ರೈತರ ಸಾಲಮನ್ನಾ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಹೆಚ್‍ಡಿಕೆ

Public TV
1 Min Read

ಬೆಂಗಳೂರು: ರೈತರ ಸಾಲ ಮನ್ನಾ ಮಾಡಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದು, ರೈತರ ಸಾಲ ಮನ್ನಾ ಮಾಡುವ ಬದಲು ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಿದ್ದರೆ ಮಹಿಳೆಯರು ಜೆಡಿಎಸ್ ಕೈ ಹಿಡಿಯುತ್ತಿದ್ದರು ಎಂದು ತಿಳಿಸಿದರು.

ನಗರದ ಪಕ್ಷದ ಕಚೇರಿ ಆವರಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಮಾಡಿದ್ದಕ್ಕೆ ರೈತರಿಗೆ ಅನುಕೂಲವಾಯಿತು. ಆದರೆ ರೈತರು ನಮ್ಮನ್ನು ನೆನೆಯಲಿಲ್ಲ. ರೈತರ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವ ಬದಲು, ಸ್ತ್ರೀ ಶಕ್ತಿ ಸಂಘಗಳದ್ದು ಕೇವಲ 1 ಸಾವಿರ ಕೋಟಿ ರೂ. ಮಾತ್ರ ಇತ್ತು. ಇದನ್ನು ಮನ್ನಾ ಮಾಡಿದ್ದರೆ ಬಹುಷಃ ಎಲ್ಲ ಮಹಿಳೆಯರು ನನ್ನ ಜೊತೆ ನಿಲ್ಲುತ್ತಿದ್ದರೆನೋ ಎಂದು ಬೇಸರ ವ್ಯಕ್ತಡಪಸಿದರು.

ಹೋದ ಕಡೆಯಲ್ಲೆಲ್ಲ ನನಗೆ 1.50, 2 ಲಕ್ಷ ಸಾಲ ಮನ್ನಾ ಆಗಿದೆ ಎಂದು ಹೋದ ಕಡೆಯಲ್ಲೆಲ್ಲ ಹೇಳುತ್ತಾರೆ. ಆದರೆ ಮತ ಹಾಕುವಾಗ ಮಾತ್ರ ಜೆಡಿಎಸ್ ಪಕ್ಷವನ್ನು ಮರೆಯುತ್ತಾರೆ. ಇದೀಗ ಹಲೆವೆ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಹೀಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಾಲ ಮನ್ನಾ ಮಾಡಿದೆ. ಆದರೆ ರೈತರು ಮಾತ್ರ ನಮಗೆ ಮತ ಹಾಕಲಿಲ್ಲ ಎಂದರು.

ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ರೈತರ ಕುಟುಂಬಗಳಿಗೆ 50 ಸಾವಿರ, 1 ಲಕ್ಷ ರೂ. ಪರಿಹಾರವನ್ನು ಪಕ್ಷದಿಂದ ನೀಡಿದೆವು. ಚುನಾವಣೆ ಸಂದರ್ಭದಲ್ಲಿ ನೀಡುವ 5 ಸಾವಿರ ರೂ.ಗೆ ಮತ ಹಾಕುತ್ತಾರೆ. ಆದರೆ ರೈತರ ಕುಟುಂಬ ಕಷ್ಟದಲ್ಲಿದೆ ಎಂದು ಪರಿಹಾರ ನೀಡಿದರೆ ನಮಗೆ ಮತ ಹಾಕಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *