ರೈತರ ಪ್ರತಿಭಟನೆ, ಸೆಲೆಬ್ರಿಟಿಗಳ ಟ್ವೀಟ್ – ತನಿಖೆಗೆ ಮುಂದಾದ ‘ಮಹಾ’ ಸರ್ಕಾರ

Public TV
2 Min Read

ಮುಂಬೈ: ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ-ವಿರೋಧದ ಕುರಿತು ಬಾಲಿವುಡ್ ತಾರೆಯರು ಪರ-ವಿರೋಧವಾಗಿ ಟ್ವೀಟ್ ಮಾಡುತ್ತಿದ್ದಾರೆ. ಈ ಟ್ವೀಟ್ ಸಂಬಂಧ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಒತ್ತಡದಲ್ಲಿ ಸಿಲುಕಿ ಬಾಲಿವುಡ್ ಮಂದಿ ಟ್ವೀಟ್ ಮಾಡುತ್ತಿದ್ದಾರೆಯೇ ಎಂಬುದರ ಬಗ್ಗೆ ಸರ್ಕಾರ ತನಿಖೆ ನಡೆಸಲು ಮುಂದಾಗಿದೆ.

ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಈ ಕುರಿತು ತನಿಖೆ ನಡೆಸಲು ಆದೇಶಿಸಿದ್ದಾರೆ. ಸಚಿವರ ಆದೇಶದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗಳು ಆರಂಭಗೊಂಡಿವೆ. ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಸಹ ಟ್ವೀಟ್ ಗಳ ಬಗ್ಗೆ ಸಂದೇಹ ಹೊರಹಾಕಿದ್ದಾರೆ. ಅಕ್ಷಯ್ ಕುಮಾರ್, ಸಚಿನ್ ತೆಂಡಲ್ಕೂರ್, ಕಂಗನಾ ರಣಾವತ್, ವಿರಾಟ್ ಕೊಹ್ಲಿ, ಲತಾ ಮಂಗೇಶ್ಕರ್, ಅಜಯ್ ದೇವಗನ್ ಸೇರಿದಂತೆ ಹಲವರು ಮಾಡಿರುವ ಟ್ವೀಟ್ ಗಳ ಬಗ್ಗೆ ತನಿಖೆ ನಡೆಯಲಿದೆ ಎಂದು ವರದಿಯಾಗಿದೆ.

ಫಡ್ನವೀಸ್ ಕಿಡಿ: ಇದು ಅಘಾಡಿ ಸರ್ಕಾರದ ಅಸಹ್ಯಕರ ನಡೆ. ತನಿಖೆಗೆ ಆದೇಶ ನೀಡಿದವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ. ಭಾರತ ರತ್ನ ಗೌರವ ಪುರಸ್ಕೃತರ ವಿರುದ್ಧದ ತನಿಖೆ ಆದೇಶ ನೀಡುವುದು ನಾಚಿಕಗೇಡಿನ ಕೆಲಸ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಕಿಡಿ ಕಾರಿದ್ದಾರೆ. ಇನ್ನು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಟ್ವೀಟ್ ಮಾಡಿದ್ದು, ಮಹಾರಾಷ್ಟ್ರದಲ್ಲಿ ದೇಶಭಕ್ತಿ ಅಪರಾಧವಾಯ್ತಾ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಚಿನ್ ತೆಂಡಲ್ಕೂರ್, ಲತಾ ಮಂಗೇಶ್ಕರ್ ಅವರ ದಿಕ್ಕು ತಪ್ಪಿಸಲಾಗುತ್ತಿದೆ. ಈ ವಿಷಯದ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಸಲಾಗುವುದು. ರೈತರ ಪ್ರತಿಭಟನೆಯನ್ನ ಸಮರ್ಥಿಸಿಕೊಂಡಿದ್ದ 18 ವರ್ಷದ ಯುವತಿಯನ್ನ(ಗ್ರೇಟಾ ಥನಬರ್ಗ್) ಇಷ್ಟು ದ್ವೇಷದಿಂದ ಕಾಣಲಾಗ್ತಿದೆ. ನಮ್ಮ ದೇಶ ಇಷ್ಟು ದುರ್ಬಲವಾಯಿತೇ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಪ್ರಶ್ನಿಸಿದ್ದಾರೆ.

ಪಾಪ್ ಗಾಯಕಿ ರಿಹಾನಾರ ಟ್ವೀಟ್ ಬಳಿಕ ವಿದೇಶ ಸಚಿವಾಲಯ ಸ್ಪಷ್ಟನೆ ನೀಡಿದ ಬಳಿಕ ಸೆಲೆಬ್ರಿಟಿಗಳು ದಿಢೀರ ಅಂತ ಟ್ವೀಟ್ ಮಾಡಲಾರಂಭಿಸಿದ್ರು. ವ್ಯಕ್ತಿ ಅಥವಾ ಸೆಲೆಬ್ರಿಟಿ ತಮ್ಮ ಅಭಿಪ್ರಾಯವನ್ನ ಹಂಚಿಕೊಳ್ಳೋದು ತಪ್ಪಲ್ಲ ಮತ್ತು ಅದಕ್ಕೆ ನಮ್ಮ ವಿರೋಧ ಇಲ್ಲ. ಆದ್ರೆ ಈ ಟ್ವೀಟ್ ಸಿರೀಸ್ ಹಿಂದೆ ಬಿಜೆಪಿಯ ಹಸ್ತಕ್ಷೇಪವಿದೆ ಎಂಬುವುದು ನಮ್ಮ ಸಂದೇಹ. ಎಲ್ಲರ ಟ್ವೀಟ್ ಗಳು ಒಂದೇ ಧ್ವನಿಯಲ್ಲಿದ್ದು, ಜೊತೆಯಗಿ ಚರ್ಚಿಸಿ ಟ್ವೀಟ್ ಮಾಡಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಒಂದು ವೇಳೆ ಬಿಜೆಪಿ ನಾಯಕರ ಭಯದಿಂದ ಟ್ವೀಟ್ ಮಾಡಿದ್ರೆ ಅಂತಹವರಿಗೆ ಮಹಾರಾಷ್ಟ್ರ ಸರ್ಕಾರ ಭದ್ರತೆ ¨ನೀಡಲಿದೆ ಎಂದು ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *