ಲಾಕ್‍ಡೌನ್ ಮಾಡದಿದ್ದರೆ ತಿಂಗಳಲ್ಲಿ 32 ಲಕ್ಷ ಪ್ರಕರಣ – ಸರ್ಕಾರಕ್ಕೆ ಐಐಎಸ್‍ಸಿ, ಫನ್ನಾ ಎಚ್ಚರಿಕೆ

Public TV
3 Min Read

– ಬೀದಿಗಳಲ್ಲಿ ಜನ ಸಾಯ್ತಾರೆ ಎಚ್ಚರ!
– ಸಭೆಯ ಹಂತದಲ್ಲಿರುವ ಬಿಎಸ್‍ವೈ ಸರ್ಕಾರ

ಬೆಂಗಳೂರು: ಸರ್ಕಾರ ಜನರ ಜೀವ ಉಳಿಸೋ ದೃಷ್ಟಿಯಿಂದ ಲಾಕ್‍ಡೌನ್ ಘೋಷಿಸದೇ ಹೋದರೆ ಕರ್ನಾಟಕಕ್ಕೆ ಗಂಡಾಂತರ ತಪ್ಪಿದ್ದಲ್ಲ ಅಂತ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ ಅಭಿಪ್ರಾಯ ಪಟ್ಟಿದೆ.

ಐಐಎಸ್‍ಸಿ ಸರ್ಕಾರಕ್ಕೆ ಎಚ್ಚರಿಕೆ:
ಮೇ ಮಧ್ಯ ಭಾಗದಲ್ಲಿ ಸಕ್ರಿಯ ಕೇಸ್‍ಗಳ ಸಂಖ್ಯೆ 5 ಲಕ್ಷ ಮೀರಬಹುದು. ಜೂನ್ ಮೊದಲ ವಾರದಲ್ಲಿ ಶೇ.80ರಷ್ಟು ಸೋಂಕು ಹೆಚ್ಚಳ ಸಾಧ್ಯತೆ ಇದೆ. ದೀರ್ಘಾವಧಿ ಲಾಕ್‍ಡೌನ್‍ನಿಂದ ಮಾತ್ರ ಸೋಂಕಿನ ಪ್ರಸರಣವನ್ನು ತಡೆಯಬಹುದು. ಹೀಗಾಗಿ 15 ದಿನ ಲಾಕ್‍ಡೌನ್ ಮಾಡಿದರೆ ಪರಿಣಾಮ ಜಾಸ್ತಿ ಇರಲಿದೆ. ಏಕಾಏಕಿ ಲಾಕ್‍ಡೌನ್ ವಿನಾಯ್ತಿ ಬದಲು ಹಂತ-ಹಂತವಾಗಿ ವಿನಾಯ್ತಿ ಕೊಡಿ ಅಂತ ರಾಜ್ಯ ಸರ್ಕಾರಕ್ಕೆ ಐಐಎಸ್‍ಸಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದೆ.

ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷರಾದ ಡಾ. ಪ್ರಸನ್ನ ಅವರು ಕೂಡ ಕಠಿಣ ನಿರ್ಧಾರ ಅಂತಲ್ಲ. ಜನರ ಜೀವ ಉಳಿಸೋಕೆ ಲಾಕ್‍ಡೌನ್ ಅನಿವಾರ್ಯ. ಜನರ ಜೀವ ಉಳಿದರೆ ಆರ್ಥಿಕತೆ ತನ್ನಿಂತಾನೇ ಬೂಸ್ಟ್ ಆಗುತ್ತೆ ಅಂತ ಹೇಳಿದ್ದಾರೆ.

ಮಹಾರಾಷ್ಟ್ರವನ್ನೇ ಉದಾಹರಣೆ ತೆಗೆದುಕೊಳ್ಳಬೇಕು. ಬೆಂಗಳೂರು ಇರಲಿ, ಹಳ್ಳಿಗಳಲ್ಲಿ ವೇಗವಾಗಿ ಸೋಂಕು ಹರಡ್ತಿದೆ. ಹಳ್ಳಿಗಳಲ್ಲಿ ಜನರಿಗೆ ಟ್ರೀಟ್‍ಮೆಂಟ್ ಸಿಗದೆ ಬೀದಿಗಳಲ್ಲಿ ಒದ್ದಾಡಿ ಸಾವನ್ನಪ್ತಿದ್ದಾರೆ. ಈ ದೃಶ್ಯಗಳನ್ನ ನೋಡ್ತಿದರೆ ಕರುಳು ಕಿತ್ತು ಬರ್ತಿದೆ. ಮತ್ತೊಂದು ಕಡೆ ಆರೋಗ್ಯ ವಲಯದ ಮೇಲೂ ವಿಪರೀತ ಒತ್ತಡ ಆಗುತ್ತಿದೆ. ಸಿಬ್ಬಂದಿಗೂ ಸೋಂಕು ಹರಡ್ತಿದ್ದು, ಅಭಾವ ಶುರುವಾಗ್ತಿದೆ. ಹಾಗಾಗಿ, ಸರ್ಕಾರ ಆದಷ್ಟು ಬೇಗ ಸಂಪೂರ್ಣ ಲಾಕ್‍ಡೌನ್ ಘೋಷಿಸಬೇಕು. ಇದರಿಂದ ಸೋಂಕು ಹಬ್ಬೋ ವೇಗಕ್ಕೆ ಬ್ರೇಕ್ ಬೀಳುತ್ತೆ. ಸೋಂಕಿನ ಲಿಂಕ್ ಕಡಿತವಾಗಲಿಕ್ಕೆ ಸಹಕಾರ ಆಗುತ್ತೆ ಅಂತ ಡಾ. ಪ್ರಸನ್ನ ಹೇಳಿದ್ದಾರೆ.

ಡಾ. ಪ್ರಸನ್ನ

ಸರ್ಕಾರಕ್ಕೆ ತಜ್ಞರ ಎಚ್ಚರಿಕೆ:
ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಮರಣಮೃದಂಗ ದಿನದಿಂದ ದಿನಕ್ಕೆ ಹೆಚ್ಚಾಗ್ತಲೇ ಇದೆ. ಇವತ್ತು ಕೂಡ 49 ಸಾವಿರಕ್ಕೂ ಹೆಚ್ಚು ಸೋಂಕು, 328 ಸಾವಾಗಿದೆ. ಬೆಂಗಳೂರಿನಲ್ಲಿ 23 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಕಾಡಿದೆ. ಸಕ್ರಿಯ ಕೇಸ್‍ಗಳ ಸಂಖ್ಯೆ 5.17 ಲಕ್ಷ ದಾಟಿದೆ. ಬೆಂಗಳೂರಿನಲ್ಲೇ 3.32 ಲಕ್ಷ ಆಕ್ಟೀವ್ ಕೇಸ್‍ಗಳಿವೆ. ಸಂಪೂರ್ಣ ಲಾಕ್‍ಡೌನ್ ಮಾಡದೇ ಹೋದರೆ ಸೋಂಕು ನಿಯಂತ್ರಣ ಕಷ್ಟ. ಕಷ್ಟ ಅಂತ ತಜ್ಞರು ಕೂಡ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಲಾಕ್‍ಡೌನ್‍ಗೆ ವಿಳಂಬ ಯಾಕೆ?:
ರಾಜ್ಯದಲ್ಲಿ ಲಾಕ್‍ಡೌನ್‍ನಂಥ ಕಠಿಣ ಕ್ರಮಕ್ಕೆ ಸರ್ಕಾರ ಮೀನಮೇಷ ಎಣಿಸ್ತಿದೆ. ನೆರೆಯ ಕೇರಳದಲ್ಲಿ ಒಂದು ವಾರಗಳ ಕಾಲ ಕಂಪ್ಲೀಟ್ ಲಾಕ್‍ಡೌನ್ ಮಾಡಿದೆ. ಮೇ 8ರಿಂದ 16ರವರೆಗೆ ಕೇರಳ ಸ್ತಬ್ಧವಾಗ್ತಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಕೂಡ ಲಾಕ್‍ಡೌನ್‍ನಿಂದಾಗಿ ಸೋಂಕಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಮುಖ ಖಂಡಿದೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಲಾಕ್‍ಡೌನ್ ಬಗ್ಗೆ ಗೊಂದಲವೋ..? ವಿಳಂಬವೋ..? ಅದ್ಯಾರು ತಡೀತಿದ್ದಾರೋ…? ಅದ್ಯಾವ ವಿಷಯಕ್ಕೆ ತಡೀತಿದ್ದಾರೋ..? ಅದ್ಯಾರ ಅಪ್ಪಣೆಗೆ ಕಾಯ್ತಿದ್ದಾರೋ..? ಗೊತ್ತಾಗ್ತಿಲ್ಲ.

ಸಭೆಯ ಹಂತದಲ್ಲಿ ಸರ್ಕಾರ:
ನಮಗಿಂತ ಕೇರಳದಲ್ಲಿ ಕಡಿಮೆ ಸೋಂಕು, ಕಡಿಮೆ ಸಾವಿದ್ದರೂ, ಫುಲ್ ಲಾಕ್‍ಡೌನ್ ಆಗಿದೆ. ಈಗಾಗಲೇ ಲಾಕ್‍ಡೌನ್ ಜಾರಿ ವಿಚಾರದಲ್ಲಿ ದಾರಿ ತಪ್ಪಿರೋ ಸರ್ಕಾರ ಇನ್ನೂ ಚರ್ಚೆ ಹಂತದಲ್ಲಿದೆ. ಈಗ ಕೆಲಸಕ್ಕೆ ಬಾರದ ಜನತಾ ಲಾಕ್‍ಡೌನ್ ಮುಗಿಯಲು ಇನ್ನೂ 6 ದಿನ ಬಾಕಿ ಉಳಿದಿದ್ದು, ಮುಂದೆ ಏನ್ ಮಾಡಬೇಕು ಅನ್ನೋದರ ಚರ್ಚೆಗೆ ಮೇ 10ಕ್ಕೆ ಸಭೆ ಕರೆದಿದ್ದಾರೆ. 2 ವಾರಗಳ ಜನತಾ ಲಾಕ್‍ಡೌನ್‍ನಿಂದ ಆಗಿರುವ ಲಾಭಗಳ ಬಗ್ಗೆ ತಜ್ಞರ ವರದಿ ಬಗ್ಗೆ ಪರಿಶೀಲನೆ, ವಿಮರ್ಶೆ ಮಾಡಲಿದ್ದಾರೆ. ಆ ಬಳಿಕ, ಮುಖ್ಯಮಂತ್ರಿಗಳು ಅದ್ಯಾವ ತೀರ್ಮಾನ ಮಾಡ್ತಾರೋ.. ಅಷ್ಟೊತ್ತಿಗೆ ಸೋಂಕು.. ಸಾವು ಅದೆಷ್ಟು ಆಗುತ್ತೋ…? ಮುಖ್ಯಮಂತ್ರಿಗಳೇ ಬಲ್ಲರು.

Share This Article
Leave a Comment

Leave a Reply

Your email address will not be published. Required fields are marked *