಮಾಣಕ್ಕಾಗಿ ಸರ್ಕಾರವನ್ನು ಎದುರು ಕಣ್ಣು ತೆರೆದು ಕುಳಿತಿದ್ದ ಬಡಾವಣೆಯ ಜನತೆ, ಕಾದು ಬೇಸತ್ತು ಇದೀಗ ತಾವೇ ಮುಂದೆ ನಿಂತು ಕೆರೆ ನಿರ್ಮಾಣ ಮಾಡಿದ್ದಾರೆ.

ಜನ ಮನಸು ಮಾಡಿದರೆ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಧಾರವಾಡದ ಲಕಮನಹಳ್ಳಿ ಕೆರೆ ಉದಾಹರಣೆಯಾಗಿದ್ದು, ಧಾರವಾಡ ಹೊರವಲಯದ ಲಕಮನಹಳ್ಳಿ ಕೈಗಾರಿಕಾ ಪ್ರದೇಶದ ಬಸವೇಶ್ವರ, ಶಾಖಾಂಬರಿ ನಗರ, ನಂದಿನ ಲೇಔಟ್ ಹಾಗೂ ಗುರುದೇವ ನಗರದ ಜನತೆ ಲಾಕ್‍ಡೌನ್ ಸಮಯದಲ್ಲಿ 1.05 ಎಕರೆ ಕೆರೆಯನ್ನು ನಿರ್ಮಾಣ ಮಾಡಿ ಮೆಚ್ಚುಗೆಗೆ ಪಾತ್ರಾಗಿದ್ದಾರೆ.

ಈ ಮೂಲಕ ಹಲವು ವರ್ಷಗಳ ತಮ್ಮ ಮಹದಾಸೆಯನ್ನು ತಾವೇ ಸಾಕಾರಗೊಳಿಸಿದ್ದಾರೆ. ಕಳೆದ 8 ವರ್ಷಗಳಿಂದ ಕೆರೆ ನಿರ್ಮಾಣ ಮಾಡುವಂತೆ ಇಲ್ಲಿಯ ಜನರು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಯಾರೂ ಕೈ ಜೋಡಿಸಲಿಲ್ಲ. ನಂತರ ಲಾಕ್‍ಡೌನ್ ಸಮಯದಲ್ಲಿ ಕೆರೆ ಜಾಗವನ್ನು ಸ್ವಚ್ಛಗೊಳಿಸಿದ ನಿವಾಸಿಗಳು, ನಾವೇ ಯಾಕೆ ಕೆರೆ ನಿರ್ಮಾಣ ಮಾಡಬಾರದು ಎಂದು ಕೆಲಸ ಪ್ರಾರಂಭಿಸಿದರು.

ಅದೇ ರೀತಿ 3.5 ಲಕ್ಷ ರೂ.ಹಣವನ್ನು ತಮ್ಮ ಬಡಾವಣೆಯ ಜನರಿಂದ ಸಂಗ್ರಹಿಸಿದರು. ಕೆಲವರು ಹಣದ ಜೊತೆ ಶ್ರಮದಾನ ಮಾಡಿದ್ರೆ, ಇನ್ನು ಕೆಲವರು ಹಣ ಕೊಟ್ಟರು. ಪ್ರತಿಯೊಬ್ಬರೂ ತಮ್ಮ ಶಕ್ತಿಗೆ ತಕ್ಕಂತೆ 2 ಸಾವಿರದಿಂದ 50 ಸಾವಿರ ವರೆಗೆ ಹಣ ನೀಡಿದ್ದಾರೆ. ಕೆರೆ ಒತ್ತುವರಿ ಮಾಡಿದವರನ್ನು ಬಿಡಿಸಿ, ಜನರೇ ಕೆರೆ ನಿರ್ಮಾಣ ಮಾಡಲು ಲಾಕ್‍ಡೌನ್ ಕೂಡಾ ಕಾರಣವಾಯಿತು.

Share This Article
Leave a Comment

Leave a Reply

Your email address will not be published. Required fields are marked *