ರೈತರು ಧ್ವಜಾರೋಹಣ ಮಾಡಬಾರದೆಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗ್ಬೇಕು: ಚಂದ್ರಶೇಖರ್

Public TV
1 Min Read

ಬೆಂಗಳೂರು: ರೈತರು ಧ್ವಜಾರೋಹಣ ಮಾಡಬಾರದು ಎಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗಬೇಕು. ನೈಸ್ ರೋಡ್ ಜಂಕ್ಷನ್ ನಿಂದ ರಾಷ್ಟ್ರ ಬಾವುಟವನ್ನು ಹಿಡಿದು ರ್ಯಾಲಿ ಆರಂಭ ಮಾಡುತ್ತೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯಿದೆಯನ್ನು ವಿರೋಧಿಸಿ ಇಂದು ಬೆಂಗಳೂರಿನಲ್ಲಿ ರೈತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಮುಂಜಾನೆ ಕೋಲಾರದಿಂದ ಬೆಂಗಳೂರಿಗೆ ಬರುತ್ತಿದ್ದ ಟ್ರ್ಯಾಕ್ಟರ್‍ಗಳನ್ನು ಪೊಲೀಸರು ಅಡ್ಡ ಹಾಕಿ ವಶಪಡಿಸಿಕೊಂಡಿದ್ದಾರೆ. ಹೀಗಾಗಿ ರ್ಯಾಲಿಯಲ್ಲಿ ಕೆಲವು ರೈತರು ಭಾಗಿಯಾಗಿದ್ದರೆ, ಇನ್ನೂ ಕೆಲ ರೈತರು ಹೆದ್ದಾರಿ, ಟೋಲ್ ಗಳಲ್ಲಿಯೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಕುರಿತಂತೆ ಮಾತನಾಡಿದ ಕೋಡಿಹಳ್ಳಿ, ಸರ್ಕಾರ, ರೈತರ ಸ್ವಾಭಿಮಾನವನ್ನ ಕೆರಳಿಸುತ್ತಿದೆ. ರೈತರ ಚಳುವಳಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ರೈತರು ಧ್ವಜಾರೋಹಣ ಮಾಡಬಾರದು ಎಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗಬೇಕು. ನೈಸ್ ರೋಡ್ ಜಂಕ್ಷನ್ ನಿಂದ ರಾಷ್ಟ್ರ ಬಾವುಟವನ್ನು ಹಿಡಿದು ರ್ಯಾಲಿ ಆರಂಭ ಮಾಡುತ್ತೇವೆ. ಜೊತೆಗೆ ಟೋಲ್, ಹೆದ್ದಾರಿಗಳಲ್ಲಿಯೂ ಹೋರಾಟದ ತೀವ್ರತೆ ಹೆಚ್ಚಾಗಿರುತ್ತದೆ. ರೈತರ ವಾಹನಗಳನ್ನ ತಡೆಯಲು ಸರ್ಕಾರ ಪೊಲೀಸರ ಸರ್ಪಗಾವಲು ಹಾಕಿದೆ. ಎಲ್ಲಾ ಚೆಕ್ ಪೋಸ್ಟ್, ಟೋಲ್ ಗಳಲ್ಲಿ ರೈತರನ್ನ ಪೊಲೀಸರು ತಡೆಯುತ್ತಿದ್ದಾರೆ. ಆದರೆ ಟ್ರ್ಯಾಕ್ಟರ್, ಎತ್ತಿನ ಗಾಡಿಯನ್ನು ಪೊಲೀಸರು ತಡೆದರು ಇತರೆ ವಾಹನಗಳ ಮೂಲಕ ರೈತರು ಬೆಂಗಳೂರಿಗೆ ಬರುತ್ತಿದ್ದಾರೆ.

ಇಂದು ರೈತರೆಲ್ಲರೂ ಸೇರಿ ವಿಧಾನಸೌಧಕ್ಕೆ ನುಗ್ಗುವ (ಮುತ್ತಿಗೆ) ಹಾಕುವ ಪ್ರಯತ್ನ ನಡೆಸಲಾಗುತ್ತದೆ. ಆದರೆ ಪ್ರಯತ್ನದಲ್ಲಿ ಕೆಲ ಬದಲಾವಣೆಗಳು ಆಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *