ಲಾಕ್‍ಡೌನ್‍ನಲ್ಲಿ ಅಬಕಾರಿ ಇಲಾಖೆಗೆ ಶೇ.10 ಲಾಭ ಹೆಚ್ಚಳ – ಗೋಪಾಲಯ್ಯ

Public TV
1 Min Read

ಬೆಂಗಳೂರು: ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಇಲಾಖೆ ಸಾಮಾನ್ಯ ದಿನಗಳಿಗಿಂತ ಶೇ.10 ರಷ್ಟು ಲಾಭ ಗಳಿಸಿದೆ ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ತಿಳಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ಶಾಸಕರ ಭವನದಲ್ಲಿ ಆಯೋಜನೆಗೊಂಡಿದ್ದ 18 ರಿಂದ 44 ವಯಸ್ಸಿನವರಿಗೆ 3 ದಿನಗಳ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

 

ಕೋವಿಡ್ ಲಾಕ್ ಡೌನ್ ಆದ ಮೇಲೆ ಏಪ್ರಿಲ್ 1 ರಿಂದ ಜೂನ್ 15 ರವರೆಗೆ ಅಬಕಾರಿ ಇಲಾಖೆಗೆ 4,500 ಕೋಟಿ ರೂ. ವರಮಾನ ಬಂದಿದೆ. ಸಾಮಾನ್ಯ ದಿನಗಳಿಗಿಂತ ಶೇ.10 ರಷ್ಟು ಹೆಚ್ಚು ಲಾಭ ಬಂದಂತಾಗಿದೆ ಎಂದು ಮಾಹಿತಿ ನೀಡಿದರು.

ಕೋವಿಡ್ 19 ನಿಂದ ಹಲವು ಸಮಸ್ಯೆ ಸೃಷ್ಟಿಯಾಗಿ ಆದಾಯಕ್ಕೆ ಸಮಸ್ಯೆ ಆಗಿದ್ದರೂ ಕಳೆದ ಹಣಕಾಸು ವರ್ಷದಲ್ಲೂ ಮದ್ಯ ಸರ್ಕಾರದ ಕೈ ಹಿಡಿದಿತ್ತು. ಇದನ್ನೂ ಓದಿ: ಅಧಿಕ ದರದಲ್ಲಿ ಮದ್ಯ ಮಾರಾಟ-ಗ್ರಾಮದಲ್ಲಿ ಡಂಗುರ ಸಾರಿದ ಮದ್ಯಪ್ರಿಯರು

2020-21ರ ಸಾಲಿನಲ್ಲಿ ಅಬಕಾರಿ ಇಲಾಖೆಗೆ 22,700 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆಯ ಗುರಿಯನ್ನು ನಿಗದಿ ಪಡಿಸಲಾಗಿತ್ತು. ಈ ಪೈಕಿ ಫೆಬ್ರವರಿ ಅಂತ್ಯಕ್ಕೆ 20,900 ಕೋಟಿ ರಾಜಸ್ವ ಸಂಗ್ರಹವಾಗಿದ್ದು, ನಿಗದಿತ ಗುರಿಯನ್ನು ಸಾಧಿಸಬಹುದು ಎಂಬ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ ಎಂದು ಯಡಿಯರೂಪ್ಪ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದರು.

2021-22ನೇ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಗೆ 24,580 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿ ಪಡಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *