ರೈತರು, ಸಾರಿಗೆ ನೌಕರರು ಆಯ್ತು – ಈಗ ಆಟೋ, ಟ್ಯಾಕ್ಸಿ ಚಾಲಕರಿಂದ ಪ್ರತಿಭಟನೆ

Public TV
2 Min Read

ಬೆಂಗಳೂರು: ರೈತರು, ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಈಗ ಆಟೋ, ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.

ತಿಂಗಳಿಗೊಮ್ಮೆ, ಎರಡೆರಡು ಬಾರಿ ಗ್ಯಾಸ್ ದರ ಏರಿಕೆಯಾಗುತ್ತಿದೆ. ಆದರೆ ಆಟೋ ಹಾಗೂ ಟ್ಯಾಕ್ಸಿಗಳ ಕನಿಷ್ಟ ಮೀಟರ್ ದರ ಮಾತ್ರ ಹೆಚ್ಚಳವಾಗುತ್ತಿಲ್ಲ. ಕೋವಿಡ್ ಬಂದ ಮೇಲೆ ವ್ಯಾಪಾರ ಫುಲ್ ಡಲ್ ಆಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ಈಗ ಚಾಲಕರು ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಈಗ ಕೇಂದ್ರ, ರಾಜ್ಯದ ಮುಂದೆ ಬೇಡಿಕೆಗಳ ಪಟ್ಟಿ ಸಿದ್ಧಪಡಿಸಿದ್ದಾರೆ.

ಕಳೆದ ನಾಲ್ಕು ತಿಂಗಳಲ್ಲಿ ಬರೋಬ್ಬರಿ 8 ರೂ.ವರೆಗೂ ಆಟೋ ಗ್ಯಾಸ್ ಬೆಲೆ ಬಹುತೇಕ ಏರಿಕೆಯಾಗಿದೆ. ಆದರೆ ಆಟೋ ಪ್ರಯಾಣ ದರ ಪರಿಷ್ಕರಣೆ ಆಗಿಲ್ಲ. ಸುಮಾರು ಐದು ವರ್ಷಗಳಿಂದ ಆಟೋ ಪ್ರಯಾಣ ದರ ಏರಿಕೆಯಾಗಿಲ್ಲ. ಆಟೋ ಹತ್ತಿದರೆ ಕನಿಷ್ಟ 25 ರೂ. ಕೊಡಬೇಕು. ಅದೇ ಕಿಮೀಗೆ 13 ರೂ. ಫಿಕ್ಸ್ ಆಗಿಬಿಟ್ಟಿದೆ. ಟ್ಯಾಕ್ಸಿ ಪ್ರಯಾಣ ದರ ಕಿ.ಮೀಗೆ 8.50ರೂ ಇದು ಟ್ಯಾಕ್ಸಿಗೆ ಕಿಮೀಗೆ 40 ರೂ. ಕೊಡಬೇಕಿದೆ.

ಎಲ್ಲ ಆಟೋ, ಟ್ಯಾಕ್ಸಿ ಚಾಲಕರ ಸಂಘಗಳ ಬೇಡಿಕೆ ಕುರಿತು ಸರ್ಕಾರಕ್ಕೆ ಸಲ್ಲಿಕೆ ಮಾಡಲು ಪ್ಲ್ಯಾನ್ ಇದೆ ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಆಟೋ ನಗರ ಘಟಕ ಅಧ್ಯಕ್ಷ ಜೈರಾಮ್ ತಿಳಿಸಿದರು. ಇದೇ ವೇಳೆ ಟ್ಯಾಕ್ಸಿ ಘಟಕ ಅಧ್ಯಕ್ಷ ವೇಣು ಮಾತನಾಡಿ, ಟ್ಯಾಕ್ಸಿ ಚಾಲಕರಿಗೂ ಅನ್ಯಾಯವಾಗುತ್ತಿರುವುದನ್ನ ಖಂಡಿಸಲು ಹೊರಾಟದ ದಾರಿ ಅನಿವಾರ್ಯ ಎಂದು ಹೇಳಿದ್ದಾರೆ.

ಬೇಡಿಕೆಗಳೇನು?
ಆಟೋ, ಟ್ಯಾಕ್ಸಿ ಮಿನಿಮಮ್ ದರ ಪರಿಷ್ಕರಣೆ ಮಾಡಬೇಕು. ಆಟೋ, ಟ್ಯಾಕ್ಸಿ ಚಾಲಕರಿಗೆ ಬೆಲೆ ಏರಿಕೆ ಹೊಡೆತ ಬೀಳದಂತೆ ನಿಗಾ ಇಡಬೇಕು. ಉಜ್ವಲ ಯೋಜನೆಯಲ್ಲಿ ಮನೆ ಅಡುಗೆ ಸಿಲಿಂಡರ್ ಸಬ್ಸಿಡಿ ಕೊಡುವಂತೆ ಆಟೋ ಗ್ಯಾಸ್‍ಗೂ ಸಬ್ಸಿಡಿ ಕೊಡಬೇಕು. ಕಮರ್ಷಿಯಲ್ ವೆಹಿಕಲ್‍ಗಳ ಸಂಚಾರಕ್ಕೆ ಸಬ್ಸಿಡಿ ತೈಲ ಕೊಡಬೇಕು. ಇಲ್ಲವಾದರೆ ಪ್ರಯಾಣದ ಮಿನಿಮಮ್ ದರ ಪರಿಷ್ಕರಣೆಗೆ ಕಮಿಟಿ ರಚನೆ ಮಾಡಬೇಕು. ಚಾಲಕರ ಹಿತರಕ್ಷಣೆ ದೃಷ್ಟಿಯಲ್ಲಿ ಪ್ರತಿ ಒಂದು ವರ್ಷಕ್ಕೊಮ್ಮೆ ಪ್ರಯಾಣ ದರ ಹಾಗೂ ತೈಲ ದರ ವೆಚ್ಚದ ಕುರಿತು ವರದಿ ನೀಡಲು ತಂಡ ರಚಿಸಬೇಕು.

ಯಾವೆಲ್ಲ ಸಂಘಟನೆಗಳ ಬೆಂಬಲ?
ಜಯ ಕರ್ನಾಟಕ ಜನಪರ ವೇದಿಕೆ, ಕರ್ನಾಟಕ ಚಾಲಕರ ಒಕ್ಕೂಟ, ಕರ್ನಾಟಕ ರಾಜ್ಯ ವಾಹನ ಚಾಲಕರು ಮತ್ತು ಮಾಲೀಕರ ಸಂಘ, ಜನಸೇವಾ ವಾಹನ ಚಾಲಕರ ವೇದಿಕೆ, ಹೊಯ್ಸಳ ಸಾರಥಿ ಸೇನೆ, ಸುವರ್ಣ ಸಾರಥಿ ಸೇನೆ, ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್, ಕರ್ನಾಟಕ ಚಾಲಕರ ಯುವ ಸೇನೆ, ಕರ್ನಾಟಕ ಚಾಲಕರ ಕಾರ್ಯಕಾರಿ ಸಮಿತಿ.

Share This Article
Leave a Comment

Leave a Reply

Your email address will not be published. Required fields are marked *