ಲಟ್ಟಣಿಗೆಯಿಂದ ಹೊಡೆದು, ಕತ್ತು ಹಿಸುಕಿ ಪತ್ನಿಯನ್ನ ಕೊಂದ

Public TV
1 Min Read

– ಮಕ್ಕಳ ಮುಂದೆಯೇ ತಾಯಿಯ ಕೊಲೆ
– 4 ಮಕ್ಕಳ ತಾಯಿಯ ಜೊತೆ ಮತ್ತೆ ಮದ್ವೆ

ನವದೆಹಲಿ: ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಲಟ್ಟಣಿಗೆಯಿಂದ ಹೊಡೆದು ನಂತರ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ದೆಹಲಿಯ ಹರ್ಷ ವಿಹಾರ್‌ನಲ್ಲಿ ನಡೆದಿದೆ.

ಸಯಾಮಾ ಮೃತ ಮಹಿಳೆ. ಆರೋಪಿ ಪತಿ ಅಫ್ತಾಬ್ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

ಏನಿದು ಪ್ರಕರಣ?
ಸಯಾಮಾ ತನ್ನ ಕುಟುಂಬದೊಂದಿಗೆ ಹರ್ಷ ವಿಹಾರ್ ನ ಸಬೋಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈಗಾಗಲೇ ಮೃತ ಮಹಿಳೆಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದರು. ಮೊದಲನೇ ಪತಿ ಬಬುಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ನಂತರ ಒಂದೂವರೆ ವರ್ಷದ ಹಿಂದೆ ಆರೋಪಿ ಅಫ್ತಾಬ್ ಜೊತೆ ಸಯಾಮಾ ಮದುವೆಯಾಗಿದ್ದರು. ಅಫ್ತಾಬ್‍ಗೆ ಕೂಡ ಮದುವೆಯಾಗಿದ್ದು, ಮಕ್ಕಳಿದ್ದರು. ಆದರೂ ಸಯಾಮಾರನ್ನು ಎರಡನೇ ಮದುವೆಯಾಗಿದ್ದನು.

ಅಫ್ತಾಬ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಮೊದಲ ಪತಿ ಬಬುಲ್ ಸಾವಿನ ನಂತರ ಲಕ್ಷಾಂತರ ಹಣ ಸಯಾಮಾಗೆ ಪರಿಹಾರವಾಗಿ ಬಂದಿದೆ. ಅದಕ್ಕಾಗಿಯೇ ಅಫ್ತಾಬ್ ಅವಳನ್ನು ಮದುವೆಯಾದನು ಎಂದು ತಿಳಿದುಬಂದಿದೆ. ಮದುವೆಯಾದಾಗಿನಿಂದ ಅಫ್ತಾಬ್ ತನ್ನ ಹೆಂಡತಿಯ ನಡವಳಿಕೆಯ ಬಗ್ಗೆ ಅನುಮಾನ ಪಡುತ್ತಿದ್ದನು. ಈ ವಿಷಯದ ಬಗ್ಗೆ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು.

ಭಾನುವಾರ ಮಧ್ಯಾಹ್ನ ಎಲ್ಲರೂ ಮನೆಯಲ್ಲಿದ್ದರು. ಆಗ ಆರೋಪಿ ಅಫ್ತಾಬ್ ಮತ್ತೆ ಸಯಾಮಾ ಜೊತೆ ಜಗಳ ಶುರುಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಮಕ್ಕಳ ಮುಂದೆ ಅಫ್ತಾಬ್ ಪತ್ನಿಗೆ ಲಟ್ಟಣಿಗೆಯಿಂದ ಹೊಡೆದಿದ್ದಾನೆ.

ಈ ವೇಳೆ ಆರೋಪಿಯ ಮೊದಲ ಹೆಂಡತಿಯ ಮಕ್ಕಳು ಮನೆಯಲ್ಲಿದ್ದರು. ಇಬ್ಬರೂ ಸಹೋದರರು ತಮ್ಮ ತಂದೆಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಆರೋಪಿ ಮಕ್ಕಳ ಮಾತನ್ನು ಕೇಳಲಿಲ್ಲ. ಬಳಿಕ ಸಯಾಮಾರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊನೆಗೆ ಮನೆ ಮಾಲೀಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಆರೋಪಿ ಅಫ್ತಾಬ್ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *