ರೈತರಿಂದ ಈರುಳ್ಳಿ, ಟೊಮೇಟೋ, ಕುಂಬಳಕಾಯಿ ಖರೀದಿಸಿದ ಉಪೇಂದ್ರ

Public TV
2 Min Read

ಬೆಂಗಳೂರು: ಕೊರೊನ ಬಿಕ್ಕಟ್ಟಿನ ವೇಳೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿರುವ ಸೂಪರ್ ಸ್ಟಾರ್ ಉಪೇಂದ್ರ ಅವರು ರೈತರ ಬಳಿ ಟೊಮೇಟೋ ಖರೀದಿಸಿದ ಬಳಿಕ ಇದೀಗ ಈರುಳ್ಳಿ, ಸಿಹಿ ಕುಂಬಳಕಾಯಿಯನ್ನು ಖರೀದಿ ಮಾಡಿ ಅಗತ್ಯ ಇರುವವರಿಗೆ ಹಂಚುತ್ತಿದ್ದಾರೆ.

ಮಂಜುನಾಥ್ ಬಿ. ಸಿ. ಅವರಿಂದ 3,640 ಕೆ.ಜಿ ಸಿಹಿ ಕುಂಬಳಕಾಯಿ 23,000 ರೂಪಾಯಿಗೆ ನೀಡಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯಹಸ್ತ ಚಾಚಿದ್ದಾರೆ. ಈರುಳ್ಳಿ 3 ಸಾವಿರ ಕೇಜಿ ಮತ್ತು ಸಾರಿಗೆ ವೆಚ್ಚ ಸೇರಿ 37,000 ರೂ ಗೆ ತಂದು ಹಂಚುವುದರಲ್ಲೂ ಸಹಾಯ ಮಾಡಿದ ರೈತರು ಮಹೇಶ್ ಹಿರಿಯೂರು ಮತ್ತು ಸಂಗಡಿಗರು. ನಂದೀಶ್ ರವರು 150 ಬಾಕ್ಸ್ ನೀರಿನ ಬಾಟಲ್ ( ಒಂದು ಬಾಕ್ಸ್ ನಲ್ಲಿ 12 ಬಾಟಲ್ ) 1800 ನೀರಿನ ಬಾಟಲ್ ನೀಡಿರುತ್ತಾರೆ. ನಾಳೆ ಇದನ್ನು ವಿತರಿಸಲಾಗುತ್ತದೆ ಧನ್ಯವಾದಗಳು ಎಂದು ಉಪೇಂದ್ರ ಅವರು ಟ್ವೀಟ್ ಮಾಡಿದ್ದಾರೆ.

ಲಾಕ್ ಡೌನ್ ನಿಂದಾಗಿ ಮಾರಾಟ ಮಾಡಲಾಗದೇ ಕಣದಲ್ಲೇ ಕೊಳೆತು ಹೋಗುತ್ತಿದ್ದ ಚಿತ್ರದುರ್ಗದ ರೈತ ಬೆಳೆದಿದ್ದ ಈರುಳ್ಳಿಯನ್ನು ಚಿತ್ರನಟ ಉಪೇಂದ್ರ ಖರೀದಿಸಿ ಮಾನವೀಯತೆ ಮೆರೆದಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಪಟ್ರೆಹಳ್ಳಿ ಗ್ರಾಮದ ಯುವರೈತ ಮಹೇಶ ಎನ್ನುವವರು 70ಚೀಲ ಈರುಳ್ಳಿ ಬೆಳೆದಿದ್ದರು. ಆದರೆ ಕೊರೊನ ಮಹಾಮಾರಿಯ ಆರ್ಭಟದಿಂದಾಗಿ ದಿಡೀರ್ ಅಂತ ಲಾಕ್‍ಡೌನ್ ಆದ ಪರಿಣಾಮ ಉತ್ತಮ ಬೆಲೆ ಸಿಗಲಾರದೇ ಈರುಳ್ಳಿಯನ್ನು ಮಾರಾಟ ಮಾಡದೇ ಕಣದಲ್ಲಿ ಚೀಲಕ್ಕೆ ತುಂಬಿ ಹಾಗೆಯೇ ಬಿಟ್ಟಿದ್ದರು. ಪರಿಣಾಮ ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಹಂತ ಹಂತವಾಗಿ ಏರಿಕೆಯಾದರು ಸಹ ಕೊಳ್ಳುವ ವ್ಯಾಪಾರಿಗಳಿಲ್ಲದೇ ಈರುಳ್ಳಿಯನ್ನು ಮಾರಾಟ ಮಾಡಿರಲಿಲ್ಲ.

ಲಾಕ್‍ಡೌನ್ ಕಾರಣ ಸಂಪಾದನೆ ಇಲ್ಲದೇ ಕೂತಿರುವ ರೈತರ ಹಾಗೂ ಬಡವರ ಪಾಲಿಗೆ ನಟ ಉಪೇಂದ್ರ ನೆರವಿಗೆ ನಿಂತಿದ್ದಾರೆ. ಹೀಗಾಗಿ ರೈತರ ಬಳಿ ನೇರವಾಗಿ ಬೆಳೆಯನ್ನು ಖರೀದಿ ಅಗತ್ಯ ಇರುವವರಿಗೆ ಹಂಚಿಕೆ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *