ಬಯಲು ಸೀಮೆ ಕೋಲಾರದಲ್ಲಿ ನೀರಿನ ಜೊತೆಗೆ ರಕ್ತಕ್ಕೂ ಬರ..!

Public TV
2 Min Read

-ಕೊರೊನಾದಿಂದ ಮತ್ತಷ್ಟು ಬಿಗಡಾಯಿಸಿದ ಪರಿಸ್ಥಿತಿ

ಕೋಲಾರ: ಮಹಾಮಾರಿ ಕೊರೊನಾ ತಡೆಗಟ್ಟಲು ಸರ್ಕಾರ ಮುನ್ನಚ್ಚರಿಕೆ ಕ್ರಮವಾಗಿ ಮಾಡಿದ ಲಾಕ್‍ಡೌನ್ ಎಫೆಕ್ಟ್ ಸಾಕಷ್ಟು ಕ್ಷೇತಗಳಿಗೆ ಹೊಡೆತ ಬಿದ್ದಿದೆ. ಬರದನಾಡು ಕೋಲಾರ ಜಿಲ್ಲೆಯಲ್ಲಿ ಲಾಕ್‍ಡೌನ್ ಎಫೆಕ್ಟ್ ನಿಂದ ರಕ್ತಕ್ಕೂ ಬರ ಬಂದಿದೆ.

ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಲಾಕ್‍ಡೌನ್ ಜಾರಿಗೊಳಿಸಿದ್ದ ಪರಿಣಾಮ ರಾಜ್ಯದ ಜನರು ಆರ್ಥಿಕತೆ, ನಿರುದ್ಯೋಗ, ಆಹಾರ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಕಾಣಬೇಕಾಯಿತು. ಇದರೊಂದಿಗೆ ರಕ್ತದ ಕೊರತೆಯೂ ಎದುರಾಗಿದೆ. ರಾಜ್ಯ ಸರ್ಕಾರ ಮಾ.23 ರಿಂದ ಲಾಕ್‍ಡೌನ್ ಜಾರಿ ಮಾಡಿ ಎರಡು ತಿಂಗಳ ಕಾಲ 144 ಸೆಕ್ಷನ್ ವಿಧಿಸಿತು. ಪರಿಣಾಮ ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡುತ್ತಿದ್ದ ದಾನಿಗಳು ಮನೆ ಬಿಟ್ಟು ಬಂದಿಲ್ಲ.

ತಿಂಗಳಿಗೆ ಎರಡರಿಂದ ಮೂರು ರಕ್ತದಾನ ಶಿಬಿರಗಳನ್ನು ಮಾಡುತ್ತಿದ್ದ ಸಂಘ ಸಂಸ್ಥೆಗಳು ಕೂಡ ಶಿಬಿರ ಆಯೋಜಿಸಿದ ಕಾರಣ ರಕ್ತದ ಕೊರತೆ ಎದುರಾಗಿದೆ. ಕೋಲಾರ ಜಿಲ್ಲೆಯಲ್ಲಿ ಹದಿನಾರು ಲಕ್ಷ ಜನಸಂಖ್ಯೆ ಇದ್ದು, ವರ್ಷಕ್ಕೆ 16 ಸಾವಿರ ಯೂನಿಟ್ ರಕ್ತದ ಅಗತ್ಯವಿದೆ. ಸದ್ಯ ಜಿಲ್ಲೆಯಲ್ಲಿ ಕೊರೊನಾದಿಂದ ಕೇವಲ ನಾಲ್ಕರಿಂದ ಐದು ಸಾವಿರ ಯೂನಿಟ್ ನಷ್ಟು ಮಾತ್ರ ರಕ್ತ ಸಂಗ್ರಹವಾಗುತ್ತಿದೆ. ಶೇ.10 ರಿಂದ 20 ರಷ್ಟು ರಕ್ತದ ಕೊರತೆ ಜಿಲ್ಲೆಯಲ್ಲಿ ಕಂಡು ಬರುತ್ತಿದೆ.

ಜಿಲ್ಲಾಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟ ಮೇಲೆ ಜನರು ಸ್ವಯಂಪ್ರೇರಿತರಾಗಿ ಬಂದು ಆಸ್ಪತ್ರೆಯಲ್ಲಿ ರಕ್ತ ಕೊಡುವುದಕ್ಕೆ ಮುಂದೆ ಬರುತ್ತಿಲ್ಲ. ರಕ್ತದಾನ ಮಾಡಲು ಮುಂದೆ ಬಂದರೂ ಸಹ ಅವರ ದೇಹದ ಉಷ್ಣಾಂಶ ಮತ್ತು ಕೊರೊನಾ ಟೆಸ್ಟ್ ಮಾಡಬೇಕಾಗಿದ್ದು, ಸ್ವಯಂ ಪ್ರೇರಿತರು ಯಾರು ಸಹ ಧೈರ್ಯವಾಗಿ ಮುಂದೆ ಬಂದು ರಕ್ತದಾನ ಮಾಡುತ್ತಿಲ್ಲ. ಇದರಿಂದ ಜಿಲ್ಲಾಸ್ಪತ್ರೆಯಲ್ಲಿ ಕೂಡಾ ಪ್ರತಿನಿತ್ಯ ಅಗತ್ಯವಿರುವಷ್ಟು ರಕ್ತ ಸಿಗುತ್ತಿಲ್ಲ.

ತುರ್ತು ಸಂದರ್ಭಕ್ಕೆ ಬೆಂಗಳೂರಿನ ರೆಡ್ ಕ್ರಾಸ್, ಟಿಟಿಕೆ ಸಂಸ್ಥೆಗಳಿಂದ ರಕ್ತ ತರಿಸಿಕೊಳ್ಳಲಾಗುತ್ತಿದೆ. ಕೊರೊನಾದ ಭಯ ಬಿಟ್ಟು ಜನ ರಕ್ತದಾನ ಮಾಡಲು ಮುಂದೆ ಬರಲು ಜನರಲ್ಲಿ ಅರಿವು ಮೂಡಿಸುವುದು ಮತ್ತು ಸಂಘ ಸಂಸ್ಥೆಗಳ ಜೊತೆಗೆ ರಕ್ತದಾನ ಶಿಬಿರಗಳ ಆಯೋಜನೆ ಮಾಡಲು ಮುಂದೆ ಬಂದರೆ ರಕ್ತದ ಕೊರತೆ ನೀಗುತ್ತೆ ಎಂದು ಜಿಲ್ಲಾಸ್ಪತ್ರೆ ಡಿಎಸ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *